ನವದೆಹಲಿ: ವಿರೋಧ ಮಧ್ಯೆಯೂ ಭೂಸ್ವಾಧೀನ ಸುಗ್ರೀವಾಜ್ಞೆ ಹೊರಡಿಸಿದ್ದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸಂಕಟಕ್ಕೆ ಸಿಕ್ಕಿ ಹಾಕಿಕೊಂಡಿದೆ. ಸುಗ್ರೀವಾಜ್ಞೆ ವಿರುದ್ಧ ಸದನದಲ್ಲಿ ವಿಪಕ್ಷಗಳು ಸರ್ಕಾರದ ವಿರುದ್ಧ ಮುಗಿಬಿದ್ದಿದ್ದರೆ, ಇನ್ನೊಂದೆಡೆ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಸೋಮವಾರದಿಂದ ದೆಹಲಿಯ ಜಂತರ್ಮಂತರ್ನಲ್ಲಿ ಭಾರೀ ಹೋರಾಟಕ್ಕೆ ಚಾಲನೆ ನೀಡಿದ್ದಾರೆ. ಇದೇ ವೇಳೆ ಅಣ್ಣಾ ಆರಂಭಿಸಿರುವ ಪ್ರತಿಭಟನೆಯಲ್ಲಿ ಮಂಗಳವಾರ ಭಾಗಿಯಾಗುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ.
ಹೀಗೆ ಸದನದ ಒಳಗೂ-ಹೊರಗೂ ಹೋರಾಟ ಆರಂಭವಾಗಿರುವುದು ಬಜೆಟ್ ಅಧಿವೇಶನದ ವೇಳೆ ಕೇಂದ್ರ ಸರ್ಕಾರವನ್ನು ಬಹುವಾಗಿ ಕಾಡುವುದಂತೂ ನಿಶ್ಚಿತ. ಹೀಗಾಗೇ, ಈ ಸಂಕಟದಿಂದ ಎದುರಾಗುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲು ಬಿಜೆಪಿ ಸಂಸದೀಯ ಮಂಡಳಿ, ಸೋಮವಾರ ರಾತ್ರಿ ಸಭೆ ಸೇರಿ ಚರ್ಚೆ ನಡೆಸಿದೆ.

ಹೋರಾಟದ ಕಣಕ್ಕೆ ಅಣ್ಣಾ: “ಜಂತರ್ ಮಂತರ್’ನಲ್ಲಿ ಧರಣಿ ಆರಂಭಿಸಿ ಮಾತನಾಡಿದ ಅಣ್ಣಾ, ದೇಶಾದ್ಯಂತ ಇನ್ನು ಮೂರು ತಿಂಗಳ ಕಾಲ ಪಾದಯಾತ್ರೆ ನಡೆಸಿ, ಭೂಸ್ವಾಧೀನ ಕಾಯ್ದೆಯಲ್ಲಿ ಮಾಡಲಾಗಿರುವ ಬದಲಾವಣೆ ಕುರಿತು ಜನಜಾಗೃತಿ ಮೂಡಿಸಲಾಗುವುದು. ತದನಂತರ ದೆಹಲಿಗೆ ಮರಳಿ ರಾಮಲೀಲಾ ಮೈದಾನದಿಂದ ಜೈಲ್ ಭರೋ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ಘೋಷಿಸಿದರು.
“ಚುನಾವಣೆ ಸಂದರ್ಭದಲ್ಲಿ ಮೋದಿ ಬಿಜೆಪಿ ಅಚ್ಛೇ ದಿನದ ಭರವಸೆ ನೀಡಿದ್ದರು. ಆದರೆ ಒಳ್ಳೆಯ ದಿನಗಳು ಕಾರ್ಪೋರೆಟ್ ಧಣಿಗಳಿಗೆ ಮಾತ್ರ ಬಂದಿವೆ. ಹೋರಾಟದಲ್ಲಿ ಮೇಧಾ ಪಾಟ್ಕರ್ ಕೂಡ ಪಾಲ್ಗೊಂಡಿದ್ದಾರೆ. ಬುಧವಾರ ಸಂಜೆ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕೂಡ ಅಣ್ಣಾರನ್ನು ಭೇಟಿಯಾದರು.
