ಸಕ್ರಮ ಮರಳಗಾರಿಕೆಗೆ 4 ಕಡೆ ತಹಶೀಲ್ದಾರ್ ನೇತೃತ್ವದಲ್ಲಿ ಅಧಿಕಾರಿಗಳಿಂದ ಸ್ಥಳ ಪರಿಶೀಲನೆ
ಬಂಟ್ವಾಳ: ಸರಕಾರದ ನಿರ್ದೇಶನದನ್ವಯ ಬಂಟ್ವಾಳ ತಾಲೂಕಿನ ನಾಲ್ಕು ಆಯ್ದ ಸ್ಥಳದಲ್ಲಿ ನೇತ್ರಾವತಿ ನದಿಯಿಂದ ಸಕ್ರಮವಾಗಿ ಮರಳಗಾರಿಕೆಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಬಂಟ್ವಾಳ ತಹಶಿಲ್ದಾರ್ ನೇತೃತ್ವದ ಅಧಿಕಾರಿಗಳ ತಂಡ ಶುಕ್ರವಾರ ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಹೊಸ ಮರಳು ನೀತಿಯನ್ವಯ ನೇತ್ರಾವತಿ ನದಿಯಿಂದ ಅಧಿಕೃತ ಮರಳಗಾರಿಕೆಗೆ ಅವಕಾಶ ದೊರೆತಲ್ಲಿ, ತಿಂಗಳಗಟ್ಟಲೆಯಿಂದ ಮರಳು ಸಿಗದೆ ಸೊರಗಿದ್ದ ತಾಲೂಕಿನ ಜನರ ಬೇಡಿಕೆ ಈಡೇರಿದಂತಾಗುತ್ತದೆಯಲ್ಲದೆ, ಮರಳು ಸಿಗದೆ ಅರ್ಧಕ್ಕೆ ನಿಂತಿದ್ದ ವಾಸದ ಮನೆ ಸಹಿತ ಅನೇಕ ಕಾಮಗಾರಿಗಳಿಗೆ ಮರುಜೀವ ಸಿಕ್ಕಿದಂತಾಗದೆ.ಬೀದಿಪಾಲಾಗುವ ಹಂತದಲ್ಲಿದ್ದ ಕೂಲಿಕಾರ್ಮಿಕರಿಗೂ ಮರುಜೀವ ಸಿಕ್ಕುದಂತಾಗುತ್ತದೆ.ಪ್ರಮುಖವಾಗಿ ಅರ್ಥಿಕತೆಯಲ್ಲು ಸುಧಾರಣೆಯಾಗುವ ನಿರೀಕ್ಷೆ ಹೊಂದಲಾಗಿದೆ.

ಬಂಟ್ವಾಳ ತಾಲೂಕಿನ ಕರಿಯಂಗಳ, ಬರಿಮಾರು, ನಾವೂರು ಮತ್ತು ಸರಪಾಡಿ ಗ್ರಾಮದಲ್ಲಿ ಮರಳು ಬ್ಲಾಕ್ನ್ನು ಗುರುತಿಸಲು ಸ್ಥಳ ತನಿಖೆ ನಡೆಸಿ,ವರದಿ ಸಲ್ಲಿಸುವಂತೆ ಸೂಚನೆಯನ್ನು ನೀಡಲಾದ ಹಿನ್ನೆಲೆಯಲ್ಲಿ ಈ ನಾಲ್ಕು ಗ್ರಾಮಗಳಲ್ಲಿ ಕ್ರಮವಾಗಿ ಕರ್ನಾಟಕ ಹೊಸ ಮರಳು ನೀತಿಯನ್ವಯ ಮರಳಗಾರಿಕೆಗಾಗಿ ಸಂಬಂಧಿಸಿದ ಇಲಾಖೆಗಳ ಮುಖ್ಯಸ್ಥರು ಜಂಟಿಯಾಗಿ ಬಂಟ್ವಾಳ ತಹಶೀಲ್ದಾರ್ ಮಂಜುನಾಥ್ ಅವರ ನೇತೃತ್ವದಲ್ಲಿ ಪರಿಶೀಲನೆ ನಡೆಸಿದ್ದಾರೆ.
ಮರಳುಗಾರಿಕೆಗೆ ಗುರುತಿಸಲಾಗುವ ಜಾಗ ಸರಕಾರದ ನಿಯಮದಂತೆ ಸೂಕ್ತವಾಗಿದೆಯಾ? ಎಂಬುದನ್ನು ಖಾತರಿಪಡಿಸಿ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಿದ್ದಾರೆ. ಬಳಿಕ ಒಂದಷ್ಟು ಪ್ರಕ್ರಿಯೆಗಳು ನಡೆದು ಮುಂದೆ ಅವಕಾಶ ನೀಡಲಾಗುತ್ತದೆ.
ಪಿ.ಡಬ್ಬೂಡಿ ಇಲಾಖೆಯ ಎ.ಡಬ್ಲು.ಇ ಅವಿನಾಶ್,ಇಂಜಿನಿಯರ್ ಗಳಾದ ಅರುಣ್ ಪ್ರಕಾಶ್ ,ರಶೀದ್ ,ಮೋಟಾರ್ ವಾಹನ ಪರಿವೀಕ್ಷಕರು ಪ್ರಮೋದ್ ಭಟ್, ಅರಣ್ಯ ಇಲಾಖೆಯ ಡಿ.ವೈ.ಎಫ್.ಓ ಕೃಷ್ಣ, ಗಣಿ ಇಲಾಖೆ ಮಾದೇಶ್,ಪೊಲೀಸ್ ಸಿಬ್ಬಂದಿ ಕೃಷ್ಣ, ಬರಿಮಾರು ಪಿಡಿಒ ಪುಷ್ಪಾ ಸರಪಾಡಿ ಪಿಡಿಒ ಸಿಲ್ಬಿಯಾ ಪೆರ್ನಾಂಡಿಸ್ ಕರಿಯಂಗಳ ಪಿಡಿಒ ವಸಂತಿ, ನಾವೂರ ಪಿಡಿಒ ರಾವರ್ಟ್ ಪೆರ್ನಾಂಡಿಸ್ ಅವರು ಈ ಸಂದರ್ಭ ಹಾಜರಿದ್ದರು



