ಬಂಟ್ವಾಳ:ಕ್ಯಾಂಪ್ಕೊ ಸಂಸ್ಥೆ ಮತ್ತು ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘವು ಗ್ರಾಮೀಣ ರೈತರ ಅನುಕೂಲಕ್ಕಾಗಿ ಅಡಿಕೆ ಖರೀದಿ ಕೇಂದ್ರ ಆರಂಭಿಸುತ್ತಿರುವುದು ಇಲ್ಲಿನ ಅಡಿಕೆ ಬೆಳೆಗಾರರಿಗೆ ಸಂತಸ ತಂದಿದೆ. ಇದರಿಂದಾಗಿ ಗರಿಷ್ಟ ಬೆಲೆಗೆ ಗುಣಮಟ್ಟದ ಅಡಿಕೆ ನೀಡುವ ಮೂಲಕ ರೈತರು ಸ್ವಾವಲಂಬಿ ಬದುಕಿಗೆ ಮತ್ತಷ್ಟು ಮಾಹಿತಿ ಪಡೆದುಕೊಳ್ಳಬೇಕು ಎಂದು ಕ್ಯಾಂಪ್ಕೊ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಭಟ್ ಹೇಳಿದ್ದಾರೆ.
ತಾಲ್ಲೂಕಿನ ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘ ಮತ್ತು ಕ್ಯಾಂಪ್ಕೊ ಸಂಸ್ಥೆ ವತಿಯಿಂದ ಕಲ್ಲಡ್ಕದಲ್ಲಿ ಶುಕ್ರವಾರ ಆರಂಭಗೊಂಡ ಅಡಿಕೆ ಖರೀದಿ ಕೇಂದ್ರದಲ್ಲಿ ಅಡಿಕೆ ಗುಣಮಟ್ಟ ಪರೀಕ್ಷಿಸಿದ ಬಳಿಕ ಅವರು ಮಾತನಾಡಿದರು.

ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ಸಂಚಾಲಕ ಡಾ.ಕೆ.ಪ್ರಭಾಕರ ಭಟ್ ಅಡಿಕೆ ಖರೀದಿ ಕೇಂದ್ರ ಉದ್ಘಾಟಿಸಿ ಮಾತನಾಡಿ, ಕೇಂದ್ರ ಸರ್ಕಾರವು ಬಡಜನರಿಗೆ ನೀಡುತ್ತಿರುವ ವಿವಿಧ ಸೌಲಭ್ಯಗಳನ್ನು ಸಹಕಾರಿ ಸಂಘಗಳ ಮೂಲಕ ಗ್ರಾಮೀಣ ಜನರಿಗೆ ತಲುಪಿಸಬೇಕು ಎಂದರು.
ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೆ.ಪದ್ಮನಾಭ ಕೊಟ್ಟಾರಿ ಅರ್ಹ ಫಲಾನುಭವಿಗಳಿಗೆ ಅಡುಗೆ ಅನಿಲ ಸಿಲಿಂಡರ್ ಮತ್ತು ಸ್ಟೌವ್ ವಿತರಿಸಿದರು.
ಕ್ಯಾಂಪ್ಕೊ ಸಂಸ್ಥೆ ಆಡಳಿತ ನಿರ್ದೇಶಕ ಸುರೇಶ ಭಂಡಾರಿ, ಮಾಜಿ ಆಡಳಿತ ನಿರ್ದೇಶಕ ಎ.ಎಸ್.ಭಟ್, ಹಿರಿಯ ಪ್ರಬಂಧಕ ಜಿ.ಕೆ.ಅರಿಗ, ವಿಟ್ಲ ಶಾಖಾಧಿಕಾರಿ ಸುನಿಲ್ ಕುಮಾರ್, ಉದ್ಯಮಿ ಮಂಜುನಾಥ ಭಟ್, ರೈತರ ಸಹಕಾರಿ ಸಂಘದ ಉಪಾಧ್ಯಕ್ಷ ಬಿ.ಸುಧಾಕರ ರೈ, ನಿರ್ದೇಶಕರಾಧ ಗೋಪಾಲಕೃಷ್ಣ ಭಟ್, ಜಯರಾಮ ರೈ, ವೆಂಕಟ್ರಾಯ ಪ್ರಭು, ಕೊರಗಪ್ಪ ನಾಯ್ಕ, ಲೋಕಾನಂದ, ಮೃಣಾಲಿನಿ ಸಿ.ನಾಯ್ಕ್, ಗಿರಿಯಪ್ಪ ಗೌಡ, ಪೂವಪ್ಪ ಗೌಡ, ಮೀನಾಕ್ಷಿ, ರಾಜೇಶ ಕೊಟ್ಟಾರಿ ಕೊಳಕ್ಕೀರು ಮತ್ತಿತರರು ಇದ್ದರು.
