ಮುಂಬಯಿ, ಮೇ.25: ಅಂಧೇರಿ ಪೂರ್ವದ ಬಾಪ್ಟಿಸ್ಟ್ಟವಾಡಿ ಶ್ರೀ ದತ್ತ ಜಗದಂಬಾ ಮಂದಿರದ ಶ್ರೀ ಮಹಾಗಣಪತಿ ಮತ್ತು ದತ್ತ ಜಗದಂಬಾ ದೇವರುಗಳ ಪುನರ್ ಪ್ರತಿಷ್ಠೆ ಇಂದು ಮೇ.26ನೇ ಮಂಗಳವಾರ ದಿಂದ ಮೊದಲ್ಗೊಂಡು ಬರುವ 29ನೇ ಶುಕ್ರವಾರ ತನಕ ಅದ್ದೂರಿಯಿಂದ ನೇರವೇರಿಸಲ್ಪಡುವುದು ಎಂದು ಶ್ರೀ ಕ್ಷೇತ್ರ ದತ್ತ ಜಗದಂಬಾ ದೇವಸ್ಥಾನ ಸಮಿತಿ ಅಧ್ಯಕ್ಷ ದಯಾನಂದ ಅಂಚನ್ ತಿಳಿಸಿದ್ದಾರೆ.
ಶ್ರೀ ಮಹೇಶ್ ಶಾಂತಿ ಹೆಜ್ಮಾಡಿ ಪೌರೋಹಿತ್ಯದಲ್ಲಿ ಮೇ.26ನೇ ಮಂಗಳವಾರ ಬೆಳಗ್ಗೆ ಗಂಟೆ 5.05 ರಿಂದ ದೇವತಾ ಪ್ರಾರ್ಥನೆ, ಆಲಯ ಪರಿಗ್ರಹ, ಆಚಾರ್ಯವರ್ಣಕ್ರಿಯೇ, ನಾಂದಿ, ತೋರಣ ಮುಹೂರ್ತ, ಆದ್ಯಗಣಹೋಮ, ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಪುನರ್ ಪ್ರತಿಷ್ಠಾ ಮಹೋತ್ಸವ ಆರಂಭ ಗೊಳ್ಳಲಿದೆ. ಮೇ.27ನೇ ಬುಧವಾರ ಬೆಳಿಗ್ಗೆ ಶಾಂತಿ ಹೋಮಾದಿಗಳು, ಸುದರ್ಶನ ಹೋಮ, ಸಂಜೆ ಶಕ್ತಿಪೂಜೆ, ಮಂಡಲ ರಚನೆ, ಕಲಶಾಧಿವಾಸ ಪೂಜೆ ಇತ್ಯಾದಿಗಳನ್ನು ನೆರವೇರಿಸಲಾಗುವುದು.
ಮೇ.28ನೇ ಗುರುವಾರ ಬೆಳಿಗ್ಗೆ ಅಷ್ಟದ್ರವ್ಯ ಗಣಹೋಮ, ನವಕ ಪ್ರಧಾನ ಹೋಮ, ಪುನರ್ ಪ್ರತಿಷ್ಠೆ, ಮಹಾಕುಂಬಾಭಿಷೇಕ, ಅಲಂಕಾರ ಸೇವೆ, ದುರ್ಗಾ ಹೋಮ, ಮಹಾಮಂಗಳಾರತಿ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನೆರವೇರಲಿದೆ. ಸಂಜೆ 5.00 ಗಂಟೆಯಿಂದ ಯಕ್ಷಪ್ರಿಯ ಬಳಗ ಮೀರಾ ಭಯಂದರ್ ಬಳಗವು ಮುಂಬಯಿಯ ನುರಿತ ಕಲಾವಿದರ ಕೂಡುವಿಕೆಯಲ್ಲಿ `ದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಲಿದೆ.
ಮೇ.29ನೇ ಶುಕ್ರವಾರ ಸಂಜೆ 5.00 ಗಂಟೆಯಿಂದ ಬಾಲ ಕಲಾವಿದರು `ಭರತ ನಾಟ್ಯ’ ಹಾಗೂ `ಕೋರ್ದಬ್ಬು ತನ್ನಿಮಾನಿಗ’ ತುಳು ಯಕ್ಷಗಾನ ಬಯಲಾಟ ಪ್ರದರ್ಶಿಸಲಿದ್ದಾರೆ. ಬಳಿಕ ಶ್ರೀ ಕ್ಷೇತ್ರ ದತ್ತ ಜಗದಂಬಾ ದೇವಸ್ಥಾನ ಸಮಿತಿ ಅಧ್ಯಕ್ಷ ದಯಾನಂದ ಅಂಚನ್ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾಕಾರ್ಯಕ್ರಮ ನಡೆಯಲಿದ್ದು ಬೋರಿವಿಲಿ ಲೋಕಸಭಾ ಕ್ಷೇತ್ರದ ಸಂಸದ ಗೋಪಾಲ ಸಿ.ಶೆಟ್ಟಿ ಆಗಮಿಸಿ ಸಭಾಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಗಾಂವ್ದೇವಿ ಅಂಬಿಕಾ ಆದಿನೇಶ್ವರ ಮಹಾ ಗಣಪಯಿ ದೇವಸ್ಥಾನ ವಿದ್ಯಾವಿಹಾರ ಇದರ ಪ್ರಧಾನ ಅರ್ಚಕ ವಿದ್ವಾನ್ ಪೆರ್ಣಂಕಿಲ ಹರಿದಾಸ್ ಭಟ್ ಅವರು ಆಶೀರ್ವಚನ ನೀಡಲಿದ್ದಾರೆ. ಸ್ಥಾನೀಯ ಶಾಸಕ, ಶಿವಸೇನಾ ನೇತಾರ ರಮೇಶ್ ಲಾಟ್ಕೆ, ದಿವ್ಯಸಾಗರ್ ಸಮೂಹದ ಆಡಳಿತ ನಿರ್ದೇಶಕ ದಿವಾಕರ್ ಶೆಟ್ಟಿ ಮುದ್ರಾಡಿ, ಬಂಟ್ಸ್ ಸಂಘ ಮುಂಬಯಿ ಇದರ ಸಾಂಸ್ಕೃತಿಕ ಮತ್ತು ಸಾಹಿತ್ಯ ಸಮಿತಿ ಕಾರ್ಯಧ್ಯಕ್ಷ ರವೀಂದ್ರನಾಥ ಭಂಡಾರಿ, ಈಕ್ವೀಟಿ ಹೊಟೇಲ್ಸ್ ಪ್ರೈವೇಟ್ ಲಿಮಿಟೆಡ್ನ ಕಾರ್ಯಧ್ಯಕ್ಷ ಗೋಪಾಲ್ ಎಸ್.ಪುತ್ರನ್, ಕ್ಲಾಸಿಕ್ ಹೊಟೇಲ್ಸ್ನ ಮಾಲಿಕ ಸುರೇಶ್ ಆರ್.ಕಾಂಚನ್, ಕೋಟ್ಯಾನ್ ಮೇನ್ಸ್ ವೇರ್ನ ಮಾಲೀಕ ಹರೀಶ್ ಆರ್.ಕೋಟ್ಯಾನ್, ಶಿವಾ’ಸ್ ಹೇರ್ ಡಿಝೈನರ್ಸ್ ಪ್ರೈವೇಟ್ ಲಿಮಿಟೆಡ್ನ ಆಡಳಿತ ನಿರ್ದೇಶಕ ಡಾ| ಶಿವರಾಮ್ ಕೆ.ಭಂಡಾರಿ ಅತ್ತೂರು, ಸಾಲಿಟೇರ್ ಡೆವಲಪರ್ಸ್ನ ಮಾಲಿಕ ಯಶವಂತ್ ಶೆಟ್ಟಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ದೇವಸ್ಥಾನ ಸಮಿತಿಯ ಉಪಾಧ್ಯಕ್ಷ ಶೇಖರ್ ಎಂ.ಅಂಚನ್ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾದ್ಯಕ್ಷ ಸುರೇಂದ್ರ ಕುಮಾರ್ ಹೆಗ್ಡೆ ತಿಳಿಸಿದ್ದಾರೆ.
ಆ ಪ್ರಯುಕ್ತ ಮಹಾನಗರದಲ್ಲಿನ ಸಮಸ್ತ ಭಕ್ತ ಮಹಾಶಯರೆಲ್ಲರೂ ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ತನು-ಮನ-ಧನಗಳಿಂದ ಸಹಕರಿಸಿ, ಗಂಧ-ಪ್ರಸಾದವನ್ನು ಸ್ವೀಕರಿಸಿ, ಶ್ರೀದೇವರುಗಳ ಕೃಪೆಗೆ ಪಾತ್ರರಾಗಲು ಕಾರ್ಯದಶರ್ಿ ಯಶವಂತ್ ಅಮೀನ್ ಮತ್ತು ಕೋಶಾಧಿಕಾರಿ ಚಂದ್ರಕಾಂತ್ ಶ್ರೀಯಾನ್ ಈ ಮೂಲಕ ವಿನಂತಿಸಿದ್ದಾರೆ.

