ಬಂಟ್ವಾಳ: ಅಮೃತ ನಗರೋತ್ಥಾನ ಯೋಜನೆ (ಹಂತ-4)ಯಡಿಯಲ್ಲಿ ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ 2.56 ಕೋ.ರೂ.ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಬಂಟ್ವಾಳ ಬಡ್ಡಕಟ್ಟೆ ಹಿಂದೂ ರುದ್ರ ಭೂಮಿಯ ಹಿಂಭಾಗ ನೇತ್ರಾವತಿ ನದಿಕಿನಾರೆಯ ಬಳಿ ಸಸಿ ನೆಡುವ ಮೂಲಕ ಚಾಲನೆ ನೀಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು,ಬಿಜೆಪಿ ಸರಕಾರದ ಅವಧಿಯಲ್ಲಿ ಅಮೃತನಗರೋತ್ತರಾನ ಯೋಜನೆಯಡಿ 100 ಕೋ.ರೂ.ಅನುದಾನ ಬಿಡುಗಡೆಯಾಗಿದ್ದು,ಈ ಅನುದಾನದ 4 ನೇ ಹಂತದಲ್ಲಿ 2.56 ಕೋ.ರೂ.ವಿನ ಕ್ರಿಯಾಯೋಜನೆಗೆ ಪುರಸಭೆ ಅನುಮೋದನೆ ನೀಡಲಾದ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದು ಹೇಳಿದರು.

ಬಂಟ್ವಾಳ ಪುರಸಭಾ ವ್ಯಾಪತಿಯಲ್ಲಿ ಸಮಗ್ರ ಒಳಚರಂಡಿ ಯೋಜನೆ (ಯುಜಿಡಿ)ಗೆ ಪುರಸಭೆಗೆ 60 ಕೋ.ರೂ.ಅನುದಾನ ಬಿಡುಗಡೆಯಾಗಿದ್ದು, ಜಾಗದ ಸಮಸ್ಯೆಯಿಂದಾಗಿ ಅನುಷ್ಠಾನಕ್ಕೆ ಕೊಂಚ ವಿಳಂಬವಾಗಿದ್ದು,ಈ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಿದೆ.ಶೀಘ್ರವೇ ಜಮೀನಿನ ಸಮಸ್ಯೆ ಇತ್ಯರ್ಥವಾಗಲಿದ್ದು,ಬಳಿಕ ಯೋಜನೆಗೆ ಅನುಷ್ಠಾನಕ್ಕೆ ವೇಗ ಸಿಗಲಿದೆ ಎಂದ ಶಾಸಕರು ಜಕ್ರಿಬೆಟ್ಟುವಿನಲ್ಲಿ ರೂ.1.25 ಕೋಟಿ ವೆಚ್ಚದಲ್ಲಿ ನೇತ್ರಾವತಿ ನದಿಗೆ ಅಡ್ಡಲಾಗಿ ಡ್ಯಾಮ್ ಕಮ್ ಬ್ಯಾರೇಜ್ ನಿರ್ಮಾಣವಾದ ಬಳಿಕ ಪುರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಇಲ್ಲ ಹಾಗೆಯೇ ಡ್ಯಾಂನಿಂದ ಅಂತರ್ಜಲವು ವೃದ್ದಿಯಾಗಿಧ ಎಂದರು.ಪುರಸಭಾ ವ್ಯಾಪ್ತಿಯ ಅಭಿವೃದ್ಧಿ ಕಾಮಗಾರಿಗಳ ಸಹಿತ ವಿವಿಧ ಸಮಸ್ಯೆಗಳ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅತೀ ಶೀಘ್ರದಲ್ಲೇ ಆಡಳಿತಾಧಿಕಾರಿ,ಪುರಸಭೆಯ ಅಧಿಕಾರಿಗಳು ಹಾಗೂ ನಿಕಟಪೂರ್ವ ಸದಸ್ಯರನ್ನೊಳಗೊಂಡ ಸಭೆ ಕರೆದು ಚರ್ಚಿಸಲಾಗುವುದು ಎಂದು ಶಾಸಕ ರಾಜೇಶ್ ನಾಯ್ಕ್ ಹೇಳಿದರು.

ಕಾಮಗಾರಿಗಳ ವಿವರ
57.59 ಲ.ರೂ.ವೆಚ್ಚದಲ್ಲಿ ಬಡ್ಡಕಟ್ಟೆ ಹಿಂದೂ ರುದ್ರಭೂಮಿ ಅಭಿವೃದ್ಧಿ ಹಾಗೂ ಉದ್ಯಾನವನ ನಿರ್ಮಾಣ, 29.77 ಲ.ರೂ.ವೆಚ್ಚದಲ್ಲಿ ಪುರಸಭೆಯ ಪರಿಶಿಷ್ಟ ಜಾತಿ ಖಾಯಂ, ನೇರಪಾವತಿ ಪೌರಕಾರ್ಮಿಕರಿಗೆ ವಾಸ್ತವ್ಯದ ವಸತಿ ಸಮುಚ್ಚಯ ನಿರ್ಮಾಣ, 71.46 ಲಕ್ಷ ಬಿ- ಮೂಡ ಗ್ರಾಮದ ಭಂಡಾರಿಬೆಟ್ಟು- ಮೈರಾನಪಾದೆ ಪರಿಶಿಷ್ಟ ಜಾತಿ ಸಮುದಾಯಭವನ ಅಭಿವೃದ್ಧಿ,
ಗಾಂದೋಡಿ ಸಂಪರ್ಕ ಕಾಲುಸಂಕ ಹಾಗೂ ರಸ್ತೆ ಅಭಿವೃದ್ಧಿ, ಬಿ.ಕಸ್ಟಾ ಗ್ರಾಮದ ಮುಗ್ದಾಲ್ ಪ್ರದೇಶದಲ್ಲಿ ಚರಂಡಿ ರಚನೆ, ಚಂಡ್ತಿಮಾರ್ ಸಮುದಾಯ ಭವನ ಅಭಿವೃದ್ಧಿ ಕಾಮಗಾರಿ ನಡೆಯಲಿದೆ.
47.26 ಲ.ರೂ.ವೆಚ್ಚದಲ್ಲಿ
,ಪಾಣೆಮಂಗಳೂರು ಗ್ರಾಮದ ಬೊಂಡಾಲ ಮಹಮ್ಮಾಯಿ ದೇವಸ್ಥಾನದ ರಸ್ತೆ ಅಭಿವೃದ್ಧಿ ,ಬೊಂಡಾಲ-ಕಲ್ಲಡ್ಕ- ಗುಂಡೂರು ಸಂಪರ್ಕ ರಸ್ತೆ ಅಭಿವೃದ್ಧಿ, ಬಿ. ಮೂಡ ಗ್ರಾಮದ ಚೆಂಡಾಡಿ-ಅಲೆತ್ತೂರು ರಸ್ತೆ ಅಭಿವೃದ್ಧಿ ಹಾಗೂ ಕಸ್ಟಾ ಗ್ರಾಮದ ಆಗ್ರಾರ್ ರಸ್ತೆ ಬದಿ ತಡೆಗೋಡೆ ನಿರ್ಮಾಣಗೊಳ್ಳಲಿದೆ.
50.00 ಲ.ರೂ.ಪುರಸಭಾ ವ್ಯಾಪ್ತಿಯ ಬಿ. ಮೂಡ, ಬಿ. ಕಸ್ಟಾ ಹಾಗೂ ಪಾಣೆಮಂಗಳೂರು ಗ್ರಾಮದ ವಿವಿಧ ಪ್ರದೇಶಗಳಲ್ಲಿ ದಾರಿದೀಪ ವಿಸ್ತರಣೆ ಕಂಬಗಳ ಅಳವಡಿಕೆ ಹಾಗೂ ವಿವಿಧ ಕಡೆ ಸೆಮಿ ಹೈಮಾಸ್ಟ್ ಬೀದಿದೀಪ ಅಳವಡಿಕೆ ಕಾರ್ಯ ನಡೆಯಲಿದೆಈ ಸಂದರ್ಭದಲ್ಲಿ ಬಿಜೆಪಿ ಬಂಟ್ವಾಳ ಮಂಡಲದ ಅಧ್ಯಕ್ಷ ಚೆನ್ನಪ್ಪ ಆರ್ ಕೋಟ್ಯಾನ್, ಪುರಸಭಾ ಸದಸ್ಯರಾದ ಗೋವಿಂದ ಪ್ರಭು, ಶಶಿಕಲಾ, ದೇವಕಿ, ಮೀನಾಕ್ಷಿ ಗೌಡ, ಮಾಜಿ ಅಧ್ಯಕ್ಷ ದಿನೇಶ್ ಭಂಡಾರಿ,ಮಾಜಿ ಸದಸ್ಯರಾದ ಸುರೇಶ್ ಕುಲಾಲ್,ಜನಾರ್ದನ ಬೊಂಡಾಲ,ಭಾಸ್ಕರ ಟೈಲರ್ ಬಿ.ಸಿ.ರೋಡು,ಗಂಗಾಧರ ಪೂಜಾರಿ ಬಂಟ್ವಾಳ, ಬಿಜೆಪಿ ಪ್ರಮುಖರಾದ ರಾಮದಾಸ್ ಬಂಟ್ವಾಳ, ಕರುಣೇಂದ್ರ ಪೂಜಾರಿ, ವಸಂತ ಭಂಡಾರಿ, ವಿಶ್ವನಾಥ ಚೆಂಡ್ತಿಮಾರ್, ಪ್ರಣಾಮ್ ಅಜ್ಜಿಬೆಟ್ಟು, ಜಯರಾಮ ರೈ ಕಲ್ಲಡ್ಕ,ವಸಂತ ಮಣಿಹಳ್ಳ ಪ್ರಕಾಶ್ ಅಂಚನ್,ಮಚ್ಚೇಂದ್ರ ಸಾಲ್ಯಾನ್ ಹಿಂದೂ ರುದ್ರಭೂಮಿ ಸಮಿತಿಯ ಪದಾಧಿಕಾರಿಗಳಾದ ಲಯನ್ ಡಾ.ವಸಂತಬಾಳಿಗಾ,ಅಜಯ್ ಕೊಂಬ್ರಬೈಲ್, ಇಂಜಿನಿಯರ್ ಡೊಮೆನಿಕ್ ಡಿಮೆಲ್ಲೋ ಮೊದಲಾದವರಿದ್ದರು.
ಪುರಸಭಾ ಸದಸ್ಯ ಹರಿಪ್ರಸಾದ್ ಭಂಡಾರಿಬೆಟ್ಟು ಸ್ವಾಗತಿಸಿ,ಪ್ರಸ್ತಾವನೆಗೈದರು.
