‘ಆಯುರ್ಭುವಿ’ ಔಷಧೀಯ ಗಿಡ ನೆಟ್ಟ ಸದಸ್ಯರು
ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಮಂಚಿ ಸರ್ಕಾರಿ ಹಿರಿಯ ಪಾಥಮಿಕ ಶಾಲೆಯಲ್ಲಿ ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ವತಿಯಿಂದ ‘ನಮ್ಮ ಆದ್ಯತೆ ನಮ್ಮ ಸ್ವಚ್ಛತೆ ಮತ್ತು ತಿಂಗಳಲ್ಲಿ ಒಂದು ದಿನ’ ಯೋಜನೆಯಡಿ ಭಾನುವಾರ ನಡೆದ ಶ್ರಮದಾನ ಕಾರ್ಯಕ್ರಮದಲ್ಲಿ ಸಂಘದ ಸದಸ್ಯರು ಶಾಲೆಯ ವಠಾರ ಸ್ವಚ್ಚತೆಗೊಳಿಸಿ ‘ಆಯುರ್ಭುವಿ’ ಹೆಸರಿನಲ್ಲಿ ವಿವಿಧ ಔಷಧೀಯ ಗಿಡಗಳನ್ನು ನೆಟ್ಟು ತಡೆಬೇಲಿ ನಿರ್ಮಿಸಿ ಕೊಡುವ ಮೂಲಕ ಗಮನ ಸೆಳೆದರು.
ಇದೇ ವೇಳೆ ಶಾಲೆಯ ಕುರ್ಚಿ ಬೆಂಚುಗಳ ದುರಸ್ತಿ, ಪೈಪ್ ಲೈನ್ ದುರಸ್ತಿ, ವಿದ್ಯುತ್ ಸಂಪರ್ಕ ಮತ್ತಿತರ ಕೆಲಸಗಳನ್ನು ಸಂಘದ ವತಿಯಿಂದ ನಡೆಸಿಕೊಟ್ಟರು.

ಸಂಘದ ಅಧ್ಯಕ್ಷ ಪ್ರಕಾಶ್ ಅಂಚನ್ ಮಾತನಾಡಿ, ಮಿಜಾರು ಆಳ್ವಾಸ್ ಶೋಭಾವನದಿಂದ ಸಂಗ್ರಹಿಸಿದ ವಿವಿಧ ಔಷಧೀಯ ಗಿಡಗಳನ್ನು ಇಲ್ಲಿನ ಗ್ರಾಮೀಣ ಮಕ್ಕಳಿಗೆ ಪರಿಚಯಿಸುವ ನಿಟ್ಟಿನಲ್ಲಿ ನಿರ್ವಾಹಕ ಮುತ್ತಪ್ಪ ಬಿ.ಕೆ.ನೇತೃತ್ವದಲ್ಲಿ ಪ್ರತ್ಯೇಕ ಆವರಣ ಬೇಲಿ ಮತ್ತು ನಾಮಫಲಕ ಸಹಿತ ಗಿಡಗಳನ್ನು ನೆಡಲಾಗಿದೆ ಎಂದರು.
ಈಗಾಗಲೇ ರಾಯಿ, ದಡ್ಡಲಕಾಡು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ತಲಾ ರೂ 50ಸಾವಿರ ವೆಚ್ಚದಲ್ಲಿ ಶ್ರಮದಾನ ನಡೆಸಲಾಗಿದ್ದು, ಬಡ ವಿದ್ಯಾರ್ಥಿಗಳನ್ನು ದತ್ತು ಸ್ವೀಕರಿಸಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಏಕರೂಪ ಶಿಕ್ಷಣ ನೀಡುವ ಬಗ್ಗೆ ಜಾಗೃತಿ ಅಭಿಯಾನ ಕೈಗೊಂಡಿದೆ ಎಂದು ತಿಳಿಸಿದರು.
ಕರೆಂಕಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ರಾಮಚಂದ್ರ ಶೆಟ್ಟಿ ದಂಡೆ, ಮುಖ್ಯ ಶಿಕ್ಷಕಿ ರೋಹಿಣಿ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಮೊಯ್ದಿನ್, ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ಕೇಶವ ಭಟ್ ಮತ್ತಿತರರು ಸಹಕರಿಸಿದರು.
ಸಂಘದ ಪ್ರಮುಖರಾದ ಪುರುಷೋತ್ತಮ ಅಂಚನ್, ವಿನೋದ್ ಕುಮಾರ್, ನವೀನ್ ಸೇಸಗುರಿ, ಯಶೋಧರ ನಾಯ್ಕ, ರಾಮಚಂದ್ರ ಪೂಜಾರಿ, ತುಕರಾಮ, ರಮೇಶ್ ಕುಲಾಲ್, ಆನಂದ, ಗಂಗಾಧರ, ಗಣೇಶ ಗೌಡ, ನೋಣಯ್ಯ ಪೂಜಾರಿ ಮತ್ತಿತರರು ಶ್ರಮದಾನದಲ್ಲಿ ಪಾಲ್ಗೊಂಡರು.
