ಪ್ರತಿಭಾ ಕಾರಂಜಿ ಮಕ್ಕಳ ಹಬ್ಬವಾಗಲಿ: ಕ್ಯಾ.ಗಣೇಶ್ ಕಾರ್ಣಿಕ್
ಮೂಡುಬಿದರೆ: ಪ್ರತಿಭೆ, ಶಕ್ತಿಯಿದ್ದರೂ ನಮಗೆ ಪರಿವೆಯಿರುವುದಿಲ್ಲ. ಅದನ್ನು ಅರಿತು, ಅರ್ಥೈಸಿ, ಅವಕಾಶಗಳೊಂದಿಗೆ ಅದನ್ನು ಅನಾವರಣಗೊಳಿಸಿದರೆ ಪ್ರತಿಭೆ ಅರಳುತ್ತದೆ. ಪ್ರತಿಭಾ ಕಾರಂಜಿ ಮಕ್ಕಳಿಗೊಂದು ಉತ್ತಮ ಅವಕಾಶ. ಪ್ರತಿಭಾ ಕಾರಂಜಿಯನ್ನು ಮಕ್ಕಳ ಹಬ್ಬವೆಂದು ಮರುನಾಮಕರಣ ಮಾಡಬೇಕು ಎಂದು ವಿಧಾನಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ ಹೇಳಿದರು.
ದ.ಕ ಜಿಲ್ಲಾ ಪಂಚಾಯಿತಿ ಸಾರ್ವಜನಿಕ ಶಿಕ್ಷಣ ಇಲಾಖೆ, ಮೂಡುಬಿದರೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆಶ್ರಯದಲ್ಲಿ 2 ದಿನಗಳ ಕಾಲ ಕಲ್ಲಬೆಟ್ಟುವಿನ ಎಕ್ಸಲೆಂಟ್ ಪ್ರೌಢ ಶಾಲೆ ನಡೆದ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಪ್ರತಿಭಾ ಕಾರಂಜಿಯ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಂತರ್ಜಾಲದಲ್ಲಿ ಹೆಚ್ಚು ಕಾಲಹರಣ ಮಾಡದೆ ಅಂತರಂಗವನ್ನು ಅರಿಯುವ ಪ್ರಯತ್ನ ವಿದ್ಯಾರ್ಥಿ ಹಾಗೂ ಯುವಕರಿಂದಾಗಬೇಕು. ಗುರಿಯ ಸ್ಪಷ್ಟತೆ, ಹಿರಿಯ ಮಾರ್ಗದರ್ಶನ ಪ್ರತಿಭೆಯಿರಬೇಕು ಎಂದರು.
ಬಹುಮಾನ ವಿಜೇತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ತಾ.ಪಂ ಅಧ್ಯಕ್ಷೆ ರಜನಿ, ಸದಸ್ಯ ಪ್ರಕಾಶ್, ಎಕ್ಸಲೆಂಟ್ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್, ಕ್ಷೇತ್ರ ಶಿಕ್ಷಣಾಧಿಕಾರಿ ಗೋವಿಂದ ಮಡಿವಾಳ್, ಎಕ್ಸಲೆಂಟ್ ಕಾಲೇಜಿನ ಆಡಳಿತಾಧಿಕಾರಿ ಡಾ.ಶ್ರುತಕೀರ್ತಿರಾಜ್, ಪ್ರಾಂಶುಪಾಲ ಸುರೇಶ್ ಬಾಬು, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾಗೇಶ್ ಪಿ., ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ನವೀನ್ ಅಂಬೂರಿ ಉಪಸ್ಥಿತರಿದ್ದರು. ಎಕ್ಸಲೆಂಟ್ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಪ್ರದೀಪ್ ಅಂಚನ್ ಸ್ವಾಗತಿಸಿದರು. ನಿತೇಶ್ ಬಲ್ಲಾಳ್ ಕಾರ್ಯಕ್ರಮ ನಿರೂಪಿಸಿದರು. ಪ್ರತಿಭಾ ಕಾರಂಜಿ ವಲಯ ನೊಡೆಲ್ ಅಧಿಕಾರಿ ಶಿವಾನಂದ ಕಾಯ್ಕಿಣಿ ವಂದಿಸಿದರು.
