ಬಂಟ್ವಾಳ:ತಾಲ್ಲೂಕಿನ ಬಾಳೆಪುಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೈರಂಗಳ ಎಂಬಲ್ಲಿ ಸ್ಥಳೀಯ ವ್ಯಕ್ತಿಯೊಬ್ಬರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದರೆನ್ನಲಾದ ಸರ್ಕಾರಿ ಜಮೀನನ್ನು ತಹಶೀಲ್ದಾರ್ ಪುರಂದರ ಹೆಗ್ಡೆ ನೇತೃತ್ವದ ಕಂದಾಯ ಇಲಾಖೆ ಅಧಿಕಾರಿಗಳು ಶನಿವಾರ ಕಾರ್ಯಚರಣೆ ನಡೆಸಿ ತೆರವುಗೊಳಿಸಿದ ಘಟನೆ ನಡೆದಿದೆ.
ಇಲ್ಲಿನ ಸರ್ವೆ ನಂಬ್ರ 64/1ಎ ಪೈಕಿ ಒಟ್ಟು 21ಸೆಂಟ್ಸ್ ಸರ್ಕಾರಿ ಜಮೀನು ಸಾರ್ವಜನಿಕ ರಸ್ತೆಗಾಗಿ ಇಲ್ಲಿನ ಗ್ರಾಮ ಪಂಚಾಯಿತಿ ವತಿಯಿಂದ ಮೀಸಲಿಡಲಾಗಿತ್ತು. ಇದನ್ನು ಸ್ಥಳೀಯ ನಿವಾಸಿ ಬಾಬು ಮೊಗೇರ ಎಂಬವರು ಕಳೆದ ಕೆಲವು ವರ್ಷಗಳಿಂದ ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ರಸ್ತೆಗೆ ಅಡ್ಡವಾಗಿ ಕೆಂಪು ಕಲ್ಲುಗಳನ್ನು ಇರಿಸಿ ತಡೆಬೇಲಿ ನಿರ್ಮಿಸಿದ್ದಾರೆ ಎಂದು ಆರೋಪಿಸಿ ಸ್ಥಳೀಯರು ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ್ಗೆ ದೂರಿಕೊಂಡಿದ್ದರು.
ಇದರಿಂದಾಗಿ ಬಂಟ್ವಾಳಕ್ಕೆ ಶನಿವಾರ ಭೇಟಿ ನೀಡಿದ್ದ ಉಪವಿಭಾಗಾಧಿಕಾರಿ (ಎ.ಸಿ.) ಡಾ.ಅಶೋಕ್ ಅವರ ನಿರ್ದೇಶನದಂತೆ ತಹಶೀಲ್ದಾರ್ ಪುರಂದರ ಹೆಗ್ಡೆ ನೇತೃತ್ವದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಪೊಲೀಸರೊಂದಿಗೆ ಧಾವಿಸಿ ಕಾರ್ಯಚರಣೆೆ ನಡೆಸಿ ಕಾನೂನು ರೀತಿಯಲ್ಲಿ ತೆರವುಗೊಳಿಸಿರುವುದಾಗಿ ತಿಳಿಸಿದ್ದಾರೆ.
ಉಪ ತಹಶೀಲ್ದಾರ್ ರೋಹಿನಾಥ್, ಕಂದಾಯ ನಿರೀಕ್ಷಕ ಸಾಧು, ಗ್ರಾಮಕರಣಿಕೆ ದಾಕ್ಷಾಯಿನಿ, ಗ್ರಾಮ ಸಹಾಯಕ ಮಂಜುನಾಥ ಮತ್ತಿತರರು ಇದ್ದರು.