ಬಂಟ್ವಾಳ: ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ಪ್ರತ್ಯೇಕ ರೋಡ್ ಶೋ ಏಕಕಾಲದಲ್ಲಿ ಸೋಮವಾರ ಸಂಜೆ ಬಿ.ಸಿ.ರೋಡಿನಲ್ಲಿ ನಡೆದಿದೆ. ಮೆಲ್ಕಾರ್ನಿಂದ ಕಾಂಗ್ರೆಸ್ ಹಾಗೂ ಬಿ.ಸಿ.ರೋಡು ಕೈಕಂಬದಿಂದ ಬಿಜೆಪಿಯ ಪಾದಾಯಾತ್ರೆ ಆರಂಭಗೊಂಡಿದ್ದು ಇನ್ನೇನು ಬಿ.ಸಿ.ರೋಡಿನ ಮುಖ್ಯವೃತ್ತದ ಬಳಿ ಪರಸ್ಪರ ಮುಖಾಮುಖಿಯಾಗುತ್ತದೆ ಎನ್ನುವಷ್ಟರಲ್ಲೇ ಮುಂದಾಗಬಹುದಾದ ಅಪಾಯದ ಬಗ್ಗೆ ಮೊದಲೇ ಎಚ್ಚೆತ್ತುಕೊಂಡ ಚುನಾವಣೆ ಅಧಿಕಾರಿಗಳು ಕಾಂಗ್ರೆಸ್ ಪಾದಯಾತ್ರೆಯನ್ನು ಗೂಡಿನ ಬಳಿ ಬಳಿ ತಡೆದಿದ್ದು ಬಿಜೆಪಿಯ ಪಾದಾಯಾತ್ರೆ ಬಂಟ್ವಾಳ ಪೇಟೆಯತ್ತ ಸಾಗಿದ ಬಳಿಕ ಬಿ.ಸಿ.ರೋಡಿನತ್ತ ಬರಲು ಅವಕಾಶ ಮಾಡಿಕೊಟ್ಟಿದ್ದಾರೆ. ಇದರಿಂದಾಗಿ ಬಿಜೆಪಿಯ ಮೆರವಣಿಗೆ ಮುಖ್ಯವೃತ್ತ ದಾಟಿ ಬಂಟ್ವಾಳ ಪ್ರವೇಶಿಸಿದೆ ಕೆಲ ಹೊತ್ತಿನಲ್ಲಿಯೇ ಕಾಂಗ್ರೆಸ್ ಮೆರವಣಿಗೆಗೆ ಪಾಣೆಮಂಗಳೂರು ಪೇಟೆ ರಸ್ತೆಯ ಮೂಲಕ ಬಿ.ಸಿ.ರೋಡು ಎಂಟ್ರಿ ಪಡೆಯಿತು.
ಕಾಂಗ್ರೆಸ್ ಮೆರವಣಿಗೆ:
ರಾಜ್ಯ ಅರಣ್ಯ ಸಚಿವ ಬಿ.ರಮನಾಥ ರೈ ನೇತೃತ್ವದಲ್ಲಿ ಪಕ್ಷದ ನಾಯಕರು ಹಾಗೂ ನೂರಾರು ಕಾರ್ಯಕರ್ತರು ರೋಡ್ ಶೋನಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಜನಾರ್ದನ ಪೂಜಾರಿ ಪರವಾಗಿ ಮತಯಾಚಿಸಿದರು. ಪಕ್ಷದ ಅಭ್ಯರ್ಥಿ ಜಯಕಾರ ಹಾಕುತ್ತಾ ಸಾರ್ವಜನಿಕರತ್ತ ಕೈ ಬೀಸುತ್ತಾ ರಾಜರಸ್ತೆಯಲ್ಲಿ ಹೆಜ್ಜೆ ಹಾಕಿದರು. ಮೆಲ್ಕಾರ್ನಲ್ಲಿ ಆರಂಭಗೊಂಡ ಮೆರವಣಿಗೆ ಪಾಣೆಮಂಗಳೂರು, ಗೂಡಿನ ಬಳಿಯ ಮೂಲಕ ಬಿ.ಸಿ.ರೋಡಿಗೆ ಆಗಮಿಸಿ ಕೈಕಂಬದ ಪೂಂಜಾ ಮೈದಾನದಲ್ಲಿ ಸಂಪನ್ನ ಗೊಂಡಿತು.
ಪಕ್ಷದ ಪ್ರಮುಖರಾದ ಚಂದ್ರಪ್ರಕಾಶ್ ಶೆಟ್ಟಿ, ಮಾಯಿಲಪ್ಪ ಸಾಲ್ಯಾನ್, ಅಬ್ಬಾಸ್ ಅಲಿ, ಮಮತಾಗಟ್ಟಿ, ಪಿಯೂಸ್ ರೋಡ್ರಿಗಸ್, ಪದ್ಮಶೇಖರ್ ಜೈನ್, ಸಂಜೀವ ಪೂಜಾರಿ, ಸದಾಶಿವ ಬಂಗೇರಾ, ಹರಿಕೃಷ್ಣ ಬಂಟ್ವಾಳ, ಬಿ.ಎಚ್. ಖಾದರ್, ಮಧುಸೂದನ್ ಶೆಣೈ, ಮಹಮ್ಮದ್ ಶರೀಫ್, ರಾಜಶೇಖರ ನಾಯಕ್, ಮಾಧವ ಮಾವೆ ಪದ್ಮನಾಭ ರೈ, ಯೂಸುಫ್ ಕರಂದಾಡಿ, ಪ್ರಭಾಕರ ಪ್ರಭು, ವಸಂತಿ ಚಂದಪ್ಪ, ಯಾಸ್ಮೀನ್ ಮತ್ತಿತರರು ಹಾಜರಿದ್ದರು. ಕಾಸರಗೋಡಿಕ ಕಾಂಗ್ರೆಸ್ ಅಭ್ಯರ್ಥಿ ಸಿದ್ದೀಕ್ ಪಾದಯಾತ್ರೆಯಲ್ಲಿ ಬಾಗವಹಿಸದ್ದು ವಿಶೇಷ ಗಮನ ಸೆಳೆಯಿತು.
ಚಿತ್ರ ಕಿಶೋರ್ ಪೆರಾಜೆ



