ಮೂಡುಬಿದರೆ: ರಾಜ್ಯ ಸರ್ಕಾರ 2015ರ ಬಜೆಟ್ನಲ್ಲಿ ಮೂಡುಬಿದರೆಯನ್ನು ಅಧಿಕೃತ ತಾಲ್ಲೂಕು ಕೇಂದ್ರವನ್ನಾಗಿ ಘೋಷಿಸಲಿದೆ. ಇದಾದ ಒಂದು ವರ್ಷದಲ್ಲಿ ಮಿನಿ ವಿಧಾನಸೌದ ಕೂಡ ನಿರ್ಮಾಣವಾಗಲಿದೆ. ಇದು ರಾಜ್ಯ ಸಚಿವ, ಮೂಡುಬಿದರೆ ಕ್ಷೇತ್ರದ ಶಾಸಕ ಕೆ. ಅಭಯಚಂದ್ರ 2015ರ ಜ.15ರಂದು ನಡೆದ ಸುದ್ದಿಗೋಷ್ಠಿಯೊಂದರಲ್ಲಿ ನೀಡಿದ ಆಶ್ವಾಸನೆ.


2013ರ ಬಜೆಟ್ನಲ್ಲಿ ಘೋಷಣೆಯಾಗಿದ್ದ ತಾಲೂಕುಗಳ ರಚನೆಯು ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭ ಪುನರ್ ಪರಿಷ್ಕರಣೆ ಹಾಗೂ ತಾಲೂಕು ರಚನೆಗೆ ಅನುದಾನ ಮೀಸಲಿಡುವ ನೆಪದಲ್ಲಿ ತಡೆಹಿಡಿಯಿತು. 2014ರ ಬಜೆಟ್ನಲ್ಲೂ ತಾಲೂಕು ರಚನೆಯ ವಿಷಯ ತೀವ್ರತೆಯನ್ನು ಪಡೆಯಲಿಲ್ಲ. ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲೂ ಪ್ರಮುಖ ಪಕ್ಷಗಳ ಅಜೆಂಡಾಗಳಲ್ಲಿ ಒಂದಾದ, ಅಶ್ವಾಸನೆಗಳಲ್ಲೇ ಮುಂದಿರುವ `ತಾಲೂಕು’ ರಚನೆಯಾಗುವ ಭಾಗ್ಯವನ್ನು ಕಾಣಲಿಲ್ಲ. ಮೂಡುಬಿದರೆ ಶಾಸಕ ಜ.15ರಂದು ನೀಡಿದ `ತಾಲೂಕು’ ಆಶ್ವಾಸನೆಗೆ ಮಾತ್ರ ಎನ್ನುವುದನ್ನು ಮತ್ತೊಮ್ಮೆ ಸಾಬೀತಾಗಿದೆ.
5 ದಶಕಗಳ ಹೋರಾಟ:
ಮೂಡುಬಿದರೆ ತಾಲೂಕು ಆಗಬೇಕೆನ್ನುವುದು 5 ದಶಕಗಳ ಹೋರಾಟ. 1910ರಿಂದ 1912ರವರೆಗೆ ಮೂಡುಬಿದರೆ ತಾಲೂಕಾಗಿದ್ದು ನಂತರ ಕಾರಣಾಂತರಗಳಿಂದ ಅದರಿಂದ ವಂಚಿತವಾಗಿತ್ತು. ಬ್ರಹ್ಮಾವರ ಶಾಸಕರಾಗಿದ್ದು, ಮೂಲತಃ ಮೂಡುಬಿದರೆ ಶಿರ್ತಾಡಿಯ ಧರ್ಮಸಾಮ್ರಾಜ್ಯ ತಾಲೂಕು ಹೋರಾಟದಲ್ಲಿ ಪ್ರಮುಖರೆನಿಸಿಕೊಂಡವರು. ಹುಂಡೇಕರ್, ಗದ್ದಿಗೌಡ, ವಾಸುದೇವರಾವ್ ಸಮಿತಿ ವರದಿಯಲ್ಲೂ ಮೂಡುಬಿದರೆ ತಾಲೂಕು ಪ್ರಸ್ತಾವನೆಯಿತ್ತು. 2013 ನವೆಂಬರ್ 1ರಂದು ಕಿತ್ತೂರು ತಾಲೂಕು ರಚನೆ ಸಂದರ್ಭದಲ್ಲೂ ಮೂಡುಬಿದರೆ ತಾಲೂಕು ಆಗುವ ನಿರೀಕ್ಷೆ ಹೆಚ್ಚಿತು.
ತಾಲೂಕಿಗಿವೆ ಅರ್ಹತೆ:
ಧಾರ್ಮಿಕ, ಶಿಕ್ಷಣ ಕೇಂದ್ರವಾಗಿ ಗುರುತಿಸಿಕೊಂಡಿರುವ ಮೂಡುಬಿದರೆಯಲ್ಲಿ ತಾಲೂಕಾಗುವ ಬಹುತೇಕ ಎಲ್ಲ ಅರ್ಹತೆಗಳಿವೆ. ಸುಸಜ್ಜಿತ ನ್ಯಾಯಾಲಯ ಸಂಕೀರ್ಣ, ವಿಶೇಷ ತಹಸೀಲ್ದಾರ್ ಕಚೇರಿ, ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಶಿಕ್ಷಣ ಸಂಸ್ಥೆಗಳು, ಉಪನೋಂದಣಿ ಕಚೇರಿ ಸಹಿತ ಹಲವಾರು ಸಾರ್ವಜನಿಕ ವ್ಯವಸ್ಥೆಗಳಿವೆ. ಇವುಗಳು ಸುವ್ಯವಸ್ಥಿತಗೊಳ್ಳಲು, ನಾಗರಿಕರಿಗೆ ಸರ್ಕಾರಿ ಸೇವೆಗಳು ಸುಲಲಿತಾವಾಗಿ ಸಿಗಲು ಮೂಡುಬಿದರೆ ತಾಲೂಕು ಅನಿವಾರ್ಯವಾಗಿದೆ. ತಾಲೂಕಾಗಲು ಅರ್ಹತೆಯಿದ್ದರೂ ರಚನೆಯಾಗುವುದರಲ್ಲಿ ವಿಳಂಭವಾಗುತ್ತಿರುವ ಕಾರಣ, ನಾಗರಿಕರು ತೊಂದರೆ ಅನುಭವಿಸುವಂತಾಗಿದೆ.
