ಕಾಸರಗೋಡು: ಹಟ್ಟಿಯಿಂದ ನಿರಂತರವಾಗಿ ಜಾನುವಾರು ಕಳವಾಗುತ್ತಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ನೊಂದ ನಾಗರಿಕರು ಕೊನೆಗೆ ದೇವರ ಮೊರೆ ಹೋದ ವಿದ್ಯಾಮಾನ ಕಾಸರಗೋಡಿನ ಬಾಯಿಕಟ್ಟೆ, ಅಟ್ಟೆಗೋಳಿ ಎಂಬ ಪರಿಸರದಲ್ಲಿ ನಡೆದಿದೆ.

ಕಳೆದ ಫೆಬ್ರವರಿ 26ರಂದು ನೂರಾರು ಸಂಖ್ಯೆಯಲ್ಲಿ ಸೇರಿದ ನಾಗರೀಕರು, ಸ್ಥಳೀಯ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಿದ್ದಾರೆ. ಇನ್ನುಳಿದ ಹಸುಗಳಿಗೆ ಸೂಕ್ತ ರಕ್ಷಣೆ ಕೊಡುವಂತೆ ಪ್ರಾರ್ಥಿಸಿದ ನಾಗರಿಕರು ದನಕಳ್ಳರಗೆ ಸೂಕ್ತ ಸದ್ಬುದ್ಧಿ ಕೊಡು ಎಂದು ಆಗ್ರಹಿಸಿದರು.
ಕಳೆದ ಹಲವು ವರ್ಷಗಳಿಂದ ಬಾಯಿಕಟ್ಟೆ, ಅಟ್ಟೆಗೋಳಿ ಪರಿಸರ ಪ್ರದೇಶದಲ್ಲಿ ಹಸುಗಳನ್ನು ಹಟ್ಟಿಗಳಿಂದ ಹಗಲು, ಇರುಳೆನ್ನದೆ ವ್ಯಾಪಕವಾಗಿ ಕಳವುಗೈಯ್ಯುತ್ತಿರುವ ಘಟನೆಗಳು ನಡೆಯುತ್ತಿವೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೆ, ಕೆಲವೊಮ್ಮೆ ಪೊಲೀಸರು ದನ ಕಳ್ಳರನ್ನು ಹಿಡಿದು ಅವರಿಂದ ದಂಡ ಸ್ವೀಕರಿಸಿ ಬಿಡುಗಡೆಗೊಳಿಸುತ್ತಿದ್ದು, ಮತ್ತೆ ಅವರು ತಮ್ಮ ಅದೇ ಕಳ್ಳತನ ವೃತ್ತಿಗೆ ಇಳಿಯುತ್ತಿರುವುದು ಮುಂದುವರಿಯುತ್ತಿತ್ತು. ಇದು ಜನರ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ಊರ ನಾಗರಿಕರು ಒಟ್ಟಾಗಿ ದನ ಕಳ್ಳರ ತಂಡವನ್ನು ಸದೆಬಡಿಯಲು ಕೆಲವು ಬಾರಿ ಯತ್ನಿಸಿದಾಗ ತಂಡ ಮಾರಕಾಯುಧಗಳೊಂದಿಗೆ ಮಾರಣಾಂತಿಕ ಹಲ್ಲೆಗೆತ್ನಿಸುತ್ತಿರುವುದು ನಾಗರಿಕರನ್ನು ಇನ್ನಷ್ಟು ಭೀತಿಗೊಳಿಸಿತ್ತು. ಪೊಲೀಸರಿಗೆ ದೂರು ನೀಡಿದರೂ ಪೊಲೀಸರು ಇದರ ವಿರುದ್ಧ ಯಾವುದೇ ರೀತಿಯ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲವೆಂದು ಆರೋಪಿಸಿದ್ದಾರೆ.
