ಬಂಟ್ವಾಳ: ಯುವವಾಹಿನಿ (ರಿ.) ಮಾಣಿ ಘಟಕವು ಆರಂಭಿಸಿರುವ ‘ಯುವ ಸೇವಾ ಸ್ಪರ್ಶ’ ಹಾಗೂ ‘ಯುವ ಆರೋಗ್ಯ ಸ್ಪರ್ಶ’ ಎಂಬ ವಿನೂತನ ಸಮಾಜಸೇವಾ ಯೋಜನೆಗಳಿಗೆ ಚಾಲನೆ ನೀಡಲಾಯಿತು. ಘಟಕದ ಅಧ್ಯಕ್ಷರಾದ ಗಣೇಶ್ ಸಾಯಿ ಕೊಡಾಜೆ ಅವರು ಅಧ್ಯಕ್ಷತೆಯಲ್ಲಿಯುವ ಸೇವಾ ಸ್ಪರ್ಶ ಯೋಜನೆಯ ಮೊದಲನೇ ಸೇವಾ ಹಸ್ತದಡಿ, ಮಾಣಿ ಗ್ರಾಮದ ದಿವಂಗತ ವೀರಪ್ಪ ಪೂಜಾರಿ ಅವರ ಕುಟುಂಬಕ್ಕೆ ಆಹಾರ ಸಾಮಗ್ರಿಗಳ ಕಿಟ್ ವಿತರಿಸಲಾಯಿತು.

ನಾಲ್ಕು ಹೆಣ್ಣು ಮಕ್ಕಳಿರುವ ಈ ಕುಟುಂಬದಲ್ಲಿ ಮೂವರು ಅನಾರೋಗ್ಯದಿಂದದ್ದು, ಒಬ್ಬರೇ ದುಡಿದು ಕುಟುಂಬದ ನಿರ್ವಹಣೆ ಮಾಡುತ್ತಿರುವ ಕಷ್ಟಕರ ಪರಿಸ್ಥಿತಿಯನ್ನು ಮನಗಂಡು ಯುವವಾಹಿನಿ ವತಿಯಿಂದ ಒಂದು ತಿಂಗಳ ಆಹಾರ ಸಾಮಗ್ರಿಗಳನ್ನು ನೀಡಿ ಮಾನವೀಯತೆ ಮೆರೆಯಿತು.
ಅದೇ ರೀತಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಕಡೇಶಿವಾಲಯ ಗ್ರಾಮದ ಮೋನಪ್ಪ ಪೂಜಾರಿ ಅವರಿಗೆ ಯುವ ಆರೋಗ್ಯ ಸ್ಪರ್ಶ ಯೋಜನೆಯಡಿ ಆರ್ಥಿಕ ನೆರವು ನೀಡಲಾಯಿತು.
ಸಂಕಷ್ಟದಲ್ಲಿರುವ ಕುಟುಂಬಗಳು ಹಾಗೂ ಆರೋಗ್ಯ ಸಮಸ್ಯೆ ಇರುವವರಿಗೆ ನೆರವಾಗುವ ಉದ್ದೇಶದಿಂದ ಆರಂಭಗೊಂಡಿರುವ ಈ ಯೋಜನೆಯ ಮೂಲಕ ಮುಂದಿನ ದಿನಗಳಲ್ಲಿ ಇನ್ನಷ್ಟು ಜನರಿಗೆ ನೆರವನ್ನು ಒದಗಿಸಲಾಗುವುದು ಎಂದು ಅಧ್ಯಕ್ಷರಾದ ಗಣೇಶ್ ಸಾಯಿಯವರು ತಿಳಿಸಿದರು.
ಈ ಸಂದರ್ಭದಲ್ಲಿ ಘಟಕದ ಕಾರ್ಯದರ್ಶಿ ವಿಶ್ವನಾಥ ಪೂಜಾರಿ, ಕೋಶಾಧಿಕಾರಿ ಡಾ.ತ್ರಿವೇಣಿ ರಮೇಶ್ ಮಜಲ, ಆರೋಗ್ಯ ನಿರ್ದೇಶಕ ರತಿ ಕಡೆ ಶಿವಾಲಯ, ಸಮಾಜ ಸೇವಾ ನಿರ್ದೇಶಕ ಸುರೇಶ್ ಪೂಜಾರಿ ಬಾಕಿಲ, ಮಾಜಿ ಅಧ್ಯಕ್ಷ ಹರೀಶ್ ಪೂಜಾರಿ ಬಾಕಿಲ, ರಮೇಶ್ ಪೂಜಾರಿ ಮುಜಾಲ, ಜಯಂತ ಪೂಜಾರಿ ಬರಿಮಾರು, ಗುರುತತ್ವ ನಿರ್ದೇಶಕ ನಾರಾಯಣ ಶ್ರೀಧರ ಪೂಜಾರಿ ಮುಜಲ ಕಲೆ ಮತ್ತು ಸಾಹಿತ್ಯ ನಿರ್ದೇಶಕ ರಾಜೇಶ್ ಕೋಟ್ಯಾನ್ ಹಾಗೂ ಘಟಕದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
