ಗುರುಪುರ : ರೈತರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೃಷಿ, ತೋಟಗಾರಿಕೆ ಅಥವಾ ಇನ್ನಿತರ ಇಲಾಖೆಗಳು ಮಾಡಬೇಕಾದ ಕೆಲಸ ಗುರುಪುರ ವ್ಯ.ಸೇ.ಸ.ಸಂಘ ಮತ್ತು ಶ್ರೀ ಅಮೃತೇಶ್ವರ ಯಕ್ಷಗಾನ ಪ್ರತಿಷ್ಠಾನದ ವತಿಯಿಂದ ನಡೆಯುತ್ತಿದೆ. ಜೀವನದಲ್ಲಿ ಸಮಸ್ಯೆಯಾದಾಗ ಕೃಷಿ ನೆನಪಾಗುತ್ತದೆ. ಕೋವಿಡ್ ಸಂದರ್ಭದಲ್ಲಿ ನಗರೀಕರಣ ಮತ್ತು ಔದ್ಯೋಗೀಕರಣಕ್ಕೆ ಒಳಗಾಗಿದ್ದ ಮಂದಿಯೂ ಊರಲ್ಲಿ ಬಂದು ಕೃಷಿ ಮಾಡಿದ್ದುಂಟು. ಕೋವಿಡ್ ಬಳಿಕ ಎಲ್ಲರೂ ಸ್ವಸ್ಥಾನಕ್ಕೆ ತೆರಳಿದ್ದಾರೆ. ಉದ್ಯಮಗಳು ಏನೇ ಬರಲಿ, ಕಲ್ಲು-ಮಣ್ಣು ತಿಂದು ಮನುಷ್ಯ ಬದುಕಲಾರ ಎಂಬ ಸತ್ಯ ನಮ್ಮಲ್ಲಿರಬೇಕು. ಸರ್ಕಾರಿ ಯೋಜನೆಗಳು ಮತ್ತು ಸಲಕರಣೆಗಳು ಕೃಷಿಕರಿಗೆ ವಿಳಂಬವಿಲ್ಲದೆ ಮತ್ತು ಅಲೆದಾಟ-ಜಂಜಾಟವಿಲ್ಲದೆ ಲಭಿಸುವಂತಾಗಬೇಕು ಎಂದು ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಹೇಳಿದರು.

ಕೃಷಿ ಇಲಾಖೆ ಮಂಗಳೂರು, ಗುರುಪುರ ವ್ಯ.ಸೇ.ಸ.ಸಂಘ(ನಿ), ಶ್ರೀ ಅಮೃತೇಶ್ವರ ಯಕ್ಷಗಾನ ಪ್ರತಿಷ್ಠಾನ(ರಿ) ವಾಮಂಜೂರು ಇದರ ಜಂಟಿ ಆಶ್ರಯದಲ್ಲಿ ೨೦೨೬-೨೭ನೇ ಸಾಲಿನ ರಾಷ್ಟ್ರೀಯ ಕೃಷಿ ವಿಸ್ತರಣೆ ಉಪ ಅಭಿಯಾನ `ಆತ್ಮ'(ಎಟಿಎಂಎ) ಯೋಜನೆಯಡಿ ವಾಮಂಜೂರು ಶ್ರೀ ಅಮೃತೇಶ್ವರ ದೇವಸ್ಥಾನದದ ಎದುರು ಆ. ೨೨ರಂದು ಆಯೋಜಿಸಲಾದ `ಕಿಸಾನ್ ಗೋಷ್ಠಿ’ ಮತ್ತು `ಕೆಸರ್ಡೊಂಜಿ ದಿನ’ದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು ಎಂದರು.

ಗುರುಪುರ ವ್ಯ.ಸೇ.ಸ.ಸಂಘದ ಅಧ್ಯಕ್ಷ ಓಂ ಪ್ರಕಾಶ್ ಶೆಟ್ಟಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಾಸಕರಾದ ಡಾ. ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್ ಹಾಗೂ ಇತರ ಗಣ್ಯರಿಗೆ ಗೌರವಾರ್ಪಣೆ ಮಾಡುವುದರ ಜೊತೆಗೆ ವ್ಯಾಪ್ತಿ ಪ್ರದೇಶದ ಕೆಲವು ಯಶಸ್ವಿ ಕೃಷಿಕರನ್ನು ಸನ್ಮಾನಿಸಲಾಯಿತು. ಬೆಳೆ ಸಮೀಕ್ಷೆ ಪೋಸ್ಟರ್ ಬಿಡುಗಡೆಗೊಳಿಸಲಾಯಿತು. ಫಲಾನುಭವಿಗಳಿಗೆ ಸಲಕರಣೆ ವಿತರಿಸಲಾಯಿತು.

ಸಾಂಪ್ರದಾಯಿಕ ಶೈಲಿಯಲ್ಲಿ ಕಾರ್ಯಕ್ರಮ ಉದ್ಘಾಟಿಸಲಾಯಿತು. ದೇವಸ್ಥಾನದ ಎದುರು ಗದ್ದೆಯಲ್ಲಿ ಮಹಾಬಲ ಶೆಟ್ಟಿ ಪಣಿಮಜಲು ಅವರು ಕೋಣಗಳಿಂದ ಉಳುಮೆ ಮಾಡಿದರೆ, ಕೃಷಿ ಮಹಿಳೆಯರಾದ ಸುಶೀಲಾ, ಕೋಮಲಾ, ಜಾನಕಿ ಅವರು ನೇಜಿ ನಾಟಿ ಮಾಡಿದರು. ದೀಪ ಬೆಳಗಿಸಿದ ಶ್ರೀ ಅಮೃತೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಬಾಲಕೃಷ್ಣ ಭಟ್ ಅವರು ಆಶೀರ್ವಚನ ನೀಡಿದರು.

ಮಂಗಳೂರು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ವೀಣಾ ಕೆ. ಆರ್., ಅವರು `ಆತ್ಮ’ ಯೋಜನೆಯ ಬಗ್ಗೆ ಮಾತನಾಡಿ, ರೈತ ಮತ್ತು ಸರ್ಕಾರದ ಮಧ್ಯೆ ಇರುವ ಸೇತುವೆಯೇ ಕಿಸಾನ್ ಗೋಷ್ಠಿ. ಈ ಮೂಲಕ ಇಲಾಖೆಗೆ ಸಂಬಂಧಪಟ್ಟಂತೆ ಸರ್ಕಾರಿ ಮಟ್ಟದಲ್ಲಿ ನಡೆದ ಸಂಶೋಧನೆ, ಹೊಸ ಆವಿಷ್ಕಾರಗಳು, ಯೋಜನೆಗಳು, ಬೆಳೆ ಸಮೀಕ್ಷೆ ಬಗ್ಗೆ ಕೃಷಿಕರಿಗೆ ಮಾಹಿತಿ ನೀಡಲಾಗುತ್ತದೆ. ಒಬ್ಬ ಯಶಸ್ವಿ ರೈತ ಮತ್ತೊಬ್ಬ ಕೃಷಿಯಲ್ಲಿ ತೊಡಗಿಸಿಕೊಳ್ಳುವಲ್ಲಿ ಉತ್ತೇಜನ ನೀಡಬೇಕು ಎಂಬ ಉದ್ದೇಶ `ಆತ್ಮ’ದಲ್ಲಿದೆ ಎಂದರು.

ಗುರುಪುರ ವ್ಯ.ಸೇ.ಸ.ಸಂಘದ ಅಧ್ಯಕ್ಷ ಓಂ ಪ್ರಕಾಶ್ ಶೆಟ್ಟಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಾಸಕರಾದ ಡಾ. ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್ ಹಾಗೂ ಇತರ ಗಣ್ಯರಿಗೆ ಗೌರವಾರ್ಪಣೆ ಮಾಡುವುದರ ಜೊತೆಗೆ ವ್ಯಾಪ್ತಿ ಪ್ರದೇಶದ ಕೆಲವು ಯಶಸ್ವಿ ಕೃಷಿಕರನ್ನು ಸನ್ಮಾನಿಸಲಾಯಿತು. ಬೆಳೆ ಸಮೀಕ್ಷೆ ಪೋಸ್ಟರ್ ಬಿಡುಗಡೆಗೊಳಿಸಲಾಯಿತು. ಫಲಾನುಭವಿಗಳಿಗೆ ಸಲಕರಣೆ ವಿತರಿಸಲಾಯಿತು.
ಅಶ್ವಿನ್ ಶೆಟ್ಟಿ ಬೊಂಡಂತಿಲ ಅವರು ಸ್ವಾಗತಿಸಿದರು. ಗೋಕುಲದಾಸ್ ಶೆಟ್ಟಿ ಮತ್ತು ಶ್ರೀದೇವಿ ಅವರು ನಿರೂಪಿಸಿದರು. ಶ್ರೀ ಅಮೃತೇಶ್ವರ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪೂರ್ಣಚಂದ್ರ ತೇಜಸ್ವಿ, ವಿಜ್ಞಾನ ಕೇಂದ್ರದ ಡಾ. ಕೇದಾರನಾಥ, ತೋಟಗಾರಿಕೆ ಅಧಿಕಾರಿ ಕೆ. ಪ್ರವೀಣ್, ಪಶು ವೈದ್ಯಾಧಿಕಾರಿ ಡಾ. ಅಶೋಕ್ ಕೆ. ಆರ್, ಶೆಡ್ಡೆ ಮಂಜುನಾಥ ಭಂಡಾರಿ, ಪ್ರಗತಿಪರ ಕೃಷಿಕ ಮನೋಹರ ಶೆಟ್ಟಿ, ವಿನೋದ್ ಮಾಡ, ಪದ್ಮನಾಭ ಕೋಟ್ಯಾನ್(ಬಿಎಲ್ಪಿ), ಶಶಿಧರ ಹೆಗ್ಡೆ, ಭಾಸ್ಕರ್ ಕೆ, ಹೇಮಲತಾ ಆರ್. ಸಾಲ್ಯಾನ್, ಬಿ. ಚಂದ್ರಹಾಸ ರೈ, ಕೆ. ವಿ. ಶೆಟ್ಟಿ, ಫ್ರಾನ್ಸಿಸ್ ಕುಟಿನ್ಹೊ, ಶ್ರೀ ಅಮೃತೇಶ್ವರ ಯಕ್ಷಗಾನ ಪ್ರತಿಷ್ಠಾನದ ಅಧ್ಯಕ್ಷ ದೀಪಕ್ ಶೆಟ್ಟಿ ಲಿಂಗಮಾರುಗುತ್ತು, ಸಂಘದ ನಿರ್ದೇಶಕರು, ಪ್ರತಿಷ್ಠಾನದ ಪದಾಧಿಕಾರಿಗಳು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು
ಕೆಸರ್ಡೊಂಜಿ ದಿನ :
ಶ್ರೀ ಅಮೃತೇಶ್ವರ ದೇವಸ್ಥಾನದ ಎದುರಿನ ವಿಶಾಲ ಗದ್ದೆಯಲ್ಲಿ ಆಯೋಜಿಸಲಾದ ಕೆಸರ್ಡೊಂಜಿ ದಿನದ ವಿವಿಧ ಸ್ಪರ್ಧೆಗಳಲ್ಲಿ ವ್ಯಾಪ್ತಿ ಪ್ರದೇಶದ ಕೆಲವು ಶಾಲಾ ಮಕ್ಕಳು, ಊರಿನ ಹಿರಿ-ಕಿರಿಯರು ಭಾಗವಹಿಸಿದ್ದರು. ಕೃಷಿ ಮತ್ತು ತೋಟಗಾರಿಕೆಗೆ ಸಂಬಂಧಿಸಿದ ಉಪಕರಣಗಳ ಪ್ರದರ್ಶನ ಏರ್ಪಡಿಸಲಾಗಿತ್ತು.
