ಬಂಟ್ವಾಳ:ತಾಲ್ಲೂಕಿನ ಬ್ರಹ್ಮರಕೂಟ್ಲು ಸಮೀಪದ ಕಳ್ಳಿಗೆ ಗ್ರಾಮ ಕಾರಣಿಕ ಪ್ರಸಿದ್ಧ ಕನಪಾಡಿ ದೈವಸ್ಥಾನದಲ್ಲಿ ಶ್ರೀ ಕನಪಡಿತ್ತಾಯ, ಧೂಮಾವತಿ-ಬಂಟ, ಪಿಲಿಚಾಮುಂಡಿ ಪಂಜುರ್ಲಿ ಹಾಗೂ ಪರಿವಾರ ದೈವಗಳ ದೈವಸ್ಥಾನಕ್ಕೆ ರೂ 80ಲಕ್ಷ ವೆಚ್ಚದಲ್ಲಿ ಸಂಪೂರ್ಣ ಪುನರ್ ನಿರ್ಮಾಣಗೊಂಡ ಸುತ್ತು ಪೌಳಿ ಸಮರ್ಪಣೆ ಮತ್ತು ದೈವಗಳಿಗೆ ಬ್ರಹ್ಮಕಲಶೋತ್ಸವವು ಇದೇ 28ರಿಂದ ಮಾ.4ರತನಕ ನಡೆಯಲಿದೆ ಎಂದು ದೇವಸ್ಥಾನ ವ್ಯವಸ್ಧಾಪನಾ ಸಮಿತಿ ಅಧ್ಯಕ್ಷ ಬಿ.ರಾಜಶೇಖರ ರೈ ಕಳ್ಳಿಗೆ ತಿಳಿಸಿದ್ದಾರೆ.
ಬಂಟ್ವಾಳ ತಾಲ್ಲೂಕಿನ ಬ್ರಹ್ಮರಕೂಟ್ಲು ಸಮೀಪದ ಕಾರಣಿಕ ಪ್ರಸಿದ್ಧ ಕನಪ್ಪಾಡಿ ದೈವಸ್ಥಾನ ಗರ್ಭಗುಡಿ ಮತ್ತು ಧ್ವಜಸ್ತಂಭ ತಾಮ್ರ ಕವಚದಿಂದ ಕಂಗೊಳಿಸುತ್ತಿದೆ.

ಬಂಟ್ವಾಳ ತಾಲ್ಲೂಕಿನ ಬ್ರಹ್ಮರಕೂಟ್ಲು ಸಮೀಪದ ಕಾರಣಿಕ ಪ್ರಸಿದ್ಧ ಕನಪ್ಪಾಡಿ ದೈವಸ್ಥಾನದಲ್ಲಿ ಸುತ್ತು ಗೋಪುರ ಸಂಪೂರ್ಣ ಪುನರ್ ನವೀಕರಣಗೊಂಡಿದೆ.
ಕನಪಾಡಿಯಲ್ಲಿ ಈಚೆಗೆ ಪತ್ರಿಕಾಗೊಷ್ಠಿಯಲ್ಲಿ ಅವರು ಮಾತನಾಡಿ, ವೇದಮೂರ್ತಿ ಪೊಳಲಿ ಸುಬ್ರಹ್ಮಣ್ಯ ತಂತ್ರಿಗಳ ನೇತೃತ್ವದಲ್ಲಿ ನಡೆಯುವ ಬ್ರಹ್ಮಕಲಶೋತ್ಸವಕ್ಕೆ ಇದೇ 28ರಂದು ಸಂಜೆ4.30ಕ್ಕೆ ಪೆರಿಯೋಡಿ ಬೀಡಿಯಿಂದ ಭಂಡಾರ ಹೊರಡಲಿದೆ. ಸಂಜೆ 5.30ರಿಂದ ಹೊರಕಾಣಿಕೆ ಸಮರ್ಪಣೆ, ಸಂಜೆ 6.30ರಿಂದ ಪ್ರಸಾದ ಪರಿಗ್ರಹ ಪ್ರಾರ್ಥನೆ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಪುಣ್ಯಾಹ ಆಚಾರ್ಯವಾದಿ, ಋತ್ವಿಗ್ವರಣ ಸಪ್ತಶುದ್ಧಿ, ಪ್ರಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜೆ, ದಿಶಾ ಬಲಿ ನಡೆಯಲಿದೆ ಎಂದರು.
ಧಾರ್ಮಿಕ ಸಭೆಯಲ್ಲಿ ಸುಬ್ರಹ್ಮಣ್ಯ ಸಂಸ್ಥಾನ ವಿದ್ಯಾಪ್ನಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಸಮಿತಿ ಗೌರವಾಧ್ಯಕ್ಷ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅಧ್ಯಕ್ಷತೆ ವಹಿಸಲಿದ್ದಾರೆ.
ಬೆಂಗಳೂರು ನಿರ್ಮಾ ಣ್ ಕಂಟ್ರಾಕ್ಟರ್ ಎಂಜಿನಿಯರ್ ಸಂಸ್ಥೆಯ ಆಡಳಿತ ನಿರ್ಧೇಶಕ ಉದಯ ಹೆಗ್ಡೆ, ಕಲ್ಲಡ್ಕ -ನೆಟ್ಲ ಶ್ರೀ ನಿಟಿಲೇಶ್ವರ ದೇವಸ್ಥಾನ ಅಧ್ಯಕ್ಷ ಬಿ.ಆಶೋಕ್ ಕುಮಾರ್ ಬರಿಮಾರ್, ಮಂಗಳೂರು ಕೆಪಿಟಿ ಪ್ರಾಂಶುಪಾಲ ಕರುಣಾಕರ ರೈ ಮಿಜಾರುಗುತ್ತು ಮತ್ತಿತರ ಗಣ್ಯರು ಭಾಗವಹಿಸುವರು ಎಂದು ಅವರು ವಿವರಿಸಿದರು.
