ತಿರುಪತಿ: ತಿರುಪತಿ ತಿರುಲಮ ದೇವಸ್ಥಾನದ ಸುತ್ತ ಆವರಿಸಿಕೊಂಡಿರುವ ಕಾಡಿಗೆ ಬೆಂಕಿ ತಗುಲಿದ್ದು ದಿನದಿಂದ ದಿನಕ್ಕೆ ತನ್ನ ಜ್ವಾಲೆಯನ್ನು ಹೆಚ್ಚಿಸುತ್ತಲೇ ಸಾಗುತ್ತಿದೆ. ದೇವಸ್ಥಾನದಿಂದ ಕೇವಲ ಮೂರು ಕಿ.ಮೀ ದೂರವಿರುವ ಶೇಷಾಚಲಂ ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು ಕೂಡಲೇ ಹತ್ತಿರದ ಪ್ರದೇಶಗಳಾದ ಪಾಪವಿನಾಶನಂ, ಗೋಗರ್ಭಂ, ವಮಂದೂರು ಅರಣ್ಯಗಳಿಗೂ ವ್ಯಾಪಿಸಿದೆ. ಈ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ಪ್ರಾಣಿ ಪಕ್ಷಿಗಳು ಬೆಂಕಿಯ ಕೆನ್ನಾಲಗೆಗೆ ಸಿಲುಕಿ ಸಾವನ್ನಪ್ಪಿರಬಹುದೆಂದು ಆತಂಕ ವ್ಯಕ್ತಪಡಿಸಲಾಗಿದೆ.

ದೇವಸ್ಥಾನ ಆಡಳಿತ ಬೆಂಕಿ ನಂದಿಸಲು ನೌಕಾ ಪಡೆಯ ಸಹಾಯ ಕೋರಿದೆ. ಆದರೆ ನೌಕಾ ಪಡೆಯಲ್ಲಿ ಬೆಂಕಿ ಶಮನ ಸಾಧನಗಳು ಇಲ್ಲದಿರುವುದು ಕಾರ್ಯಾಚರಣೆಗೆ ಹಿನ್ನಡೆಯುಂಟು ಮಾಡಿದೆ. ಸುಮಾರು 500ರಷ್ಟು ಮಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಸುತ್ತಮುತ್ತಲ ಅಂಗಡಿ ಮುಂಗಟ್ಟುಗಳು ಮತ್ತು ಬೆಟ್ಟದ ಹಾದಿಯನ್ನು ಮುಚ್ಚಲಾಗಿದೆ.
