ಮೂಡುಬಿದರೆ: ಜನರು ನಮ್ಮನ್ನು ಮುನ್ನಡೆಸುತ್ತಿದ್ದಾರೆ. ಜನರ ವಿಶ್ವಾಸ, ಕಾರ್ಯಕರ್ತರ ಉತ್ಸಾಹ, ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಅವಿರತ ಶ್ರಮದ ಫಲವೇ ಪಂಚಾಯತ್ನಲ್ಲಿ ನಮ್ಮ ಗೆಲುವಿಗೆ ಕಾರಣವಾಗಿದೆ. ಮುಂದಿನ ವಿಧಾನ ಸಭಾ ಚುನಾವಣೆ ಬಿಜೆಪಿ ಪಾಲಾಗಲಿದ್ದು ಅಧಿಕಾರದ ಚುಕ್ಕಾಣಿಯನ್ನು ಹಿಡಿಯಲು ಸ್ಪಷ್ಟ ಸಂದೇಶವನ್ನು ಈ ಬಾರಿಯ ಪಂಚಾಯತ್ ಫಲಿತಾಂಶ ನೀಡಿದೆ ಎಂದು ದ.ಕ ಜಿಲ್ಲಾ ಬಿಜೆಪಿ ಸಮಿತಿ ಅಧ್ಯಕ್ಷ ಪ್ರತಾಪ್ ಸಿಂಹ ನಾಯಕ್ ಹೇಳಿದರು.
ಅವರು ಸಮಾಜ ಮಂದಿರ ಸಭಾದ ಸ್ವರ್ಣ ಮಂದಿರದಲ್ಲಿ ಬಿಜೆಪಿ ಪುತ್ತಿಗೆ ಶಕ್ತಿ ಕೇಂದ್ರದ ವತಿಯಿಂದ ಪುತ್ತಿಗೆ ಶಕ್ತಿ ಕೇಂದ್ರದ ವ್ಯಾಪ್ತಿಯ ಗ್ರಾ.ಪಂ.ಗಳಲ್ಲಿ ವಿಜೇತ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಹಾಗೂ ಕಾರ್ಯಕರ್ತರಿಗೆ ಶುಕ್ರವಾರ ಸಂಜೆ ನಡೆದ ಅಭಿನಂದನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಅಧಿಕಾರ ಬಂದಾಗ ಅಹಂಕಾರ ತೋರಿಸಿದರೆ ಸೋಲು ಖಂಡಿತ. ಗೆಲುವನ್ನು ವಿನಮ್ರವಾಗಿ ಸ್ವೀಕರಿಸಿ ಜನರ ಸೇವೆ ಮಾಡಿದರೆ ಮುಂದೆಯೂ ಗೆಲುವು ಸಾಧ್ಯ. ಮೂಲ್ಕಿ ಮೂಡುಬಿದಿರೆ ಕ್ಷೇತ್ರದ ಶಾಸಕರ ದರ್ಪ ಅಧಿಕಾರದಲ್ಲಿ ಅಹಂಕಾರವನ್ನು ತೋರಿಸುತ್ತದೆ. ಈ ಕ್ಷೇತ್ರದಲ್ಲಿ ಜನರು ಬಿಜೆಪಿಯ ಅಭ್ಯರ್ಥಿಯನ್ನೇ ಶಾಸಕನನ್ನಾಗಿ ಮಾಡಲಿದ್ದಾರೆ ಎಂದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಉಮಾನಾಥ ಕೋಟ್ಯಾನ್, ಬಿಜೆಪಿ ಮೂಡುಬಿದಿರೆ ಮಂಡಲದ ಕಾರ್ಯದರ್ಶಿ ನಾಗರಾಜ ಪೂಜಾರಿ, ನಗರ ಶಕ್ತಿ ಕೇಂದ್ರ ಅಧ್ಯಕ್ಷ ಲಕ್ಷ್ಮಣ್ ಪೂಜಾರಿ, ಮೂಡುಬಿದರೆ ಪುರಸಭಾ ಸದಸ್ಯ ಬಾಹುಬಲಿ ಪ್ರಸಾದ್, ರಾಜ್ಯ ಪರಿಷತ್ ಸದಸ್ಯ ಕೆ.ಆರ್ ಪಂಡಿತ್, ಬಿಜೆಪಿ ಮುಖಂಡರಾದ ಸುದರ್ಶನ ಎಂ, ಕೃಷ್ಣರಾಜ ಹೆಗ್ಡೆ, ಶಾಂತಿ ಪ್ರಸಾದ್ ಹೆಗ್ಡೆ, ಕಸ್ತೂರಿ ಪಂಜ, ದೇವಿ ಪ್ರಸಾದ್ ಶೆಟ್ಟಿ, ದೇವ ಪ್ರಸಾದ್ ಪುನರೂರು, ಹರೀಶ್ ಎಂ.ಕೆ ಉಪಸ್ಥಿತರಿದ್ದರು.
ತೋಡಾರಿನ ಅಬ್ದುಲ್ ರಜಾಕ್ ಬಿಜೆಪಿಗೆ ಸೇರ್ಪಡೆಗೊಂಡರು.
ಪುತ್ತಿಗೆ ಶಕ್ತಿ ಕೇಂದ್ರದ ಅಧ್ಯಕ್ಷ ಅಜಯ್ ರೈ ಸ್ವಾಗತಿಸಿದರು. ಬಿಜೆಪಿ ಮೂಡುಬಿದಿರೆ ಕ್ಷೇತ್ರಾಧ್ಯಕ್ಷ ಕೆ.ಪಿ ಸುಚರಿತ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೋಪಾಲ ಶೆಟ್ಟಿಗಾರ ಕಾರ್ಯಕ್ರಮ ನಿರೂಪಿಸಿದರು. ಪುತ್ತಿಗೆ ಶಕ್ತಿ ಕೇಂದ್ರದ ಕಾರ್ಯದರ್ಶಿ ನಾಗವರ್ಮ ಜೈನ್ ವಂದಿಸಿದರು.
