ಮಂಗಳೂರು: ಶ್ರೀ ಮಂಗಳಾ ಗಣೇಶ್ ಕಂಬೈನ್ಸ್ ಬ್ಯಾನರಿನಡಿಯಲ್ಲಿ ಮೂಡಿ ಬಂದಿರುವ `ಒರಿಯನ್ ತೂಂಡ ಒರಿಯಗಾಪುಜಿ’ ತುಳು ಹಾಸ್ಯಪ್ರಧಾನ ಚಲನಚಿತ್ರ ಮೇ 15 ರಂದು ತೆರೆ ಕಾಣಲಿದೆ.
ಒರಿಯನ್ ತೂಂಡ ಒರಿಯಗಾಪುಜಿ’ ತುಳು ಚಲನಚಿತ್ರ ಇದುವರೆಗೆ ತೆರೆ ಕಂಡಿರುವ ಚಿತ್ರಗಳಿಗಿಂತ ವಿಭಿನ್ನವಾಗಿದ್ದು, ಹಾಸ್ಯದೊಂದಿಗೆ ಪ್ರಸ್ತುತ ಸಮಾಜದಲ್ಲಿ ನಡೆಯುವ ವ್ಯಾವಹಾರಿಕ ದ್ವೇಷ, ಅಸೂಯೆಗಳು, ಅದಕ್ಕಾಗಿ ನಡೆಯುವ ಸಮರವನ್ನು ಬಿಂಬಿಸಲಾಗಿದೆ ಎಂದು `ಒರಿಯನ್ ತೂಂಡ ಒರಿಯಗಾಪುಜಿ’ ಚಲನಚಿತ್ರದ ನಿರ್ಮಾಪಕ ಎ.ಗಂಗಾಧರ ಶೆಟ್ಟಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಈ ಚಿತ್ರದ ವಿಶೇಷವೆಂದರೆ ತಮಿಳು, ಕನ್ನಡದ ಜತೆಗೆ ತುಳು ಭಾಷೆಯ ಹಾಸ್ಯ ಪಾತ್ರಗಳಿದ್ದು, ಅದನ್ನು ತುಳು ಮತ್ತು ಕನ್ನಡ ಚಿತ್ರರಂಗದ ಪ್ರಬುದ್ಧ ಕಲಾವಿದರು ನಿರ್ವಹಿಸಿದ್ದಾರೆ. ಅದರ ಮೂಲಕ ಚಿತ್ರದುದ್ದಕ್ಕೂ ಹಾಸ್ಯದ ಹೊಳೆಯನ್ನೇ ಹರಿಸಲಾಗಿದೆ. ಕ್ಷಣ ಕ್ಷಣದಲ್ಲೂ ರೋಮಾಂಚಕ ಸನ್ನಿವೇಶಗಳು ಎದುರಾಗಲಿದೆ ಎಂದು ಅವರು ವಿವರಿಸಿದರು.
`ಒರಿಯನ್ ತೂಂಡ ಒರಿಯಗಾಪುಜಿ’ ತುಳು ಚಿತ್ರವನ್ನು ಮಂಗಳೂರು ಸುತ್ತಮುತ್ತಲು, ಕಾಞಂಗಾಡಿನಲ್ಲಿ ಚಿತ್ರೀಕರಣ ಮಾಡಲಾಗಿದೆ. ಚಿತ್ರದಲ್ಲಿ ಆರು ಹಾಡುಗಳಿದ್ದು, ಅವುಗಳನ್ನು ಪಿಲಿಕುಳ, ಕಾಞಂಗಾಡ್ ಹಾಗೂ ಮಂಗಳೂರಿನ ಕೆಲವು ವಿಶೇಷ ಪ್ರಕೃತಿಯ ರಮಣೀಯ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ ಎಂದು ಚಿತ್ರದ ನಿರ್ದೇಶಕ ಹ.ಸೂ.ರಾಜಶೇಖರ್ ಈ ಸಂದರ್ಭದಲ್ಲಿ ತಿಳಿಸಿದರು.







