ಸುದ್ದಿ9 ತೊಕ್ಕೊಟ್ಟು: ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ಅವಹೇಳನಕಾರಿಯಾಗಿ ಸಾಮಾಜಿಕ ಜಾಲತಾಣ ವಾಟ್ಸಾಪ್ನಲ್ಲಿ ಪ್ರಕಟಿಸಿದ ಎಸ್ಎಫ್ಐ ನಾಯಕನ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಸ್ಎಫ್ಐನ ರಾಜ್ಯ ಜತೆ ಕಾರ್ಯದರ್ಶಿ ಜೀವನ್ ರಾಜ್ ಕುತ್ತಾರ್ ವಿರುದ್ಧ ಪ್ರಕರಣ ದಾಖಲಾಗಿದೆ. ದೆಹಲಿ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಅಂತರ್ಜಾಲ ತಾಣಗಳಲ್ಲಿ ದೆಹಲಿ ನಿಯೋಜಿತ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬೇಟೆಯಾಡಿದ ರೀತಿಯಲ್ಲಿ ಒಂದು ಕೈಯಲ್ಲಿ ಕೋವಿಯನ್ನು ಹಿಡಿದು ಇನ್ನೊಂದು ಕೈಯಲ್ಲಿ ಪ್ರಾಣಿಯೊಂದರ ಮುಖಕ್ಕೆ ಪ್ರಧಾನಿಯವರ ಮುಖವನ್ನು ಜೋಡಣೆ ಮಾಡಿ ದೇಶಕ್ಕೆ ಅವಮಾನ ಮಾಡಿದ್ದಾರೆ. ಅದರಿಂದ ದೇಶದ 125ಕೋಟಿ ಜನ ಭಾರತೀಯರ ಭಾವನೆಗಳಿಗೆ ಘಾಸಿಯಾಗಿದೆ ಎಂದು ಆರೋಪಿಸಿದ್ದಾರೆ. ಫೆ. 11ರಂದು ವಾಟ್ಸಾಪ್ನ ಗ್ರೂಪ್ನಲ್ಲಿ ಜೀವನ್ರಾಜ್ ಕುತ್ತಾರ್ ಮೊಬೈಲ್ ನಂಬರಿನಿಂದ ಅವಹೇಳನಕಾರಿ ಚಿತ್ರ ಬಂದಿದೆ. ಅದರಂತೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರ ಕಾರ್ಯದರ್ಶಿ ದಯಾನಂದ ತೊಕ್ಕೊಟ್ಟು ಉಳ್ಳಾಲ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
