ಮೂಡುಬಿದರೆ: ಕಲ್ಲಬೆಟ್ಟುವಿನಲ್ಲಿ 1 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸುವ ಕಲ್ಲಬೆಟ್ಟು ಸೇವಾ ಸಹಕಾರಿ ಬ್ಯಾಂಕ್ನ ಸುಸಜ್ಜಿತ ಕಟ್ಟಡ ನಿರ್ಮಣಕ್ಕೆ ನಿರ್ಮಾಣಕ್ಕೆ ಬುಧವಾರ ಭೂಮಿ ಪೂಜೆ ನೆರವೇರಿತು.
ಎಸ್.ಸಿ.ಸಿ.ಡಿ.ಸಿ.ಸಿ ಬ್ಯಾಂಕ್ನ ನಿರ್ದೇಶಕ ಭಾಸ್ಕರ್ ಎಸ್.ಕೋಟ್ಯಾನ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಸಹಕಾರಿ ಕ್ಷೇತ್ರವೆನ್ನುವುದು ಜನರ ನಡುವಿನ ಪರಸ್ಪರ ನಂಬಿಕೆ ಮತ್ತು ಸಹಕಾರದಿಂದ ನಡೆಯುವಂತದ್ದು. ಇಲ್ಲಿ ರಾಜಕೀಯ ಪ್ರವೇಶ ಸಲ್ಲದು. ರಾಜಕೀಯ ಹಸ್ತಕ್ಷೇಪವಾದರೆ ಸಹಕಾರಿ ಕ್ಷೇತ್ರಗಳ ಅಭಿವೃದ್ಧಿಗೆ ಹಿನ್ನಡೆ ಆಗಲಿದೆ ಎಂದು ಹೇಳಿದರು.


ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬ್ಯಾಂಕ್ನ ಅಧ್ಯಕ್ಷ ಕೆ. ಕೃಷ್ಣರಾಜ ಹೆಗ್ಡೆ ಕಲ್ಲಬೆಟ್ಟು ಬ್ಯಾಂಕ್ಗೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಬ್ಯಾಂಕ್ನ ಸದಸ್ಯರ ಅಭಿಪ್ರಾಯದಂತೆ ಸುಮಾರು 1 ಕೋಟಿ ವೆಚ್ಚದ ನೂತನ ಹಾಗೂ ಸುಸಜ್ಜಿತ ಕಟ್ಟಡ ನಿರ್ಮಣಕ್ಕೆ ನಿರ್ಧರಿಸಲಾಗಿದೆ. ನಬಾರ್ಡ್ನಿಂದ ರೂ 35 ಲಕ್ಷ ಸಾಲ ಪಡೆಯಲಾಗುವುದು. ನಮ್ಮ ಬ್ಯಾಂಕ್ನಿಂದ ಸುಮಾರು 30 ಲಕ್ಷ ಹಣ ವಿನಿಯೋಗಿಸಲಾಗುವುದು. ಉಳಿದ ಮೊತ್ತವನ್ನು ಬೇರೆ ಮೂಲಗಳಿಂದ ಸಂಗ್ರಹಿಸಬೇಕಾಗಿದೆ ಎಂದರು. ನೂತನ ಕಟ್ಟಡದ ಕಾಮಗಾರಿ ಪಾರದರ್ಶಕವಾಗಿ ಆಗುವಂತೆ ನೋಡಿಕೊಳ್ಳಲಾಗುವುದ ಎಂದರು.
ಇದಕ್ಕು ಮೊದಲು ಮಾಜಿ ಸಚಿವ ಅಮರನಾಥ ಶೆಟ್ಟಿ ನೂತನ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿದರು. ಪುರಸಭೆ ಉಪಾಧ್ಯಕ್ಷೆ ಎಲಿಜಾ ಮಿನೇಜಸ್, ಮಾಜಿ ಅಧ್ಯಕ್ಷ ರತ್ನಾಕರ ದೇವಾಡಿಗ, ಹೊಸಂಗಡಿ ಅರಮನೆಯ ಸುಕುಮಾರ ಶೆಟ್ಟಿ, ಕಲ್ಲಮುಂಡ್ಕೂರು ಸಹಕಾರಿ ಸಂಘದ ಅಧ್ಯಕ್ಷ ವರದರಾಯ ಕಾಮತ್, ಹೊಸಬೆಟ್ಟು ಸಹಕಾರಿ ಸಂಘದ ಪದ್ಮಪ್ರಸಾದ್ ಜೈನ್, ನೆಲ್ಲಿಕಾರು ಸಹಕಾರಿ ಸಂಘದ ಜಯವರ್ಮ ಜೈನ್, ಕರಿಂಜೆ ಸಹಕಾರಿ ಸಂಘದ ಜೆರಾಲ್ಡ್ ಮೆಂಡಿಸ್, ಪುತ್ತಿಗೆ ಸಹಕಾರಿ ಸಂಘದ ಹರಿಪ್ರಸಾದ್ ಶೆಟ್ಟಿ, ಕಲ್ಲಬೆಟ್ಟು ಬ್ಯಾಂಕ್ನ ಉಪಾಧ್ಯಕ್ಷ ಲಕ್ಷ್ಮೀಶ ಎಟ್ಟಿ ಮತ್ತು ನಿರ್ದೇಶಕರು ಇದ್ದರು. ಬ್ಯಾಂಕ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಪುರುಷೋತ್ತಮ ಶೆಟ್ಟಿ ಸ್ವಾಗತಿಸಿದರು. ಅನಿತಾ ಶೆಟ್ಟಿ ವಂದಿಸಿದರು.
