ಬಂಟ್ವಾಳ ಕಸಾಪ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಆಚರಣೆ
ಬಂಟ್ವಾಳ:ಕನ್ನಡದ ಆಸಕ್ತಿ ಕಡಿಮೆಯಾಗುತ್ತಿದ್ದು, ಹೆಚ್ಚು ಹೆಚ್ಚು ಮಂದಿ ಆಂಗ್ಲ ಭಾಷೆಯತ್ತ ವಾಲುತ್ತಾ, ಕನ್ನಡದ ಬಗ್ಗೆ ಕಾಳಜಿ ತೋರಿಸದೇ ಇರುವುದು ಖೇದಕರ ಸಂಗತಿ.ಕನ್ನಡ ಭಾಷೆ,ಸಂಸ್ಕೃತಿಯನ್ನು ಉಳಿಸುವ ಸಲುವಾಗಿ ನಾವೆಲ್ಲರೂ ಪಣತೊಡಬೇಕಾಗಿದೆ ಎಂದು ಪತ್ರಕರ್ತ ಸಲೀಂ ಬೋಳಂಗಡಿ ಅವರು ಹೇಳಿದರು.
ಬಿ.ಸಿ.ರೋಡಿನ ಕೈಕುಂಜಯಲ್ಲಿರುವ ಬಂಟ್ವಾಳ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಭವನದ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ಕರ್ನಾಟಕ ರಾಜ್ಯೋತ್ಸವದಲ್ಲಿ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಇನ್ನೋರ್ವ ಮುಖ್ಯ ಅತಿಥಿ ನ್ಯಾಯವಾದಿ ರವೀಂದ್ರ ಕುಕ್ಕಾಜೆ ಅವರು ಮಾತನಾಡಿ ಕನ್ನಡ ಭಾಷೆ,ನೆಲ ಜಲ,ಕನ್ನಡದ ಸಂಸ್ಕೃತಿಯ ಉಳಿವಿಗಾಗಿ ಕನ್ನಡಿಗರಾದ ನಾವು ಕರ್ತವ್ಯವನ್ನು ನಿರ್ವಹಿಸಬೇಕಾಗುತ್ತದೆ ಎಂದರು.
ಬಂಟ್ವಾಳ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ವಿಶ್ವನಾಥ ಬಂಟ್ವಾಳ ಅಧ್ಯಕ್ಷತೆಯನ್ನು ವಹಿಸಿದ್ದ ಸಮಾರಂಭದಲ್ಲಿ ಕನ್ನಡ ಭವನ ಕಟ್ಟಡ ನಿರ್ಮಾಣ ಸಮಿತಿಯ ಕೋಶಾಧಿಕಾರಿ ಶಿವಶಂಕರ್ ಎನ್ ಕನ್ನಡದ ಧ್ವಜಾರೋಹಣ ಗೈದು ಶುಭ ಹಾರೈಸಿದರು.

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯ ಪೂವಪ್ಪ ನೇರಳಕಟ್ಟೆ,ಪರಿಷತ್ತಿನ ಗೌರವ ಕಾನೂನು ಸಲಹೆಗಾರ ವಕೀಲರಾದ ಉಮೇಶ ಕುಮಾರ್ ವೈ ,ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ಜಯರಾಮ ಪಡ್ರೆ,ಪಾಣೆಮಂಗಳೂರು ಹೋಬಳಿ ಕಸಾಪ ಅಧ್ಯಕ್ಷ ಮಹಮ್ಮದ್ ಪಾಣೆಮಂಗಳೂರು,ಲಯನ್ ಸತ್ಯನಾರಾಯಣ ರಾವ್ ಮತ್ತಿತರರು ಉಪಸ್ಥಿತರಿದ್ದರು.
ಬಂಟ್ವಾಳ ತಾಲ್ಲೂಕು ಕಸಾಪ ಗೌರವ ಕಾರ್ಯದರ್ಶಿ ವಿ.ಎಸ್.ಭಟ್ ಸ್ವಾಗತಿಸಿ ತುಂಬೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಸಾಯಿರಾಮ್ ಜೆ ನಾಯಕ್ ಕೆ ವಂದಿಸಿದರು



