ಸದಾ ಹಸಿರಿನಿಂದ ತುಂಬಿದ ಬೆಟ್ಟ ಗುಡ್ಡಗಳ ನಡುವೆ ಪ್ರಕೃತಿ ನಿರ್ಮಿತವಾಗಿ ಹರಿದು ಬರುತ್ತಿರುವ ಪವಿತ್ರವಾದ ಫಲ್ಗುನೀ ನದಿಯ ತಟದಲ್ಲಿ ಇತಿಹಾಸ ಪ್ರಸಿದ್ದ ಪ್ಮಣ್ಯಕ್ಷೇತ್ರಗಳಲ್ಲಿ ಒಂದಾದ ಶ್ರೀ ಕ್ಷೇತ್ರ ಪೊಳಲಿ ಕಾಣಸಿಗುತ್ತದೆ. ಇಲ್ಲಿನ ಆಧಿದೇವತೆ ತಾಯಿ ರಾಜರಾಜೇಶ್ವರಿ. ಇದು ಶ್ರೀ ರಾಜರಾಜೇಶ್ವರಿ ದೇವಸ್ಥಾನವೆಂದೇ ಪ್ರಸಿದ್ಧಿ ಪಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಿಂದ ಕರಿಯಂಗಳ ಗ್ರಾಮಕ್ಕೆ ಹಾದುಹೋಗುವ ಮಾರ್ಗದಲ್ಲಿ 12 ಕಿ ಮೀ ಸಾಗಿದರೆ ಶ್ರೀ ಕ್ಷೇತ್ರವನ್ನು ತಲುಪಬಹುದು. ದೇವಾಲಯಕ್ಕೆ ಪ್ರದಕ್ಷಿಣೆ ಬರುವಂತೆ ಹರಿದು ಹೋಗುತ್ತಿರುವ ಫಲ್ಗುನೀ ನದಿ ಶ್ರೀ ಕ್ಷೇತ್ರಕ್ಕೆ ಒಂದು ಅಪೂರ್ವವಾದ ಕಳೆ ತಂದಿದೆ. ರಮ್ಯಾದ್ಭುತವಾದ ಶ್ರೀ ರಾಜರಾಜೇಶ್ವರಿಯ ದೇವಾಲಯವನ್ನು ಸುರಥ ಮಹಾರಾಜ ಕಟ್ಟಿಸಿ ಮೂರ್ತಿಯನ್ನು ನಿರ್ಮಾಣ ಮಾಡಿದನೆಂದು ಪ್ರತೀತಿ ಇದೆ. ಶ್ರೀ ಕ್ಷೇತ್ರದ ಪ್ರಾಚೀನತೆ ಮತ್ತು ಪ್ರತಿಷ್ಠೆಯ ಐತಿಹಾಸಿಕತೆಯನ್ನು ಹೇಳಲು ಸಾಧ್ಯವಿಲ್ಲ.
ಈ ದೇವಾಲಯವು ಆಲೂಪ, ಚೌಟ, ಬಲ್ಲಾಳ ಮುಂತಾದ ರಾಜ ಮಹಾರಾಜರ ಆಡಳಿತಕ್ಕೆ ಒಳಪಟ್ಟಿತ್ತು ಎಂಬುದು ಚರಿತ್ರೆಯಿಂದಲೂ ಶಾಸನಗಳಿಂದಲೂ ತಿಳಿದುಬಂದಿದೆ. ಪುರಾಣದಲ್ಲಿ ನಿರೂಪಿಸಲ್ಪಟ್ಟ ಪ್ರಕಾರ ಶ್ರೀ ಕ್ಷೇತ್ರಕ್ಕೆ ಸುಮಾರು ಐದು ಸಾವಿರ ವರ್ಷಗಳ ಇತಿಹಾಸವಿದೆ. ಇದಕ್ಕೆ ಸಾಕ್ಷಿ ಎಂಬತೆ ಶ್ರೀ ರಾಜರಾಜೇಶ್ವರೀ ಸನ್ನಿಧಿಯಲ್ಲಿ ಆಲೂಪ ವಂಶಸ್ಥರಿಗೆ ಸಂಭಂದಿಸಿದ ಅನೇಕ ಶಿಲಾ ಶಾಸನಗಳಿವೆ.
ಸಾಮಾನ್ಯವಾಗಿ ಎಲ್ಲಾ ದೇವಾಲಯಗಳಲ್ಲಿ ವಿಗ್ರಹವನ್ನು ಕಲ್ಲಿನಿಂದಲೋ, ಲೋಹದಿಂದಲೋ ಕೆತ್ತಲ್ಪಟ್ಟಿರುತ್ತದೆ. ಆದರೆ ಈ ಕ್ಷೇತ್ರದಲ್ಲಿ ಮೂರ್ತಿ ಯನ್ನು ವಿವಿಧ ದ್ರವ್ಯಗಳ ಲೇಪನಗಳಿಂದ ವಿಶಿಷ್ಟ ರೀತಿಯಲ್ಲಿ ಪರಿಪಾಕಗೊಂಡ ಮಣ್ಣಿನಿಂದ ತಯಾರಿಸಿದ್ದಾರೆ. ಇಷ್ಟಲ್ಲದೇ ಗರ್ಭಗುಡಿಯ ಗೋಡೆಗಳಲ್ಲಿ ಮಣ್ಣಿನಿಂದ ರಚಿತವಾದ ದೇವತಾ ವಿಗ್ರಹಗಳಿದ್ದು ಕಲಾವಿದರಿಗೆ ಭವ್ಯವಾದ ದೈವಿಕ ಶಿಲ್ಪಕಲಾಶಾಲೆಯಂತೆ ಭಾಸವಾಗುತ್ತದೆ. ಶ್ರೀ ಕ್ಷೇತ್ರದ ತಾಯಿ ರಾಜರಾಜೇಶ್ವರಿಯ ಪೂರ್ಣರೂಪ ನೋಡಬೇಕಾದರೆ ಗರ್ಭಗೃಹದ ಎದುರು ವಿನೀತರಾಗಿ ಬಾಗಿ ಕೂರಬೇಕು. ಆಗ ಮಾತ್ರ ಆನಂದಾನುಭೂತಿಯನ್ನೀವ ಸಮಗ್ರ ಮೂರ್ತಿಯ ದರ್ಶನವಾಗುತ್ತದೆ.
ಪೊಳಲಿ ಕ್ಷೇತ್ರದ ಇನ್ನೊಂದು ವಿಶೇಷವೆಂದರೆ ಸುಮಾರು ಒಂದು ತಿಂಗಳ ಕಾಲ ನಡೆಯುವ ಸುದೀರ್ಘ ಜಾತ್ರೆ. ಈ ಜಾತ್ರೆಗೆ ಪರ್ಯಾಯ ಹೆಸರು ಬರುವಷ್ಟು ಪ್ರಸಿದ್ಧ ಇಲ್ಲಿನ ಚೆಂಡಾಟ. ನಿರಂತರ ಒಂದು ತಿಂಗಳ ಕಾಲ ನಡೆಯುವ ಶ್ರೀ ಕ್ಷೇತ್ರದ ಜಾತ್ರೆ ಸಮಗ್ರ ಭಾರತದ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಕ್ಷೇತ್ರದಲ್ಲಿ ತಾಯಿ ರಾಜರಾಜೇಶ್ವರಿ ಪ್ರಧಾನ ದೇವತೆಯಾಗಿದ್ದರೂ ಕೂಡ ಇಲ್ಲಿ ನಡೆಯುವ ನಿತ್ಯಬಲಿ, ಉತ್ಸವ ಬಲಿಗಳು ಸುಬ್ರಮಣ್ಯ ಸ್ವಾಮಿಗೆ. ಪ್ರಧಾನ ದೇವತೆಯನ್ನುಳಿದು ಪರಿವಾರದ ದೇವರಿಗೆ ಬಲಿ, ರಥೋತ್ಸವಗಳು ನಡೆಯುವುದು ಪೊಳಲಿಯ ಉಲ್ಲೇಖನೀಯ ವ್ಶೆಚಿತ್ರ.
ದೇವಾಲಯದ ಆಧಿದೇವತೆಯಾದ ತಾಯಿ ರಾಜರಾಜೇಶ್ವರಿಯ ಜೊತೆಗೆ ಭದ್ರಕಾಳಿ, ಗಣೇಶ, ಸುಬ್ರಮಣ್ಯ, ದುರ್ಗಾಪರಮೇಶ್ವರಿ, ಕ್ಷೇತ್ರಪಾಲ ಹಾಗೂ ಕ್ಷೇತ್ರದ ದೈವಗಳನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿದೆ. ಮುನಿಗಳಿಂದ, ರಾಜರಿಂದ, ಪಂಡಿತ ಪಾಮರರಿಂದ ಪರಂಪರೆಯಾಗಿ ವಿಧಿವತ್ತಾಗಿ ಆರಾಧಿಸಲ್ಪಡುತ್ತಾ ಬಂದಿರುವ ಸಾವಿರ ಸೀಮೆಯ ಪೊಳಲಿ ಕ್ಷೇತ್ರ ಒಂದು ಸುಪ್ರಸಿದ್ಧ ಯಾತ್ರಾ ಸ್ಥಳ ಎನ್ನುವುದರಲ್ಲಿ ಎರಡು ಮಾತಿಲ್ಲ.