ಮಂಗಳೂರು: ಮಂಗಳೂರಿನಿಂದ ನಂತೂರು ಮೂಲಕ ಮೂಡುಬಿದಿರೆ- ಕಾರ್ಕಳ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 169ನ್ನು ಅಭಿವೃದ್ಧಿಗೊಳಿಸುವಂತೆ ಆಗ್ರಹಿಸಿ ಮಿಜಾರು ನಾಗರಿಕ ಹಿತರಕ್ಷಣಾ ವೇದಿಕೆಯು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರಿಗೆ ಮನವಿ ಸಲ್ಲಿಸಿದೆ.

ಈ ಹೆದ್ದಾರಿ ಅಭಿವೃದ್ಧಿ ಯೋಜನೆಯನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು, ಕೇಂದ್ರ ಸರಕಾರದ ಭೂ ಸಾರಿಗೆ ಸಚಿವಾಲಯಕ್ಕೆ ಅನುಮೋದನೆಗಾಗಿ ಕಳುಹಿಸಿ ವರ್ಷಗಳು ಕಳೆದಿದ್ದರೂ ಇದುವರೆಗೆ ಮಂಜೂರಾತಿ ಆಗಿಲ್ಲ.

ಹೆದ್ದಾರಿ ರಸ್ತೆ ಬಹಳಷ್ಟು ಕಿರಿದಾಗಿದೆ. ಗುರುಪುರ ಸೇತುವೆ ಸ್ವಾತಂತ್ರ್ಯ ಪೂರ್ವದಾಗಿದ್ದು ತೀರಾ ಶಿಥಿಲವಾಗಿ ಅಪಾಯದ ಅಂಚಿನಲ್ಲಿದೆ. ಕುಲಶೇಖರ, ಗುರುಪುರ, ಎಡಪದವು, ಮೂಡುಬಿದಿರೆ, ಸಾಣೂರು, ಚಿಲಿಂಬಿ, ಕಾರ್ಕಳ ಮೊದಲಾದೆಡೆ ತೀವ್ರ ಇಕ್ಕಟ್ಟಾಗಿದ್ದು, ಕಡಿದಾದ ತಿರುವು ಮುರುವು ರಸ್ತೆಗಳಿವೆ. ಪ್ರತಿದಿನ ಈ ರಸ್ತೆಗಳಲ್ಲಿ ಅಪಘಾತಗಳಾಗಿ ದಿನನಿತ್ಯ ಸಾವು ನೋವು ಸಾಮಾನ್ಯವಾಗಿ ಬಿಟ್ಟಿದೆ.

ಈ ಬಗ್ಗೆ ಹಲವು ಮನವಿಗಳನ್ನು ಸಂಬಂಧಪಟ್ಟ ಸಂಸದರಿಗೆ, ಶಾಸಕರಿಗೆ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಅದುದರಿಂದ ನನೆಗುದಿಗೆ ಬಿದ್ದಿರುವ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆಯನ್ನು ಕೇಂದ್ರ ಸರಕಾರದ ಭೂ ಸಾರಿಗೆ ಸಚಿವಾಲಯದ ಮಂಜೂರಾತಿ ಪಡೆಯಲು ಸೂಕ್ತ ಕ್ರಮ ಕೈಗೊಳ್ಳುವಂತೆ ನಾಗರಿಕರ ಪರವಾಗಿ ಜಿಲ್ಲಾಧಿಕಾರಿ ಅವರಲ್ಲಿ ಕೋರಿದ್ದಾರೆ.

ಮಿಜಾರು ನಾಗರಿಕ ಹಿತರಕ್ಷಣಾ ವೇದಿಕೆ ಗೌರವಾಧ್ಯಕ್ಷ ಅಬ್ದುಲ್ ಹಮೀದ್, ಉಪಾಧ್ಯಕ್ಷ ಸುಧಾಕರ ಪೂಂಜಾ ಮಿಜಾರು, ಕಾರ್ಯದರ್ಶಿ ಉಮೇಶ್ ರಾವ್ ಮಿಜಾರು ಹಾಗೂ ರೈತ ಮುಖಂಡ ಯಾದವ ಶೆಟ್ಟಿ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *