ಮಂಗಳೂರು: ನನ್ನ ತವರಿನ ಊರಲ್ಲಿ ಅಂದರೆ ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನಾಡಬೇಕು ಎಂಬ ಬಯಕೆ ನನ್ನದಾ ಗಿದೆ’ ಎಂದು ಭಾರತ ಕ್ರಿಕೆಟ್ ತಂಡದ ಆಟಗಾರ ಕೆ. ಎಲ್. ರಾಹುಲ್ ಹೇಳುವ ಮೂಲಕ ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಕ್ರೀಡಾಂಗಣ ಸೇರಿದಂತೆ ಕ್ರೀಡೆಗೆ ಬೇಕಾದ ಎಲ್ಲ ಸೌಲಭ್ಯಗಳನ್ನು ಒದಗಿಸಬೇಕು ಎಂಬ ಆಶಯವನ್ನು ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಶನ್ ಪದಾಧಿಕಾರಿಗಳಲ್ಲಿ ವ್ಯಕ್ತಪಡಿಸಿದರು.

ಅವರು ನಗರದ ಓಶಿಯನ್ಪರ್ಲ್ ಹೊಟೇಲ್ನಲ್ಲಿ ಆಯೋಜಿಸಲಾದ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ನ ಮಂಗಳೂರು ವಲಯದ ಆಶ್ರಯದಲ್ಲಿ ಸಮ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಕನಸು ನನಸಾಗಿದೆ: ಎಳೆಯ ವಯಸ್ಸಿನಲ್ಲಿ ನಾನು ಕಂಡ ಕನಸು ಇದೀಗ ನನಸಾಗಿದೆ. ಯಶಸ್ಸಿಗೆ ಕಠಿಣ ಪರಿಶ್ರಮವೇ ಮಾರ್ಗ. ಇದೀಗ ಅತ್ಯಂತ ಸಂತೋಷ ಮತ್ತು ಖುಷಿಯ ದಿನಗಳಾಗಿವೆ. ಹೆತ್ತವರು ಹಾಗೂ ಶಾಲಾ ದಿನದಲ್ಲಿ ಶಿಕ್ಷಕರ ಸಹಕಾರ ಮತ್ತು ದೈಹಿಕ ಶಿಕ್ಷಕರ ಮಾರ್ಗದರ್ಶನದ ಮೂಲಕ ನನ್ನ ಕ್ರಿಕೆಟ್ ಬದುಕು ಈ ಮಟ್ಟದಲ್ಲಿ ಗಮನಸೆಳೆದಿದೆ. ಚಿಕ್ಕಂದಿನಿಂದಲೇ ಕ್ರಿಕೆಟ್ ಕನಸು ಕಂಡಿದ್ದೆ. ನಿರಂತರ ಅಭ್ಯಾಸ, ಶ್ರಮ, ಆತ್ಮವಿಶ್ವಾಸದಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು. ಆಸ್ಟ್ರೇಲಿಯಾ ವಿರುದ್ದ ಮೊದಲ ಪಂದ್ಯದಲ್ಲಿ ನನಗೆ ಸ್ವಲ್ಪ ನಿರಾಶೆಯಾಗಿತ್ತು. ಆದರೆ, ಕಠಿಣ ಅಭ್ಯಾಸದ ಮೂಲಕ ಮುಂದಿನ ಪಂದ್ಯದಲ್ಲಿ ಶತಕದ ಸಾಧನೆ ಮಾಡಲು ಸಾಧ್ಯವಾಯಿತು. ಇದೇ ವೇಳೆ 2014ರಲ್ಲಿ ನಡೆದ ವಿವಿಧ ಟೂರ್ನ್ಮೆಂಟ್ಗಳ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು ಎಂದರು
ಕೆಪಿಎಲ್ ಮತ್ತೆ ಆರಂಭ: ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ ಕಾರ್ಯದರ್ಶಿ ಬ್ರಿಜೇಶ್ ಪಟೇಲ್ ಮಾತನಾಡಿ, ರಣಜಿ, ಇರಾನಿ ಟ್ರೋಫಿ ಸೇರಿದಂತೆ ಕರ್ನಾಟಕ ತಂಡವು ಉತ್ತಮ ಸಾಧನೆ ದಾಖಲಿಸಿದೆ. ಹೊಸ ಆಟಗಾರರು ದೇಶದ ಪರವಾಗಿ ಆಟವಾಡಲು ಆಯ್ಕೆಯಾಗುತ್ತಿದ್ದಾರೆ. ಇನ್ನಷ್ಟು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ಬಾರಿ ಕೆಪಿಎಲ್ ಪಂದ್ಯಾಟ ಮತ್ತೆ ಆರಂಭಿಸಲು ನಿರ್ಧರಿಸಲಾಗಿದೆ ಎಂದರು.
14 ವರ್ಷ ವಯೋಮಿತಿಯೊಳಗಿನ ಮಕ್ಕಳಲ್ಲಿ ಕ್ರಿಕೆಟ್ ಆಸಕ್ತಿ ಬೆಳೆಸಿಕೊಂಡು, ಅವರನ್ನು ಮುಂದೆ ಉತ್ತಮ ಕ್ರಿಕೆಟ್ಪಟು ಮಾಡಬೇಕಾದ ಉದ್ದೇಶದಿಂದ ಜೂನಿಯರ್ಗಳಿಗೆ ಹೆಚ್ಚು ಆದ್ಯತೆ ನೀಡಲಾಗುವುದು. ಗ್ರಾಮೀಣ ಭಾಗದ ಪ್ರತಿಭೆಗಳು ಹೆಚ್ಚಿ ನ ಸಂಖ್ಯೆಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ ಎಂದರು.
ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ ಖಜಾಂಚಿ ಡಾ. ಪಿ. ದಯಾನಂದ ಪೈ ಮಾತನಾಡಿ, ದ.ಕ. ಜಿಲ್ಲೆ ಕ್ರಿಕೆಟ್ ಸೇರಿದಂತೆ ಎಲ್ಲ ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಪ್ರದರ್ಶಿಸಿದೆ. ರಾಹುಲ್ ಭಾರತದ ತಂಡದಲ್ಲಿ ಆಡುತ್ತಿರುವುದು ಯುವ ಕ್ರೀಡಾಳುಗಳಿಗೆ ಸ್ಪೂರ್ತಿ ಎಂದರು.
ಸಂಯೋಜಕ ಎ.ವಿ. ಶಶಿಧರ, ಸಂಚಾಲಕ ಮನೋಹರ ಅಮೀನ್, ವಲಯ ಮುಖ್ಯಸ್ಥ ಎನ್.ಸಿ. ಗಿರೀಶ್ ಉಪಸ್ಥಿತರಿದ್ದರು. ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ನ ಮಂಗಳೂರು ವಲಯದ ಅಧ್ಯಕ್ಷ ಎಚ್. ರತನ್ ಕುಮಾರ್ ಸ್ವಾಗತಿಸಿದರು.

