ಉಳ್ಳಾಲ: ಮನೆಮಂದಿಯನ್ನು ನೋಡಿಕೊಳ್ಳಿ, ಮುಂದೆ ತಾನು ಇರುವುದಿಲ್ಲ ಎಂದು ಸಹೋದರನಿಗೆ ಕರೆ ಮಾಡಿ ನಾಪತ್ತೆಯಾಗಿದ್ದ ಯುವಕನ ಮೃತದೇಹ ಸೋಮೇಶ್ವರ ಸಮುದ್ರತೀರದಲ್ಲಿ ಪತ್ತೆಯಾಗಿದೆ.
ಮುನ್ನೂರು ಗ್ರಾಮದ ಕುತ್ತಾರು ದೇವಸ್ಥಾನ ಸಮೀಪದ ನಿವಾಸಿ ನವೀನ್ (35) ನಾಪತ್ತೆಯಾದವರು. ನವೀನ್ ಫೆ.16 ರಂದು ಸಂಜೆ 3.30ರ ಹೊತ್ತಿಗೆ ಸಹೋದರ ರಾಜ್ಕಿರಣ್ ಎಂಬವರ ಮೊಬೈಲಿಗೆ ಕರೆ ಮಾಡಿ ` ಹೆತ್ತವರನ್ನು ನೀನು ಚೆನ್ನಾಗಿ ನೋಡಿಕೊಳ್ಳಬೇಕು. ನಾನು ಇನ್ನು ಇರುವುದಿಲ್ಲ’ ಎಂದು ದು:ಖದಿಂದ ತಿಳಿಸಿ ನಾಪತ್ತೆಯಾಗಿದ್ದರು.
ಬಳಿಕ ಮೊಬೈಲಿಗೆ ಕರೆ ಮಾಡಿದರೂ ಕನೆಕ್ಷನ್ ಸಿಕ್ಕಿರಲಿಲ್ಲ. ಇನ್ನೋರ್ವ ಸಹೋದರ ಪ್ರಶಾಂತ್ ಮತ್ತು ಹಲವರು ಸೇರಿಕೊಂಡು ನವೀನ್ಗಾಗಿ ಹುಡುಕಾಟ ನಡೆಸಿದಾಗ ಉಳ್ಳಾಲದ ಸೋಮೇಶ್ವರ ದೇವಸ್ಥಾನದ ಬಲಬದಿಯಲ್ಲಿ ಆತನ ಬೈಕ್ ಪತ್ತೆಯಾಗಿತ್ತು. ಸೋಮವಾರ ಸಂಜೆಯಿಂದಲೇ ಹುಡುಕಾಟ ಆರಂಭಿಸಿದ್ದರೂ, ಮಂಗಳವಾರ ಮಧ್ಯಾಹ್ನದವರೆಗೂ ಪತ್ತೆಯಾಗಿರಲಿಲ್ಲ. ಸಂಜೆ ವೇಳೆ ಮೃತದೇಹ ಸೋಮೇಶ್ವರ ಸಮುದ್ರ ತೀರದಲ್ಲಿ ಪತ್ತೆಯಾಗಿದೆ. ನವೀನ್ ಜೀವನದಲ್ಲಿ ಜಿಗುಪ್ಸೆ ಹೊಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿದೆ.
ಟಿ.ವಿ ಟೆಕ್ನೀಷಿಯನ್ ಆಗಿದ್ದ ನವೀನ್ ಉಳ್ಳಾಲ ವ್ಯಾಪ್ತಿಯಲ್ಲಿ ಉತ್ತಮ ಟೆಕ್ನೀಷಿಯನ್ ಅನಿಸಿಕೊಂಡಿದ್ದರು. ಒಂದೂವರೆ ವರ್ಷದ ಹಿಂದೆ ವಿವಾಹವಾಗಿದ್ದ ಇವರಿಗೆ 15 ದಿನದ ಹೆಣ್ಣು ಮಗುವೊಂದಿದೆ. ಗುರುವಾರ (ನಾಳೆ) ನಾಮಕರಣ ಸಮಾರಂಭವಿತ್ತು. ಕಾರ್ಯಕ್ರಮಕ್ಕೆ ಸಂಬಂಧಿಕರನ್ನು ಆಹ್ವಾನಿಸಿದ್ದರು. ಆದರೆ ನಾಮಕರಣದ ಮೊದಲೇ ಹೆಣವಾಗಿರುವುದು ಮನೆಮಂದಿಯನ್ನು ದು:ಖದ ಮಡುವಿನಲ್ಲಿ ದೂಡಿದೆ.






