ಬಂಟ್ವಾಳ: ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರ್ಪಡೆಗೊಳಿಸುವಲ್ಲಿ ಹೆತ್ತವರು ಕೀಳರಿಮೆ ಪಡಬೇಕಾಗಿಲ್ಲ, ಕನ್ನಡ ಮಾಧ್ಯಮದಲ್ಲೇ ಕಲಿತು ಸಾಧನೆ ಮಾಡಿದ ಸಾಧಕರೇ ನಮಗೆ ಆದರ್ಶ ಪ್ರಾಯರಾಗಬೇಕು ಎಂದು ಪತ್ರಕರ್ತ ಗೋಪಾಲ ಅಂಚನ್ ಅಭಿಪ್ರಾಯ ಪಟ್ಟರು.
ಸರ್ಕಾರಿ ಕನ್ನಡ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಆಂಗ್ಲಮಾಧ್ಯಮ ಶಾಲೆಯಿಂದ ಕನ್ನಡ ಮಾಧ್ಯಮ ಶಾಲೆಗೆ ವಿದ್ಯಾರ್ಥಿಗಳನ್ನು ಕರೆತರುವ ವಿಶಿಷ್ಟ ಶೈಕ್ಷಣಿಕ ಕ್ರಾಂತಿಗೆ ಮುನ್ನುಡಿ ಬರೆದ ಬಂಟ್ವಾಳ ತಾಲೂಕಿನ ಮೂಡುಡುಗೋಡು ಗ್ರಾಮದ ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಗಣೇಶ ಚತುರ್ಥಿಯ ಪ್ರಯುಕ್ತ ಹಮ್ಮಿಕೊಂಡಿದ್ದ 8ನೇ ವರ್ಷದ ಕ್ರೀಡೋತ್ಸವ ಹಾಗೂ ವೆಬ್ಸೈಟ್ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರಿ ಶಾಲೆ ಉಳಿಯಬೇಕೆನ್ನುವ ದೃಷ್ಟಿಯಿಂದ ಫ್ರೆಂಡ್ಸ್ ಕ್ಲಬ್ ಇಟ್ಟಿರುವ ದಿಟ್ಟ ಹೆಜ್ಜೆ ಶ್ಲಾಘನೀಯ ಎಂದ ಅವರು, ಇತರ ಸಂಘ ಸಂಸ್ಥೆಗಳಿಗೂ ಇದು ಮಾದರಿಯಾಗಿದೆ ಎಂದರು. ಸಾಮಾಜಿಕ ಮನೋಭಾವದಿಂದ ತೊಡಗಿಸಿಕೊಂಡಿರುವ ಯುವಕರ ಕಳಕಳಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ನೇತ್ರಾವತಿ ನದಿ ತಿರುವಿನಂತಹಾ ಪರಿಸರ ವಿರೋಧಿ ಯೋಜನೆಗೂ ಬಿಸಿ ಮುಟ್ಟಿಸುವ ನಿಟ್ಟಿನಲ್ಲಿ ಕ್ಲಬ್ ಜಾಗೃತವಾಗುವಂತೆ ಅವರು ಕರೆ ನೀಡಿದರು.
ಬಂಟ್ವಾಳ ತಾ.ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮೌನೇಶ್ ವಿಶ್ವಕರ್ಮ ನೂತನ ವೆಬ್ಸೈಟನ್ನು ಲೋಕಾರ್ಪಣೆಗೊಳಿಸಿದರು. ಬಳಿಕ ಮಾತನಾಡಿದ ಅವರು, ಸರ್ಕಾರಿ ಶಾಲೆಗಳಿಗೆ ಪುನಶ್ಚೇತನ ನೀಡುವ ನಿಟ್ಟಿನಲ್ಲಿ ಕ್ಲಬ್ ಕೈಗೊಂಡಿರುವ ಆಂದೋಲನ ಶಿಕ್ಷಣ ಇಲಾಖೆಗೆ ಚುರುಕುಮುಟ್ಟಿಸಿದೆ. ಗ್ರಾಮಗ್ರಾಮಗಳಲ್ಲಿಯೂ ಇಂತಹಾ ಜಾಗೃತಿ ಮೂಡಿದಾಗ ಸಮಾನ ಶಿಕ್ಷಣದಂತಹಾ ಆಶಯ ಈಡೇರಲು ಸಾಧ್ಯ ಎಂದರು. ನೂತನ ವೆಬ್ ಸೈಟ್ ನ ಮೂಲಕ ದುರ್ಗಾಫ್ರೆಂಡ್ಸ್ ನ ಕಾರ್ಯಚಟುವಟಿಕೆಗಳು ಜಗತ್ತಿಗೆ ತಿಳಿಯಲಿ ಎಂದವರು ಹಾರೈಸಿದರು.
ಇದೇ ಸಂದರ್ಭ ಆರೋಗ್ಯ ರಕ್ಷಾ ಕವಚ ಅಂಬ್ಯುಲೆನ್ಸ್ನ ಸಿಬ್ಬಂದಿಗಳಾದ ವಿನಯ್ ಎ.ಎನ್ ಹಾಗೂ ಜಯಕುಮಾರ್ ಬೆಳ್ತಂಗಡಿ ಅವರನ್ನು ಗೌರವಿಸಲಾಯಿತು.
ದುರ್ಗಾ ಫ್ರೆಂಡ್ಸ್ನ ಮಾಧ್ಯಮ ಸಲಹೆ ಸಂದೀಪ್ ಸಾಲ್ಯಾನ್, ಕಿಶೋರ್ ಪೆರಾಜೆ, ದುರ್ಗಾ ಫ್ರೆಂಡ್ಸ್ ಸರ್ಕಲ್ನ ಅಧ್ಯಕ್ಷ ಪ್ರಕಾಶ್ ಅಂಚನ್, ಕಾರ್ಯದರ್ಶಿ ನವೀನ್ ಸೇಸಗುರಿ, ಕೋಶಾಧಿಕಾರಿ ವಿನೋದ್ ಕುಮಾರ್, ಯಶೋಧರ ನಾಯಕ್, ವಿಠಲ ಡಿ. ದಡ್ಡಲಕಾಡು, ಪಂಚಾಯತ್ ಸದಸ್ಯರಾದ ಪೂವಪ್ಪ ಮೆಂಡನ್, ಸಂಜೀವ ಪೂಜಾರಿ, ರೂಪಶ್ರೀ, ಲೋಕನಾಥ, ಕೆಶವಗೌಡ, ಲಕ್ಷ್ಮೀನಾರಾಯಣ ಗೌಡ, ಕ್ಲಬ್ಬಿನ ಸದಸ್ಯರಾದ ಶೇಖರ ಅಂಚನ್, ಮ್ಯಾಕ್ಸಿಂ ಸಿಕ್ವೇರಾ, ದಯಾನಂದ ಕುಲಾಲ್, ಶಿವಪ್ರಸಾದ್, ಸೀತಾರಾಮ, ಬಾಲಕೃಷ್ಣ ಗೌಡ, ರಾಮಚಂದ್ರ, ಸುನೀಲ್ ಹಾಜರಿದ್ದರು.
ಆನಂದ ನಾಯಕ್ ಸ್ವಾಗತಿಸಿ, ಪುರುಷೋತ್ತಮ ಅಂಚನ್ ನಿರೂಪಿಸಿದರು.
