ಬಂಟ್ವಾಳ :ಉಡುಪಿಯ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಸೋಮವಾರ ಬಂಟ್ವಾಳ ತಾಲೂಕಿನ ಕಾವಳಪಡೂರು ಗ್ರಾಮದ ಮಧ್ವದಲ್ಲಿರುವ ಶ್ರೀ ಮಧ್ವಾಚಾರ್ಯರು ವಿಶ್ರಾಂತಿ ಪಡೆದ ಪವಿತ್ರ ಕ್ಷೇತ್ರವಾದ ಶ್ರೀ ಮಧ್ವ ಮಂಟಪಕ್ಕೆ ಭೇಟಿ ನೀಡಿದ್ದಾರೆ.

ಈ ಸಂದರ್ಭದಲ್ಲಿ ಓಂಕಾರ ಫ್ರೆಂಡ್ಸ್ (ರಿ.) ಹಾಗೂ ಓಂಕಾರ ಮಹಿಳಾ ಘಟಕ, ಮಧ್ವ ವತಿಯಿಂದ ಶ್ರೀಗಳಿಗೆ ಭಕ್ತಿಪೂರ್ವಕವಾಗಿ ಪಾದಪೂಜೆ ನೆರವೇರಿಸಿ ಗೌರವ ಸಲ್ಲಿಸಲಾಯಿತು.
ಇದೇ ವೇಳೆ ಶ್ರೀ ಮಧ್ವ ಮಂಟಪದಲ್ಲಿ ಬಾಲಗೋಕುಲ, ಕುಣಿತ ಭಜನೆ ಸೇರಿದಂತೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿಯಮಿತವಾಗಿ ನಡೆಸಲು ಸ್ಥಳಾವಕಾಶ ಕಲ್ಪಿಸಬೇಕೆಂದು ಶ್ರೀಗಳಿಗೆ ಮನವಿ ಸಲ್ಲಿಸಲಾಯಿತು.
ಮನವಿಯನ್ನು ಸ್ವೀಕರಿಸಿದ ಶ್ರೀಗಳು ಬಳಿಕ ಆಶೀರ್ವಚನ ನೀಡಿದರು. ಶ್ರೀ ಮಧ್ವ ಮಂಟಪದ ವ್ಯವಸ್ಥಾಪಕರಾದ ರಾಘವೇಂದ್ರ ಭಟ್ ಮಠ, ಮದ್ದಡ್ಕ, ಓಂಕಾರ ಫ್ರೆಂಡ್ಸ್ (ರಿ.) ಹಾಗೂ ಓಂಕಾರ ಮಹಿಳಾ ಘಟಕದ ಪದಾಧಿಕಾರಿಗಳು, ಸದಸ್ಯರು, ಭಕ್ತರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು
