ಮೂಡುಬಿದರೆ: ಜನರು ಭ್ರಷ್ಟಾಚಾರವನ್ನೇ ಶಿಷ್ಟಚಾರವೆಂದು ನಂಬಿರುವುದು ದುರಂತ. ಮಕ್ಕಳಲ್ಲಿ ಭ್ರಷ್ಟಾಚಾರದ ವಿರುದ್ಧದ ಮನಸ್ಸನ್ನು ಜಾಗೃತಗೊಳಿಸುವ ಪ್ರಯತ್ನ ಹಿರಿಯರಿಂದಾಗಬೇಕು. ಭ್ರಷ್ಟಾಚಾರ ಮುಕ್ತವಾಗಿಸುವ ಸಂಕಲ್ಪವಿರಬೇಕು ಎಂದು ಶ್ರೀ ಕ್ಷೇತ್ರ ಕೇಮಾರು ಸಾಂದೀಪನೀ ಸಾಧನಾಶ್ರಮದ ಈಶ ವಿಠಲದಾಸ ಸ್ವಾಮೀಜಿ ನುಡಿದರು.
ಮೂಡುಬಿದರೆ ಸಮಾಜಮಂದಿರದಲ್ಲಿ, ಭ್ರಷ್ಟಾಚಾರ ವಿರೋಧ ಜಾಗೃತ ಸೇವಾದಳವನ್ನು ದಸ್ತಾವೇಜು ಬಿಡುಗಡೆಗೊಳಿಸುವ ಮೂಲಕ ಉದ್ಘಾಟಿಸಿ, ಆಶೀರ್ವಚನ ನೀಡಿದರು.

ಮಂಗಳೂರು ಚೊಕ್ಕಬೆಟ್ಟು ಎಂ.ಜೆ.ಎಂನ ಧರ್ಮಗುರು ಮೌಲಾನ ಯು.ಕೆ ಅಬ್ದುಲ್ ದಾರಿಮಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಾ, ಭ್ರಷ್ಟಾಚಾರದ ವಿಚಾರ ಸಣ್ಣದಲ್ಲ. ಜಗತ್ತಿನಲ್ಲಿರುವ ಅತಿ ದೊಡ್ಡ ದಬ್ಬಾಳಿಕೆ ಭ್ರಷ್ಟಾಚಾರ. ಆಡಳಿತ ಸುವ್ಯವಸ್ಥೆಗಿರುವ ಮತದಾನದಿಂದಲೇ ಭ್ರಷ್ಟಾಚಾರ ಹೆಚ್ಚಿನ ಪ್ರಮಾಣದಲ್ಲಿ ಆಗುತ್ತಿರುವುದು ವಿಪರ್ಯಸ. ಎಷ್ಟೇ ಕಠಿಣ ಕಾನೂನು ಇದ್ದರೂ ಭ್ರಷ್ಟಾಚಾರ ನುಸುಳುತ್ತದೆ. ನಾಗರಿಕ ಪ್ರಜ್ಞೆಯಿಂದ ಮಾತ್ರ ಅದನ್ನು ನಿರ್ಮೂಲನೆ ಮಾಡಬಹುದು. ಮನೋಸ್ಥಿತಿ ಬದಲಾದರೆ ಭ್ರಷ್ಟಾಚಾರದ ವಿರೋಧ ಜಾಗೃತ ದಳ ಅಸ್ತಿತ್ವಕ್ಕೆವ್ಯವಸ್ಥೆ ಬದಲಾಗುತ್ತದೆ.
ಪುತ್ತೂರಿನ ಕ್ರೈಸ್ತ ಕಾನೂನು ಸಲಹೆಗಾರರು ರೆ.ಫಾ ಫ್ರಾನ್ಸಿಸ್ ಅಸಿಸ್ ಡಿ’ ಅಲ್ಮೆಡಾ ಅಧ್ಯಕ್ಷತೆ ವಹಿಸಿ ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು. ಭ್ರಷ್ಟಾಚಾರ ವಿರುದ್ಧ ಹೋರಾಟ ನಡೆಸುವ ಸಂಸ್ಥೆಗಳು ಇತರರ ದಬ್ಬಾಳಿಕೆ ಮಾಡಬಾರದು. ಕಾನೂನಿನ ಚೌಕಟ್ಟಿನಲ್ಲೇ ಭ್ರಷ್ಟರನ್ನು ಸಮಾಜ ಮುಂದೆ ತರಬೇಕು ಎಂದರು.
ಸೇವಾದಳ ಅಧ್ಯಕ್ಷ ಪ್ರವೀಣ್ ಆರ್.ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ನಾರಾಯಣ ಕಡಲಕೆರೆ ಸಹಿತ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಹರಿಪ್ರಸಾದ್ ನಾಯಕ್ ಸ್ವಾಗತಿಸಿದರು. ಜಗನ್ನಾಥ್ ಕೊಣಾಜೆ ಕಾರ್ಯಕ್ರಮ ನಿರೂಪಿಸಿದರು. ಜೊತೆ ಕಾರ್ಯದರ್ಶಿ ಪದ್ಮನಾಭ ಶೆಟ್ಟಿ ವಂದಿಸಿದರು.
