ಕೊಲ್ಯ ಮನೆಯೊಂದರಿಂದ ಲಕ್ಷಾಂತರ ಬೆಲೆಬಾಳುವ ಚಿನ್ನ ಸಹಿತ ನಗದು ಕಳ್ಳರು ಮಂಗಳವಾರ ತಡರಾತ್ರಿ ಕಳವುಗೈದಿದ್ದಾರೆ.
ಉಳ್ಳಾಲ: ಸರಣಿ ಕಳವಿಗೆ ಯತ್ನಿಸಿದ ಕಳ್ಳರು ಮನೆಗೆ ನುಗ್ಗಿ ಲಕ್ಷಾಂತರ ಬೆಲೆಬಾಳುವ ಚಿನ್ನಾಭರಣ ಸಹಿತ ನಗದು ಕಳವುಗೈದಿರುವ ಘಟನೆ ಕೊಲ್ಯ ಸಮೀಪ ಮಂಗಳವಾರ ತಡರಾತ್ರಿ ವೇಳೆ ನಡೆದಿದೆ.
ಕೊಲ್ಯ ಶ್ರೀ ಮೂಕಾಂಬಿಕಾ ದೇವಸ್ಥಾನದ ಹಿಂಭಾಗದಲ್ಲಿರುವ ಸರಸ್ವತಿ ಎಂಬವರಿಗೆ ಸೇರಿದ ಮನೆಗೆ ನುಗ್ಗಿದ ಕಳ್ಳರು ಎರಡು ಲಕ್ಷ ನಗದು ಮತ್ತು 45 ಪವನ್ ಚಿನ್ನಾಭರಣ ದೋಚಿದ್ದಾರೆ. ಮನೆಮಂದಿ ಮಲಗಿದ್ದ ಸಂದರ್ಭ ಹಿಂಬಾಗಿಲಿನ ಮೂಲಕ ನುಗ್ಗಿರುವ ಕಳ್ಳರು ಕಪಾಟಿನಲ್ಲಿರಿಸಿದ್ದ ಸೊತ್ತುಗಳನ್ನು ಕಳವು ನಡೆಸಿದ್ದಾರೆ.


ಪತ್ರಕರ್ತ ಜಯಂತ್ ಉಳ್ಳಾಲ್ ಅವರ ಪತ್ನಿ ಸುನೀತಾ ಸಹಿತ ಅವರ ತಾಯಿ ಸರಸ್ವತಿ ಮತ್ತು ಮಕ್ಕಳು ಮನೆಯಲ್ಲಿದ್ದರು. ನೂತನ ಮನೆಯನ್ನು ನಿರ್ಮಿಸುತ್ತಿರುವ ಜಯಂತ್ ಉಳ್ಳಾಲ್ ಅವರು ಮನೆ ನಿರ್ಮಾಣಕ್ಕೆಂದು ಕರ್ಣಾಟಕ ಬ್ಯಾಂಕಿನಿಂದ ಪಡೆದ ಸಾಲದ ಹಣದಿಂದ ತಾವು ಅಡವಿರಿಸಿದ್ದ ಚಿನ್ನವನ್ನು ಬಿಡಿಸಿ ಪತ್ನಿ ಮನೆಗೆ ತಂದಿದ್ದರು. ಅಲ್ಲಿ ಅವರ ಮಗುವಿನ ನಾಮಕರಣ ಸಮಾರಂಭಕ್ಕಾಗಿ ಅಡವಿರಿಸಿದ ಚಿನ್ನವನ್ನು ಬಿಡಿಸಿ, ಉಳಿದ ರೂ.2 ಲಕ್ಷ ಹಣವನ್ನು ಕಪಾಟಿನಲ್ಲಿರಿಸಿದ್ದರು. ಸ್ಥಳಕ್ಕೆ ಎಸಿಪಿ ಕಲ್ಯಾಣಿ ಶೆಟ್ಟಿ, ಉಳ್ಳಾಲ ಠಾಣಾಧಿಕಾರಿ ಸವಿತೃ ತೇಜ, ಎಸ್.ಐ ಭಾರತಿ ಹಾಗೂ ಶ್ವಾನದಳ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಆರಂಭಿಸಿದ್ದಾರೆ.
ಸ್ಟುಡಿಯೋಗೂ ಕನ್ನ: ಮನೆ ಸಮೀಪ ರಾ.ಹೆ. 66 ರ ಸಮೀಪದಲ್ಲಿರುವ ತನುಂಜಯ ರಾವ್ ಎಂಬವರಿಗೆ ಸೇರಿದ ಸ್ಟುಡಿಯೋಗೂ ನುಗ್ಗಿದ ಕಳ್ಳರು ರೂ.40,000 ಬೆಲೆಬಾಳುವ ಕ್ಯಾಮರಾವನ್ನು ಕಳವುಗೈದಿದ್ದಾರೆ. ಅಲ್ಲದೆ ಸಮೀಪದಲ್ಲೇ ಇರುವ ಮತ್ತೊಂದು ಸ್ಟುಡಿಯೋ ಮತ್ತು ಮನೆಯೊಂದರ ಬಾಗಲು ಮತ್ತು ಶಟರನ್ನು ಮುರಿಯಲು ಯತ್ನಿಸಿರುವ ಕಳ್ಳರು ಕಳವಿಗೆ ವಿಫಲ ಯತ್ನ ನಡೆಸಿದ್ದಾರೆ.
ಪರಿಣತ ತಂಡ: ಮನೆ ಅಂಗಳದಲ್ಲಿ ನಿಲ್ಲಿಸಿಡಲಾಗಿದ್ದ ಜಯಂತ್ ಅವರಿಗೆ ಸೇರಿದ ಸ್ಕೂಟರಿನ ಕನ್ನಡಿಯನ್ನು ತೆಗೆದಿರುವ ಕಳ್ಳರು ಅದರ ಮೂಲಕ ಒಳಗಿರುವ ಚಿಲಕವನ್ನು ನೋಡಿ, ಅದನ್ನು ಮುರಿದು ಒಳನುಗ್ಗಿದ್ದಾರೆ. ಎಲ್ಲರೂ ಮಲಗಿದ್ದ ಕೋಣೆಯಲ್ಲಿಯೇ ತಡಕಾಡಿರುವ ಕಳ್ಳರು ಅಲ್ಲಿದ್ದ ರೋಲ್ಡ್ ಗೋಲ್ಡ್ ಚಿನ್ನವನ್ನು ಆರಿಸಿ ಅದನ್ನು ಅಲ್ಲೇ ಬಿಟ್ಟು, ಅಸಲಿ ಚಿನ್ನವನ್ನು ಕಳವುಗೈದಿದ್ದಾರೆ. ಇದರಿಂದ ಪರಿಣತ ಕಳ್ಳರ ತಂಡವೇ ಕೃತ್ಯದಲ್ಲಿ ಭಾಗಿಯಾಗಿರುವ ಶಂಕೆ ಇದೆ.





