ಮಂಗಳೂರು : ಮಂಗಳೂರು-ಬೆಂಗಳೂರಿಗೆ ತೈಲ ಸಾಗಾಟ ಮಾಡುವ ಎಚ್ಪಿಸಿಎಲ್ ಪೈಪ್ಲೈನ್ ಒಡೆದು ಹೋಗಿದ್ದು, ದೊಡ್ಡ ಪ್ರಮಾಣದಲ್ಲಿ ಡೀಸೆಲ್ ಸೋರಿಕೆಯಾಗಿದೆ. ಡೀಸೆಲ್ ಗದ್ದೆ, ತೋಟಗಳ ಹೊಂಡಗಳಲ್ಲಿ ತುಂಬಿಕೊಂಡು, ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿತ್ತು. ಬಂಟ್ವಾಳ ತಾಲೂಕಿನ ಪಂಜಿಕಲ್ಲು ಗ್ರಾಮದ ಅಲ್ಲಾರು ಪ್ರದೇಶದಲ್ಲಿ ಎಚ್ಪಿಸಿಎಲ್ ಪೈಪ್ಲೈನ್ ಮಂಗಳವಾರ ತಡರಾತ್ರಿ 2.30ರ ಸುಮಾರಿಗೆ ಒಡೆದು ಹೋಗಿದೆ. ಪೈಪ್ಲೈನ್ಗೆ ಒಡೆಯಲು ನಿಖರ ಕಾರಣ ತಿಳಿದುಬಂದಿಲ್ಲ. ಡೀಸೆಲ್ ಸೋರಿಕೆಯಾದ ಕಾರಣ ಗ್ರಾಮದ ತುಂಬಾ ವಾಸನೆ ಹಬ್ಬಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಮತ್ತು ಅಗ್ನಿ ಶಾಮಕದಳ ಸ್ಥಳಕ್ಕೆ ಧಾವಿಸಿ ಸಂಭಾವ್ಯ ದುರಂತ ತಡೆಯಲು ಸಜ್ಜುಗೊಂಡಿದ್ದರು. ಪೈಪ್ಲೈನ್ ಒಡೆದ ಮಾಹಿತಿ ತಿಳಿಸಲು ಕಂಪನಿಯ ಸಹಾಯವಾಣಿಗೆ ಕರೆ ಮಾಡಿದರೂ ಯಾರೂ ಕರೆ ಸ್ವೀಕರಿಸಲಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾತ್ಕಾಲಿಕ ತಡೆ : ಬೆಳಗ್ಗೆ 6 ಗಂಟೆಯ ಸಮಯದಲ್ಲಿ ಪೈಪ್ಲೈನ್ ಸ್ಫೋಟಗೊಂಡಿರುವುದನ್ನು ಗ್ರಾಮಸ್ಥರು ಗಮನಿಸಿದ್ದಾರೆ. ಸುಮಾರು ಮೂರು ಗಂಟೆಗಳ ಬಳಿಕ ಸ್ಥಳಕ್ಕೆ ಆಗಮಿಸಿದ ಎಚ್ಪಿಸಿಎಲ್ ಅಧಿಕಾರಿಗಳು ಸೋರಿಕೆಯನ್ನು ತಾತ್ಕಾಲಿಕವಾಗಿ ತಡೆಗಟ್ಟಿದ್ದಾರೆ.
