ಮುಂಬಯಿ: ಕರ್ನಾಟಕ ಕರಾವಳಿಯ ಮುಲ್ಕಿ ಸನಿಹದ ಹಳೆಯಂಗಡಿ ಸಮೀಪದ ಇತಿಹಾಸ ಪ್ರಸಿದ್ಧ ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ನೂತನ ಆಡಳಿತ ಮುಕ್ತೇಸರರಾಗಿ ತೀಯಾ ಸಮಾಜ ಮುಂಬಯಿಯ ಮಾಜಿ ಅಧ್ಯಕ್ಷರೂ ಹಾಗೂ ಬೃಹನ್ಮುಂಬಯಿಯಲ್ಲಿನ ಪ್ರಸಿದ್ಧ ಉದ್ಯಮಿ ಕಟೀಲು ಗಂಪ ಮನೆ ನಿವಾಸಿ ಚಂದ್ರಶೇಖರ ಆರ್.ಬೆಳ್ಚಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ

ಈ ವರ್ಷ ಬ್ರಹ್ಮಕಲಶೋತ್ಸವವು ನಡೆಯಲಿರುವ ಕ್ಷೇತ್ರದ ಆಡಳಿತ ಸಮಿತಿಯ ನೂತನ ಉಪಾಧ್ಯಕ್ಷರಾಗಿ ಉಡುಪಿ ಜಿಲ್ಲೆಯ ಪಂದಿಬೆಟ್ಟು ಮೂಲದ ಉದ್ಯಮಿ ಹಾಗೂ ಸಮಾಜ ಸೇವಕ ವಿಶ್ವನಾಥ ಬೆಳ್ಚಡ ಮುಂದಿಬೆಟ್ಟು (ಉಡುಪಿ) ಇವರನ್ನು ಆಯ್ಕೆ ಮಾಡಲಾಗಿದೆ ಎಂದು ಆಡಳಿತ ಮಂಡಳಿಯ ಅಧ್ಯಕ್ಷ ವಾಮನ್ ಇಡ್ಯಾ ಹಾಗೂ ಕ್ಷೇತ್ರದ ಪ್ರಧಾನ ಅರ್ಚಕರು ಮತ್ತು ಅನುವಂಶಿಕ ಮೊಕ್ತೇಸರ ಶ್ರೀನಿವಾಸ (ಅಪ್ಪು ಪೂಜಾರಿ) ಅವರು ಅಧಿಕೃತವಾಗಿ ಇಂದಿಲ್ಲಿ ಪ್ರಕಟಿಸಿದ್ದಾರೆ.
ಇದೇ 2025ರ ಮಾರ್ಚ್ 4 ರಿಂದ 8ರ ತನಕ ಬ್ರಹ್ಮಕಲಶ, ಏಪ್ರಿಲ್ ೧೦ ರಂದು ನಡಾವಳಿ ಮಹೋತ್ಸವ ಮತ್ತು ಏಪ್ರಿಲ್ ೧೧ ರಿಂದ ಒಂದು ವಾರಗಳ ಕಾಲ ಭರಣಿ ಮಹೋತ್ಸವವು ಸಸಿಹಿತ್ಲು ಶ್ರೀ ಭಗವತೀ ಕ್ಷೇತ್ರದಲ್ಲಿ ನಡೆಯಲಿದೆ. ನೂತನ ಆಡಳಿತ ಮೊಕ್ತೇಸರ ಹಾಗೂ ಉಪಾಧ್ಯಕ್ಷರ ಸಮರ್ಥ ಮುಂದಾಳತ್ವದಲ್ಲಿ ಈ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಿ ನೆರವೇರಲಿವೆ ಎಂದು ಎಳುಊರ ಗುರಿಕಾರರು ಹಾಗೂ ದೇವಸ್ಥಾನದ ಟ್ರಸ್ಟಿಗಳು ಆಶಯ ವ್ಯಕ್ತಪಡಿಸಿದ್ದಾರೆ.
ಶ್ರೀ ಚಂದ್ರಶೇಖರ್ ಆರ್.ಬೆಳ್ಚಡ:
ಮಂಗಳೂರು ತಾಲೂಕಿನ ವಿಶ್ವಪ್ರಸಿದ್ಧ ಕಟೀಲು ಕ್ಷೇತ್ರ ದಕ್ಷಿಣ ಕನ್ನಡ ಜಿಲ್ಲೆಯ ಪ್ರೇಕ್ಷಣೀಯ, ಪುಣ್ಯಸ್ಥಳಗಳಲ್ಲಿ ಒಂದು. ನಂದಿನಿ ನದಿಯ ದಂಡೆಯ ಮೇಲಿರುವ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಜಿಲ್ಲೆಯ ಪ್ರಮುಖ ದೇವಸ್ಥಾನಗಳಲ್ಲೊಂದು. ಶ್ರೀ ಭ್ರಮರಾಂಭಿಕೆ ನೆಲೆಯಾದ ಅಲ್ಲಿನ ನಂದಿನಿ ನದಿಯ ಮೇಲ್ದಂಡೆಯ ನಿವಾಸಿಗಳೇ ರಾಮ ತಿಮ್ಮಪ್ಪ ಮತ್ತು ಸೀತು ರಾಮ ದಂಪತಿ. ಅವರ ಸುಪುತ್ರರೇ ಚಂದ್ರಶೇಖರ್ ಆರ್.ಬೆಳ್ಚಡ. ಕಟೀಲುನಲ್ಲಿ ಪ್ರೌಢ ವಿದ್ಯಾಭ್ಯಾಸ ಮಾಡಿ ಮುಂಬಯಿಗೆ ಬಂದು ವಾಣಿಜ್ಯ ಪದವಿಯನ್ನು ಓದುತ್ತಿರುವಾಗಲೇ ಒಂದು ವಿಶೇಷವಾದ ಕ್ಷೇತ್ರ ಎಂದೆಣಿಸಿದ ಅಗಡಾದ ಅವಶ್ಯಕ (ರಿಫ್ರಾ ಕ್ಚರ್ ಮಟೀರಿಯಲ್) ಕಂಪೆನಿಯಲ್ಲಿ ಕೆಲಸ ಆರಂಭಿಸಿದ್ದರು. ನಂತರ ಉನ್ನತ ಶಿಕ್ಷಣ ಪೂರೈಸಿ, ಆಸಕ್ತ ವಿಚಾರದ ಸಾಕಷ್ಟು ಮಾಹಿತಿ ದೊರಕಿಸಿದರು. ಕ್ರಮೇಣ ಉಪನಗರ ಥಾಣೆಯಲ್ಲಿ ತನ್ನದೇ ಆದ ಸ್ವಂತದ ಪಿ.ಪಿ ರೆಫ್ರಕ್ಟೊರೀಸ್ ಕಾರ್ಪೋರೇಶನ್ ಸಂಸ್ಥೆಯನ್ನು ರೂಪಿಸಿ ಕೊಂಡರು. ಆ ಮೂಲಕ ತನ್ನ ಸ್ವಂತಿಕೆಯ ವ್ಯವಹಾರಿಸಿ ಕರೋಝನ್ ಆಂಡ್ ಕಂಟ್ರೋಲ್ ಕಂಪೆನಿಯು ದೇಶದ ಅನೇಕ ಭಾಗಗಳಲ್ಲಿ ಹಾಗೂ ಲಾಗೊಸ್, ಸಿಂಗಾಪುರ, ಥೈಲ್ಯಾಂಡ್ ಮತ್ತು ದುಬಾಯಿ (ಯುಎಇ) ದೇಶಗಳಲ್ಲಿ ಯೋಜನೆಗಳನ್ನು ಪೂರ್ಣಗೊಳಿಸಿದ ನಿಸ್ಸೀಮಾ ಯುವ ಉದಯೋನ್ಮುಖ ಉದ್ಯಮಿ ಆಗಿ ಗುರುತಿಸಿ ಕೊಂಡರು.
ಗ್ಲೋಬಲ್ ಫೌಂಡೇಶನ್ ಅಚೀವರ್ (ಜಿಎಫ್ಎ) ಸಂಸ್ಥೆಯು ರಷ್ಯಾ ರಾಷ್ಟ್ರದ ಟಶ್ಖೆಂಟ್ (ಉಝ್ಬೆಕೀಸ್ತಾನ್)ನ ಅಲ್ಲಿನ ಕುಶ್ಬೆಗಿ ಸ್ಟ್ರೀಟ್ನ ಅಮರ್ ಸಭಾಂಗಣದಲ್ಲಿ ಆಯೋಜಿಸಿದ್ದ ಜಾಗತಿಕ ಅರ್ಥಶಾಸ್ತ್ರದ ಬೆಳವಣಿಗೆ ಮತ್ತು ಸಾಮಾಜಿಕ ಅಭಿವೃದ್ಧಿ (ಗ್ಲೋಬಲಾಯಿಝೇಶನ್ ಆಫ್ ಇಕಾನಾಮಿಕ್ ಗ್ರೋಥ್ ಎಂಡ್ ಸೋಶಿಯಲ್ ಡೆವಲಪ್ಮೆಂಟ್) ವಿಚಾರಿತ ಮಹಾಸಮ್ಮೇಳನದಲ್ಲಿ ಚಂದ್ರಶೇಖರ್ ಬೆಳ್ಚಡ ಇವರ ಸಾಧನೀಯ ಸೇವೆ ಪರಿಗಣಿಸಿ (೦೭,ಜುಲೈ.೨೦೧೯) ‘ಏಷಿಯಾ ಪೆಸಿಫಿಕ್ ಅಚೀವರ್ಸ್ ಅವಾರ್ಡ್’ (Asia Pacific Achievers Award) ಪುರಸ್ಕಾರ ಪ್ರದಾನಿಸಿ ಗೌರವಿಸಿದೆ.
ಅಸೋಸಿಯೇಶನ್ ಆಫ್ ಕನ್ನಡ ಕೂಟ’ಸ್ ಆಫ್ ಅಮೇರಿಕಾ (ಅಕ್ಕ) ಸಂಸ್ಥೆ ಉತ್ತರ ಟೆಕ್ಸಾಸ್ ಮಲ್ಲಿಗೆ ಕನ್ನಡ ಕೂಟ ಇದರ ಆಶ್ರಯದಲ್ಲಿ (೦೨.ಸೆ.೨೦೧೮) ಅಮೆರಿಕದ ಡಾಲಸ್ ನಗರದ ಶೆರಟಾನ್ ಸಮಾವೇಶ ಸಭಾಗೃಹದಲ್ಲಿ ಆಯೋಜಿಸಿದ್ದ ಹತ್ತನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಬೃಹನ್ಮುಂಬಯಿನ ಪ್ರತಿಷ್ಠಿತ ಸಾಮಾಜಿಕ ಸಂಸ್ಥೆಗಳ ಧುರೀಣರಾದ ಚಂದ್ರಶೇಖರ ಆರ್.ಬೆಳ್ಚಡ ಪಾಲ್ಗೊಂಡು ಗೌರವಕ್ಕೆ ಪಾತ್ರರಾಗಿದ್ದರು
