ಕೈಕಂಬ : ಪೊಳಲಿಗೆ ಹತ್ತಿರದ ಅಡ್ಡೂರು ಜಂಕ್ಷನ್ನಲ್ಲಿ ಶ್ರೀ ಮುಖ್ಯಪ್ರಾಣ ದೇವಸ್ಥಾನಕ್ಕೆ ಹೋಗಲು ಪ್ರಯತ್ನಿಸಿದ ದ್ವಿಚಕ್ರ ವಾಹನವೊಂದು ಎಲ್ಪಿಜಿ ಸಿಲಿಂಡರ್ ಸಾಗಾಟದ ಲಾರಿಯ ಹಿಂಬದಿಗೆ ಡಿಕ್ಕಿಯಾಗಿ ತಾಯಿ ಮತ್ತು ಮಗ ಗಾಯಗೊಂಡ ಘಟನೆ ಆ. ೨೯ರಂದು ಮಧ್ಯಾಹ್ನ ನಡೆದಿದೆ.

ಸಿಲಿಂಡರ್ ಸಾಗಾಟದ ಲಾರಿ ಮತ್ತು ತಾಯಿ, ಮಗನಿದ್ದ ಸ್ಕೂಟರ್ ಪೊಳಲಿಯಿಂದ ಅಡ್ಡೂರಿನಲ್ಲಿರುವ ಶ್ರೀ ಮುಖ್ಯಪ್ರಾಣ ದೇವಸ್ಥಾನಕ್ಕೆ ಹೋಗುತ್ತಿತ್ತು. ಅಡ್ಡೂರು ಜಂಕ್ಷನ್ನಲ್ಲಿ ಸ್ಕೂಟರ್ನ್ನು ಎಡದಿಂದ ಬಲಕ್ಕೆ ತಿರುಗಿಸಲು ಪ್ರಯತ್ನಿಸಿದಾಗ ಲಾರಿಯ ಹಿಂಬದಿಗೆ ಅಪ್ಪಳಿದೆ. ಸ್ಕೂಟರ್ನಲ್ಲಿದ್ದ ಮಹಿಳೆ ಮತ್ತು ಆಕೆಯ ಮಗ ರಸ್ತೆಗೆ ಎಸೆಯಲ್ಪಟ್ಟಿದ್ದು, ತೀವ್ರ ಗಾಯಗೊಂಡಿದ್ದಾರೆ.
ಗಾಯಾಳು ಪೊಳಲಿಗೆ ಹತ್ತಿರದ ಕಲ್ಕುಟದ ಕೃಷ್ಣಪ್ಪ ಪೂಜಾರಿಯವರ ಪುತ್ರಿ ಶಕುಂತಲಾ ಹಾಗೂ ಆಕೆಯ ಮಗ ಎಂದು ತಿಳಿದು ಬಂದಿದೆ. ಮಹಿಳೆ ಬಿಗ್ ಬ್ಯಾಗ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದು, ಆಕೆಯ ಕಾಲಿಗೆ ಗಂಭೀರ ಗಾಯವಾಗಿದೆ. ಸ್ಥಳದಲ್ಲಿದ್ದ ಸ್ಥಳೀಯರು ಗಾಯಾಳುಗಳನ್ನು ತಕ್ಷಣ ಅಡ್ಡೂರಿನ ಆಂಬುಲೆನ್ಸ್ನಲ್ಲಿ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಬಜ್ಪೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ.
