ಬಂಟ್ವಾಳ: ಭಾರತವೆಂದರೆ ಎಲ್ಲರೂ ಸೌಹಾರ್ದತೆಯಿಂದ ಬಾಳಿ ಬದುಕುವ ದೇಶವಾಗಿದೆ.ಇಲ್ಲಿ ಹಲವಾರು ಜಾತಿ ಮತ ಪಂಥಗಳಿದ್ದರೂ ಮಾನವೀಯತೆಗೆ ಪ್ರಾಶಸ್ತ್ಯ ನೀಡಲಾಗುತ್ತದೆ.ಈ ನಿಟ್ಟಿನಲ್ಲಿ ಸೌಹಾರ್ದತೆಯ ದೇಶ ನಮ್ಮದು ಎನ್ನುವುದಕ್ಕೆ ಅದೆಷ್ಟೋ ವರ್ಷಗಳ ಇತಿಹಾಸವಿದೆ.

ಇವತ್ತಿನ ಪೀಳಿಗೆ ಸೌಹಾರ್ದತೆಯ ಪ್ರತೀಕವೆನಿಸುವ ಸರ್ವಧರ್ಮೀಯ ಗ್ರಂಥವೆಂದೇ ಪರಿಭಾವಿಸುವ ನಮ್ಮ ಸಂವಿಧಾನಕ್ಕೆ ಗೌರವ ಮನ್ನಣೆ ಕೊಟ್ಟು ಬದುಕಿ ಬಾಳುತ್ತಾ ಮುಂದಿನ ಪೀಳಿಗೆಗೆ ಆದರ್ಶವಾಗಬೇಕು ಎಂಬುದಾಗಿ ಹಿರಿಯ ರಾಜ್ಯಶಾಸ್ತ್ರ ಉಪನ್ಯಾಸಕ ದಿನೇಶ ಶೆಟ್ಟಿ ಅಳಿಕೆ ಹೇಳಿದರು.
ಸದ್ಭಾವನಾ ದಿನದ ಅಂಗವಾಗಿತುಂಬೆ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಸದ್ಭಾವನಾ ದಿನದ ಪ್ರಮಾಣ ವಚನ ಬೋಧಿಸಿ ಅವರು ಮಾತನಾಡಿದರು.ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ವಿ.ಎಸ್.ಭಟ್ ಮಾತನಾಡಿ, ಬಹುವಿಧ ಸಮಾಜವಾದ ಭಾರತದಲ್ಲಿ ಏಕತೆಗೆ ಆದ್ಯತೆ ನೀಡಬೇಕು.ಶಾಂತಿ ನೆಮ್ಮದಿಯ ಬದುಕಿಗೆ ಬೇಕಾಗಿರುವ ಅತ್ಯಮೂಲ್ಯ ಸಂಗತಿಯೆಂದರೆ ಎಲ್ಲರೂ ಸದ್ಭಾವನೆಯಿಂದ ಇರುವುದಾಗಿದೆ.ಅದಕ್ಕಾಗಿ ವಿದ್ಯಾರ್ಥಿ ಜೀವನದಿಂದಲೆ,ಜಾತಿ ಮತ ಪಂಥ ಬೇಧವೆಣಿಸದೆ ಒಟ್ಟಾಗಿ ಬದುಕುವುದನ್ನು ರೂಢಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.ಉಪನ್ಯಾಸಕಿ ದಿವ್ಯ ಕೆ.ಎಸ್.ಉಪಸ್ಥಿತರಿದ್ದರು.
