ಸುದ್ದಿ9ಬಂಟ್ವಾಳ: ಹಿಂದೊಮ್ಮೆ ತುಳುನಾಡಿನ ಇತಿಹಾಸದಲ್ಲಿ ಭಕ್ತರ ಇಷ್ಠಾರ್ಥ ಸಿದ್ಧಿಸುವ ಪುಣ್ಯ ಕ್ಷೇತ್ರವಾಗಿ ವೈಭವದಿಂದ ಮೆರೆದಿರುವ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬುಡೋಳಿ ಗ್ರಾಮದ ಪೃಕೃತಿ ರಮಣೀಯ ಸುಂದರ ಪರಿಸರದಲ್ಲಿರುವ ಮಾಣಿಬೆಟ್ಟು ಶ್ರೀ ದುರ್ಗಾಂಬಿಕಾ ಕ್ಷೇತ್ರವು ಇದೀಗ ಪುನರ್ ನಿರ್ಮಾಣಗೊಳ್ಳುತ್ತಿದ್ದು ಕಾಮಗಾರಿ ಭರದಿಂದ ನಡೆಯುತ್ತಿದೆ.
ಕ್ಷೇತ್ರದಲ್ಲಿ ಕೆಳತಿಂಗಳ ಹಿಂದೆ ನಡೆದ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದ ಹಿನ್ನೆಲೆಯಲ್ಲಿ ಶ್ರೀ ಅಮ್ಮನವರ ಗರ್ಭಗುಡಿಯ ನವೀಕರಣ, ಶ್ರೀ ಗುರು ಮತ್ತು ಶ್ರೀ ಆಂಜನೇಯ ಸ್ವಾಮಿಯ ಸಾನಿಧ್ಯ ನಿರ್ಮಾಣ, ಶ್ರೀ ಧೂಮಾವತಿಗೆ ಧರ್ಮ ಚಾವಡಿ ನಿರ್ಮಾಣ, ಭೈರವ ಶಕ್ತಿ ಸಹಿತ ಪರಿವಾರ ದೈವಗಳಿಗೆ ನೂತನ ಗುಡಿ ನಿರ್ಮಿಸಲು ಸಂಕಲ್ಪಿಸಲಾಗಿದೆ. ಸಾನಿಧ್ಯಗಳ ನಿರ್ಮಾ ಣ ಸಹಿತ ಇತರ ಅಭಿವೃದ್ಧಿ ಯೋಜನೆಗಳಿಗೆ ರೂಪಾಯಿ 75 ಲಕ್ಷ ಖರ್ಚು ಅಂದಾಜಿಸಲಾಗಿದೆ.
ನೂತನ ಗುಡಿಗಳ ನಿರ್ಮಾಣಕ್ಕಾಗಿ ಮಾಣಿಲ ಶ್ರೀಚಕ್ರ ಸಂಸ್ಥಾನದ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ, ಗಣ್ಯಾತಿಗಣ್ಯರ ಸಮಕ್ಷಮದಲ್ಲಿ, ಕ್ಷೇತ್ರದ ಪ್ರಧಾನ ಅರ್ಚಕರು ಹಾಗೂ ಶ್ರೀ ದೇವಿಯ ಆರಾಧಕರಾದ ಶ್ರೀ ಹರೀಶ ನಾಯ್ಕ ಅವರ ದಿವ್ಯ ಹಸ್ತದಿಂದ ಶಿಲಾನ್ಯಾಸ ನೆರವೇರಿದ್ದು ಇದೀಗ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ದೊರೆತಿದೆ.
ಐತಿಹಾಸಿಕ ಹಿನ್ನೆಲೆ:
400 ವರ್ಷಗಳ ಹಿಂದೆ ಗುರು ಪರಂಪರೆಯ ಕಾಲ ಘಟ್ಟದಲ್ಲಿ ಆಗಿನ ಶ್ರೇಷ್ಠ ಗುರುಗಳ ತಪೋಶಕ್ತಿಗೆ ಒಲಿದ ಶ್ರೀ ದುರ್ಗಾಂ ಬಿಕಾ ಅಮ್ಮನವರ ದಿವ್ಯ ಭವ್ಯ ಪಾವನ ನೆಲೆಯೇ ಶ್ರೀ ಮಾಣಿಬೆಟ್ಟು ಕ್ಷೇತ್ರ.
ಇಂತಹ ಪುಣ್ಯ ಭೂಮಿಯಲ್ಲಿರುವ ಈ ಪ್ರಸಿದ್ಧ ಕ್ಷೇತ್ರ ಬಹುಕಾಲ ಕಣ್ಣಿಗೆ ಕಾಣದಿದ್ದರೂ ಇತ್ತೀಚಿನ ಹಲವು ವರ್ಷಗಳಿಂದ ಶ್ರೀ ದೇವಿಯ ಅನುಗ್ರಹ, ರಕ್ಷಣೆ, ಅಭಯವೆಲ್ಲವೂ ನಾನಾ ವಿಧಗಳಲ್ಲಿ ಗೋಚರಿಸುತ್ತಿದ್ದದ್ದು ಇಲ್ಲಿನ ಅಮ್ಮನವರ ಮಹಾಮಹಿಮೆಯೇ ಸರಿ. ಈ ಹಿನ್ನೆಲೆಯಲ್ಲಿ 04-04-2007ರಂದು ಈ ಸ್ಥಳದಲ್ಲಿ ನೂತನ ಗುಡಿಗಳನ್ನು ನಿರ್ಮಿಸಿ ಶ್ರೀ ಅಮ್ಮನವರ ಸಹಿತ ದೈವಗಳನ್ನು ಪ್ರತಿಷ್ಠಾಪಿಸಲಾಗಿದ್ದು ಪ್ರಸ್ತುತ ಶ್ರೀ ಅಮ್ಮನವರು ನಾಗದೇವರು, ರಕ್ತೇಶ್ವರಿ, ಧೂಮವತಿ, ಮೈಷಂದಾಯ, ಕಲ್ಲುರ್ಟಿ , ಕಲ್ಕುಡ, ವರ್ಣರ ಪಂಜುರ್ಲಿ , ಸೂಕತ್ತೆರಿ ಮೈಯಂತಿ, ಬೈರವ ಹಾಗೂ ಗುಳಿಗ ಎಂಬ ಪರಿವಾರ ದೈವಗಳೊಡನೆ ನೆಲೆಯಾಗಿ ಭಕ್ತರನ್ನು ಹರಸುತ್ತಿದ್ದಾರೆ. ಊರ ಪರವೂರ ಅಪಾರ ಭಕ್ತಾಧಿಗಳು ಜಾತಿ,ಮತ ಭೇದವಿಲ್ಲದೆ ಕ್ಷೇತ್ರಕ್ಕೆ ಬಂದು ತಮ್ಮ ಕಷ್ಟವನ್ನು ಹೇಳಿ, ಶಕ್ತ್ಯಾನುಸಾರ ಸೇವೆ ಸಲ್ಲಿಸಿ ತಮ್ಮ ಇಷ್ಠಾರ್ಥವನ್ನು ಸಿದ್ಧಿಸಿಕೊಳ್ಳುತ್ತಿದ್ದಾರೆ.
ವಾಯುಪುತ್ರ, ರಾಮಭಕ್ತ ಶ್ರೀ ಅಂಜನೇಯ ಸ್ವಾಮಿಯು ಶ್ರೀ ದೇವಿಯ ದೂತನಾಗಿ ನೆಲೆ ನಿಂತಿರುವುದು, ಶ್ರೀ ಮಹಾತಾಯಿಯನ್ನು ಪ್ರಾತಃಕಾಲದಲ್ಲಿ ಶ್ರೀ ದುರ್ಗಾಬಿಕಾ ರೂಪದಲ್ಲಿ, ಸಂಜೆ ಶ್ರೀ ಮಹಮ್ಮಾಯಿ ರೂಪದಲ್ಲಿಯೂ ಆರಾಧಿಸಿಕೊಂಡು ಬರಬೇಕೆಂದು ಅಮ್ಮನವರ ಅಪ್ಪಣೆಯಾಗಿರುವುದರೊಂದಿಗೆ ಒಂದೇ ಗದ್ದುಗೆಯಲ್ಲಿ ಎರಡು ರೂಪಗಳಲ್ಲಿ ಆರಾದಿಸಲ್ಪಡುವುದು ಹಾಗೂ ಭಕ್ತಿಯಿಂದ ‘ಅಮ್ಮಾ” ಎಂದು ಕರೆದುಕೊಂಡು ಇಲ್ಲಿಗೆ ಬರುವ ಭಕ್ತರ ಕಷ್ಟಕಾರ್ಪಣ್ಯಗಳನ್ನು ಪರಿಹರಿಸಿ ನೆಮ್ಮದಿಯ ಬದುಕು ನಡೆಸುವಂತಾಗಿರುವುದು ಈ ಕ್ಷೇತ್ರದ ವಿಶೇಷತೆಯಾಗಿದೆ. 400 ವರ್ಷಗಳ ಹಿಂದೆ ಗುರು ಪರಂಪರೆಯ ಕಾಲ ಘಟ್ಟದಲ್ಲಿ ಆಗಿನ ಶ್ರೇಷ್ಠ, ಪ್ರಶ್ನಾತೀತ ಹಾಗೂ ಮಹಾಮಹಿಮ ಗುರುಗಳ ತಪಃಶಕ್ತಿಗೆ ಒಲಿದ ಶ್ರೀ ದುರ್ಗಾಂಬಿಕಾ ಅಮ್ಮನವರ ಪಾವನ ಕ್ಷೇತ್ರವೇ ಮಾಣಿಬೆಟ್ಟು. ಶ್ರೀಗುರುಗಳು ಇಲ್ಲಿ ಅಮ್ಮನವರನ್ನು ಆರಾಧಿಸಿಕೊಂಡು ಬಂದಿದ್ದು ತಮ್ಮ ಮಹಾಶಕ್ತಿಯಿಂದ, ವಿಶೇಷ ಪವಾಡಗಳಿಂದ ಭಕ್ತರ ಗುರುವಾಗಿ ಪ್ರಸಿದ್ಧರಾಗಿದ್ದರು ಎನ್ನುವುದು ಇತಿಹಾಸದಲ್ಲಿ ತಿಳಿದು ಬರುವ ಸತ್ಯವಾಗಿದೆ.
ಅಷ್ಟಮಂಗಳದಲ್ಲಿ ತಿಳಿದ ಸತ್ಯವಿದು:
ಇತ್ತೀಚೆಗೆ ಕ್ಷೇತ್ರದಲ್ಲಿ ದೈವಜ್ಞರಾದ ಶ್ರೀ ಶಶಿಧರನ್ ಮಾಂಗಾಡ್ ನೇತೃತ್ವದಲ್ಲಿ ನಡೆದ ಅಷ್ಟಮಂಗಲ ಪ್ರಶ್ನೆಯಲ್ಲಿ ಈ ಕ್ಷೇತ್ರಕ್ಕೂ, ಶ್ರೀ ಶೃಂಗೇರಿ ಮಠಕ್ಕೂ ಅವಿನಾಭಾವ ಸಂಬಂಧ ಇದೆ, ಶ್ರೀಗುರುಗಳಿಂದ ಆರಾಧಿಸಲ್ಪಡುತ್ತಿದ್ದ ಅಮ್ಮನವರೇ ಈಗಿನ ಮಾಣಿಬೆಟ್ಟಿನಲ್ಲಿ ನೆಲೆನಿಂತ ಶ್ರೀ ದುರ್ಗಾಂಬಿಕಾ ಅಮ್ಮನವರು, ಅದೇ ಗುರುವಿನ ವಂಶಸ್ಥರಿಂದ ವರ್ತಮಾನ ಕಾಲದಲ್ಲಿ ಅಮ್ಮನವರು ಪೂಜಿಸಲ್ಪಟ್ಟು ಭಕ್ತರ ಕಷ್ಟಗಳನ್ನು ಪರಿಹರಿಸುತ್ತಿದ್ದಾರೆ ಹಾಗೂ ಕ್ಷೇತ್ರದಲ್ಲಿ ಶ್ರೀ ಗುರುವಿನ ಸಾನಿಧ್ಯವನ್ನೂ ನಿರ್ಮಿಸಬೇಕೆಂದು ಅಪ್ಪಣೆಯಾಗಿರುವುದು ಇಲ್ಲಿನ ಗುರುವಿನ ಮಹಿಮೆಗೆ ಸಾಕ್ಷಿಯಾಗಿದೆ.
ಭಕ್ತಿಯೋಗಿ ಶ್ರೀ ಹರೀಶ ನಾಯ್ಕರು:
ಗುರು ಪರಂಪರೆಯಂತೆ ಇದೀಗ ಶ್ರೀ ಹರೀಶ ನಾಯ್ಕ ಎಂಬವರು ಕ್ಷೇತ್ರದಲ್ಲಿ ಕಳೆದ ಹಲವಾರು ವರ್ಷಗಳಿಂದ ತನ್ನ ವಿಶೇಷ ಶ್ರದ್ಧಾಭಕ್ತಿಯಿಂದ ಅಮ್ಮನನ್ನು ಆರಾಧಿಸಿಕೊಂಡು ಬರುತ್ತಿದ್ದು, ತಾನು ನೀಡುವ ಪ್ರಸಾದ ಹಾಗೂ ಅಭಯದ ನುಡಿಗಳಿಂದ ಅದೆಷ್ಟೋ ಭಕ್ತರ ಸಂಕಷ್ಟಗಳನ್ನು ದೂರಮಾಡಿ ನೆಮ್ಮದಿಯ ಬದುಕನ್ನು ಕಲ್ಪಿಸಿದ್ದಾರೆ. ಹಲವಾರು ವರ್ಷಗಳಿಂದ ಅತ್ತಿತ್ತ ಹೋಗಲಾಗದೆ ಬಂಧಿತರಾಗಿದ್ದ ಇವರು ಇದೀಗ ಅಷ್ಟಮಂಗಲ ಪ್ರಶ್ನೆಯ ನಂತರ ಹೊರಸಂಚರಿಸುವ ಅನುಗ್ರಹವನ್ನು ಅಮ್ಮನವರಿಂದ ಪಡೆದಿದ್ದು, ನುಡಿದಂತೆ ನಡೆಯುವ, ಸರಳ ಸಜ್ಜನಿಕೆಯ ಸಾಕಾರಮೂರ್ತಿಯಾಗಿರುವ, ಸಿದ್ಧಿಪುರುಷರಾದ ಭಕ್ತಿಯೋಗಿ ಶ್ರೀ ಹರೀಶ ನಾಯ್ಕ ಅವರು ಶ್ರೀಗುರು ಹಾಗೂ ಶ್ರೀ ಸ್ವಾಮೀಜಿಯೆಂದೇ ಭಕ್ತರ ಬಾಯಿಯಿಂದ ಕೊಂಡಾಡಲ್ಪಡುತ್ತಿದ್ದಾರೆ.
ಬಾಲ್ಯದಲ್ಲೇ ದೇವರ ಮೇಲಿನ ಅಪಾರ ಭಕ್ತರಾಗಿ, ನಂತರ ಹಂತಹಂತವಾಗಿ ಅಮ್ಮನವರ ಪರೀಕ್ಷೆಯಂತೆ ಅದೆಷ್ಟೋ ಸಂಕಷ್ಟಗಳು ಎದುರಾದರೂ ತಮ್ಮ ನಿಷ್ಠೆ, ಶ್ರದ್ಧೆಯನ್ನು ಬಿಡದೇ ತಾಯಿಯನ್ನು ಆರಾಧಿಸುತ್ತಲೇ ಬಂದ ಇವರಿಂದ ಶ್ರೀ ದೇವಿಯ ಅನುಗ್ರಹ ರೂಪವಾಗಿ ಅದೆಷ್ಟೋ ಪವಾಡ ಸದೃಶ ಘಟನೆಗಳು ನಡೆದಿದೆ. ತನ್ನ ಅಪರಿಮಿತ ಶ್ರದ್ಧಾಪೂರ್ವಕವಾದ ಭಕ್ತಿಯಿಂದ ತಾಯಿ ದುಗರ್ಾಂಬಿಕೆಯನ್ನು ಒಲಿಸಿಕೊಂಡ ಶ್ರೀ ಹರೀಶ ನಾಯ್ಕ ಅವರಿಗೆ ದೇಗುಲದ ಪುನರ್ನಿಮರ್ಾಣದ ಪ್ರೇರಣೆಯಾಗಿರುವುದು ಗುರುಶಕ್ತಿ ಹಾಗೂ ಆಧ್ಯಾತ್ಮ ಶಕ್ತಿಯ ದ್ಯೋತಕವಾಗಿದೆ.
ಶಾಂತಿಧಾಮವಾಗಬೇಕು:
ಇತಿಹಾಸದಲ್ಲಿ ವೈಭವದಲ್ಲಿ ಮೆರೆದು ನಂಬಿ ಬಂದ ಭಕ್ತರ ಇಷ್ಠಾರ್ಥ ಸಿದ್ಧಿಸುವ ಪುಣ್ಯ ನೆಲೆಯಾಗಿದ್ದ ಶ್ರೀ ಮಾಣಿಬೆಟ್ಟು ಕ್ಷೇತ್ರ ಮತ್ತೊಮ್ಮೆ ಸರ್ವಾಂಗ ಸುಂದರವಾಗಿ ನೆಲೆ ನಿಂತು ಭಕ್ತರ ಆಕರ್ಷಣೆಯ ಆರಾಧನಾ ಕೇಂದ್ರವಾಗಬೇಕು, ಬದುಕಿನಲ್ಲಿ ನೊಂದು ಬೆಂದು ಬಳಲಿ ಬಂದವರಿಗೆ ಶಾಂತಿ ನೆಮ್ಮದಿ ನೀಡುವ ಶಾಂತಿಧಾಮವಾಗಬೇಕು ಎನ್ನುವುದು ಕ್ಷೇತ್ರದ ಆಡಳಿತ ಮಂಡಳಿಯ ಅಪೇಕ್ಷೆಯಾಗಿದೆ. ಈ ಕ್ಷೇತ್ರವು ಸಾಮಾಜಿಕ, ಶೈಕ್ಷಣಿಕ, ಆರೋಗ್ಯ, ಆಧ್ಯಾತ್ಮ, ಧಾರ್ಮಿಕ ಅಭಿವೃದ್ಧಿಯ ಜತೆಗೆ ಸಮಾಜದ ಸಮಗ್ರ ಪ್ರಗತಿಗೆ ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡುವ ಕೇಂದ್ರವಾಗಬೇಕೆನ್ನುವ ನೆಲೆಯಲ್ಲಿ ಯೋಚನೆ-ಯೋಜನೆಗಳನ್ನು ರೂಪಿಸಲಾಗಿದೆ.
ಭಕ್ತರ ಕಲ್ಲು ಸಮರ್ಪಣೆ ಯೋಜನೆ :
ಇದು ಶ್ರೀ ಕ್ಷೇತ್ರದ ಮಾಣಿಬೆಟ್ಟಿನ ವಿಶೇಷ ಯೋಜನೆ. ಉಳ್ಳವರ ದೊಡ್ಡ ಪಾಲಿನ ಜತೆಗೆ ಇಲ್ಲದವರ ಚಿಕ್ಕ ಪಾಲು ಸೇರಿ ಕ್ಷೇತ್ರ ನಿರ್ಮಾಣವಾಗಬೇಕೆನ್ನುವುದು ಇಲ್ಲಿನ ಉದ್ಧೇಶ. ಕ್ಷೇತ್ರದ ಕಟ್ಟಡದಲ್ಲಿ ಪ್ರತಿಯೊಂದು ಮನೆಯ ಕನಿಷ್ಠ ಒಂದು ಕಲ್ಲು ಇರಬೇಕೆನ್ನುವುದು ಸಮಿತಿಯ ಸಂಕಲ್ಪ. ಭಕ್ತರು ತಲಾ ಒಂದು ಕಲ್ಲಿನ ಬಾಬ್ತು ರೂ. 250ರಂತೆ ತಮ್ಮ ಶಕ್ತ್ಯಾನುಸಾರ ದೇಣಿಗೆ ನೀಡಿ ಅಮ್ಮನವರ ಸಾನಿಧ್ಯ ನಿರ್ಮಾಣದಲ್ಲಿ ಪ್ರತೀ ಭಕ್ತರ ಪಾಲು ಇರುವಂತಾಗಬೇಕೆನ್ನುವುದು ಕ್ಷೇತ್ರದ ಯೋಜನೆಯಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಕ್ಷೇತ್ರಕ್ಕೆ ಕಲ್ಲುಸಮರ್ಪಣೆ ಯೋಜನೆ ಆರಂಭಗೊಂಡಿದ್ದು ಭಕ್ತರ ಸ್ಪಂದನೆ ದೊರೆತಿದೆ.
ದಾನಿಗಳ ಸಹಾಯದ ನಿರೀಕ್ಷೆ:
ಶ್ರೀ ಕ್ಷೇತ್ರವು ತೀರಾ ಗ್ರಾಮೀಣ ಪ್ರದೇಶದಲ್ಲಿರುವುದರಿಂದ ಪುನರ್ನಿಮಾಣ ಕಾರ್ಯಕ್ಕೆ ಆರ್ಥಿಕ ಅನಾನುಕೂಲತೆ ಇದ್ದು ದಾನಿಗಳು, ಭಕ್ತರು ನೀಡುವ ಸಹಾಯವೇ ಕ್ಷೇತ್ರಕ್ಕೆ ಪ್ರಮುಖ ದೇಣಿಗೆಯಾಗಲಿದೆ. ಈಗಾಗಲೇ ಊರಪರವೂರ ಅನೇಕ ಭಕ್ತಾದಿಗಳು ಕ್ಷೇತ್ರಕ್ಕೆ ನೆರವು ನೀಡುವ ಭರವಸೆ ನೀಡಿದ್ದು ಇನ್ನಷ್ಟು ಆಸ್ತಿಕ ಭಕ್ತಾದಿಗಳ ಸಹಕಾರವನ್ನು ಕ್ಷೇತ್ರವು ಬಯಸುತ್ತಿದೆ. ದಾನಿಗಳು ಸಕಾಲಕ್ಕೆ ಸ್ಪಂದಿಸಿದ್ದಲ್ಲಿ ಶೀರ್ಘದಲ್ಲಿ ಕ್ಷೇತ್ರವು ಸರ್ವಾಂಗ ಸುಂದರವಾಗಿ ರೂಪುಗೊಂಡು ಭಕ್ತರ ಆಕರ್ಷಣೆಯ ಆರಾಧನಾ ಕೇಂದ್ರವಾಗಿ ಕಂಗೋಳಿಸಲಿದೆ.
ಭಗವದ್ಭಕ್ತರು ಕ್ಷೇತ್ರದ ಪುನರ್ನವೀಕರಣದ ಈ ಪುಣ್ಯ ಕಾರ್ಯಕ್ಕೆ ತನು-ಮನ-ಧನಗಳಿಂದ ಸಹಾಯ ನೀಡಿ ಶ್ರೀ ದೇವಿಯ ಕೃಪೆಗೆ ಪಾತ್ರರಾಗಲಿ. ಶ್ರೀ ಮಹಾತಾಯಿ ಭಕ್ತರ ಮನೋಭಿಲಾಷೆಗಳನ್ನು ಈಡೇರಿಸಲಿ, ಸಕಲರಿಗೂ ಸನ್ಮಂಗಲವಾಗಲಿ ಎಂದು ಕ್ಷೇತ್ರದ ಆಡಳಿತ ಧರ್ಮದರ್ಶಿ ಶ್ರೀ ಹರೀಶ ನಾಯ್ಕ ಮಾಣಿಬೆಟ್ಟು ಅವರ ಪ್ರಾರ್ಥನೆ.
ಲೇಖನ: ಗೋಪಾಲ ಅಂಚನ್










