ಬಂಟ್ವಾಳ:ಜಿಲ್ಲೆಯ ಜೀವನದಿ ನೇತ್ರಾವತಿ ನದಿ ತಿರುವುಗೊಳಿಸುವ ಮೂಲಕ ನದಿಯನ್ನು ಬರಡುಗೊಳಿಸುವ ‘ಎತ್ತಿನಹೊಳೆ ಯೋಜನೆ’ ವಿರುದ್ಧ ಈಗಾಗಲೇ ಭಾರೀ ಪ್ರತಿಭಟನೆ ನಡೆಸಿದ ಇಲ್ಲಿನ ಸಾಮಾಜಿಕ ನ್ಯಾಯಪರ ಹೋರಾಟ ಸಮಿತಿ ಮತ್ತೆ ‘ಮಾಹಿತಿ ಹಕ್ಕು’ ಕಾನೂನಿನಡಿ ಜನಾಂದೋಲನಕ್ಕೆ ಸಕಲ ಸಿದ್ಧತೆ ನಡೆಸುತ್ತಿದೆ. ಮಾಹಿತಿ ಹಕ್ಕು ಮೂಲಕ ಜಿಲ್ಲೆಯ ಶಾಸಕರು ಎಲ್ಲಾ ಶಾಸಕರು ಮತ್ತು ಸಂಸದರನ್ನು ಪ್ರಶ್ನಿಸುವ ಮೂಲಕ ಸರಕಾರದ ಗಮನ ಸೆಳೆಯುವುದಾಗಿ ಸಮಿತಿ ಅಧ್ಯಕ್ಷ ಕೃಷ್ಣ ಅಲ್ಲಿಪಾದೆ ತಿಳಿಸಿದ್ದಾರೆ.
ಗ್ರಾಮ ಮಟ್ಟದಲ್ಲಿ ಚಾಲನೆ:
ಮಾಹಿತಿ ಹಕ್ಕು ಮೂಲಕ ಬಂಟ್ವಾಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ 84 ಗ್ರಾಮಗಳಿಗೂ ಭೇಟಿ ನೀಡಿ ಜನಜಾಗೃತಿ ಮೂಡಿಸುವುದರ ಜೊತೆಗೆ ಪ್ರತೀ ಗ್ರಾಮ ಪಂಚಾಯಿತಿನಲ್ಲಿ ಈ ಯೋಜನೆ ವಿರುದ್ಧ ನಿರ್ಣಯ ಕೈಗೊಳ್ಳಲು ಆಗ್ರಹಿಸಲಾಗುತ್ತದೆ. ಪ್ರತೀ ಪಂಚಾಯಿತಿ ಬಳಿ ಪ್ರತಿಭಟನೆ ನಡೆಸಲು ಅಲ್ಲಿನ ವಿವಿಧ ಸಂಘ ಸಂಸ್ಥೆಗಳ ಸಹಕಾರ ಪಡೆಯಲಾಗುತ್ತದೆ ಎಂದಿದ್ದಾರೆ.
ನಾಳೆ ಬಿ.ಸಿ.ರೋಡಿನಲ್ಲಿ ಸಭೆ:
ಎತ್ತಿನಹೊಳೆ ಯೋಜನೆ ವಿರುದ್ಧ ನಡೆಸಲಾಗುವ ಜನಾಂದೋಲನಕ್ಕೆ ಸಂಬಂಧಿಸಿದಂತೆ ಇದೇ 22ರಂದು ಬೆಳಿಗ್ಗೆ 10ಗಂಟೆಗೆ ಬಿ.ಸಿ.ರೋಡಿನ ಪದ್ಮಾ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಮಾಹಿತಿ ಹಕ್ಕು ಕಾರ್ಯಕರ್ತ ಎಚ್.ಸುಂದರ ರಾವ್ ಮತ್ತಿತರರು ಭಾಗವಹಿಸುವರು ಎಂದು ಸಮಿತಿ ಮುಖಂಡ ಪ್ರಭಾಕರ ದೈವಗುಡ್ಡೆ ತಿಳಿಸಿದ್ದಾರೆ.
–
