ಬಂಟ್ವಾಳ : ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಮಗಳು ಪ್ರಭಾ ಹತ್ಯೆಯಾದ ಸುದ್ದಿ ಕೇಳುತ್ತಿದ್ದಂತೆಯೇ ಕಲ್ಲಡ್ಕ ಸಮೀಪದ ಅಮ್ಟೂರುವಿನ ತವರು ಮನೆ ನಂದಗೋಕುಲ ಶೋಕಸಾಗರದಲ್ಲಿ ಮುಳುಗಿದೆ. ಸಿಡ್ನಿಯ ಕಂಪೆನಿಯೊಂದರಲ್ಲಿ ಕೆಲಸಕ್ಕಿದ್ದ ಪ್ರಭಾರವರು ಅಮ್ಟೂರು ಗ್ರಾಮದ ಪ್ರಗತಿಪರ ಕೃಷಿಕ ಮಹಾಬಲ ಶೆಟ್ಟಿ ಹಾಗೂ ಸರೋಜಿನಿ ಶೆಟ್ಟಿ ದಂಪತಿಯ ಆರುಮಂದಿ ಮಕ್ಕಳ ಪೈಕಿ ಎರಡನೆಯವರು. 13 ವರ್ಷದ ಹಿಂದೆ ಅರುಣ್ ಕುಮಾರ್ ಜೊತೆ ಮದುವೆ ಮಾಡಿಕೊಡಲಾಗಿದ್ದು, ಮುದ್ದಿನ ಮಗಳು ಮೇಘನಾ ಬೆಂಗಳೂರಿನಲ್ಲಿ ತಂದೆಯ ಜೊತೆ ವಾಸ್ತವ್ಯ ವಿದ್ದಾಳೆ. ಬೆಂಗಳೂರಿನಲ್ಲಿಯೇ ಇಂಜಿನಿಯರ್ ಆಗಿದ್ದ ಪ್ರಭಾರನ್ನು ಕಳೆದ ಮೂರು ವರ್ಷದ ಹಿಂದೆ ಕಂಪೆನಿಯೇ ಹೆಚ್ಚುವರಿ ಜವಬ್ದಾರಿ ನೀಡಿ ಆಸ್ಟ್ರೇಲಿಯಾಕಕ್ಕೆ ವರ್ಗಾಯಿಸಿತ್ತು. ಮುಂದಿನ ಎಪ್ರಿಲ್ ನಲ್ಲಿ ರಜೆ ಹಾಕಿ ಬೆಂಗಳೂರಿಗೆ ಬರುವುದಾಗಿ ಹೇಳಿದ್ದ ಪ್ರಭಾ ದುಷ್ಕರ್ಮಿಗಳ ಇರಿತಕ್ಕೆ ಒಳಗಾಗಿ ಹತ್ಯೆ ಗೀಡಾಗಿರುವುದು ಈ ಕುಟುಂಬಕ್ಕೆ ಆಘಾತ ತಂದಿದೆ.

ಪ್ರಭಾ ರವರು ಅಮ್ಟೂರಿನಲ್ಲಿ ಪ್ರಥಾಮಿಕ ವಿದ್ಯಾಭ್ಯಾಸ ಪಡೆದಿದ್ದು, ಮಂಗಳೂರಿನಲ್ಲಿ ಹೈಸ್ಕೂಲ ಹಾಗೂ ಕಾಲೇಜು ವ್ಯಾಸಾಂಗ ನಡೆಸಿದ್ದರು. ಬಳಿಕ ಸುಳ್ಯದ ಕೆವಿಜಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರ್ ಪದವಿ ಪಡೆದಿದ್ದರು.
ದುಷ್ಕರ್ಮಿಗಳನ್ನು ನಮಗೆ ಒಪ್ಪಿಸಲಿ..
ಮಗಳನ್ನು ಕಳೆದುಕೊಂಡ ಆಘಾತದಲ್ಲಿರುವ ತಂದೆ ಮಹಾಬಲ ಶೆಟ್ಟಿಯವರು ತೀವ್ರವಾಗಿ ನೊಂದುಕೊಂಡಿದ್ದಾರೆ. ಭಾನುವಾರ ಸಂಜೆಯ ವೇಳೆಗೆ ಈ ಘಟನೆಯ ಸಂಪೂರ್ಣ ಚಿತ್ರಣ ಇವರಿಗೆ ಗೊತ್ತಾಗಿದ್ದು, ಆರೋಪಿಗಳನ್ನು ನಮ್ಮ ಕೈಗೆ ಕೊಡಲಿ ನಾವವರನ್ನು ನೋಡಿಕೊಳ್ಳುತ್ತೇವೆ ಎಂದವರು ಪತ್ರಿಕೆಯೊಂದಿಗೆ ಮಾತನಾಡುತ್ತಾ ಹೇಳಿದರು. ಆಸ್ಟ್ರೆಲಿಯಾದಲ್ಲಿ ಉದ್ಯೋಗಕ್ಕೆ ಹೋದವರಿಗೆ ಭದ್ರತೆಯೇ ಇಲ್ಲವಲ್ಲ, ಹೀಗಾದರೆ ಉದ್ಯೋಗಕ್ಕೆ ಪರದೇಶಕ್ಕೆ ಹೋದವರ ಗತಿಯೇನು ಎಂದು ಪ್ರಶ್ನಿಸುತ್ತಾರೆ ಪ್ರಭಾ ಅವರ ಸಹೋದರ ಶಿವಪ್ರಕಾಶ್. ಪ್ರಭಾ ಅವರ ಪತಿ ಅರುನ್ ಕುಮಾರ್ ಅವರು ಇಂದು ಸಂಜೆ ಸಿಡ್ನಿ ತಲುಪಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ. ಅಲ್ಲಿನ ಪೊಲೀಸರು ನೀಡಿರುವ ಮಾಹಿತಿಯಂತೆ ಘಟನಾ ಸ್ಥಳದಲ್ಲಿದ್ದ ಇಬ್ಬರು ಪ್ರಮುಖ ಸಾಕ್ಷಿಗಳು ಪೊಲೀಸರಿಗೆ ತನಿಖೆಗೆ ಸಹಕರಿಸುವುದಾಗಿ ತಿಳಿಸಿದ್ದು, ಆರೋಪಿಗಳನ್ನು ಶೀಘ್ರ ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ

