ಬಂಟ್ವಾಳ : ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ವಗ್ಗ- ಕಾಡಬೆಟ್ಟು ಶೌರ್ಯ ತಂಡದ ಸ್ವಯಂಸೇವಕರು ಸ್ಥಳೀಯ ದಾನಿಗಳ ಸಹಕಾರದಲ್ಲಿಬಡ ಕುಟುಂಬಗಳನ್ನು ಗುರುತಿಸಿ ಆಹಾರ ಧಾನ್ಯದ ಕಿಟ್ ವಿತರಿಸಿ ಮಾನವೀಯತೆ ಮೆರೆದಿದ್ದಾರೆ.

ಮಾನವೀಯ ಚಟುವಟಿಕೆಗಳನ್ನು ನಡೆಸುವ ಮೂಲಕ ಬಂಟ್ವಾಳ ತಾಲ್ಲೂಕಿನ ವಗ್ಗ- ಕಾಡಬೆಟ್ಟು ಶೌರ್ಯ ತಂಡವು ಪ್ರತಿ ವರ್ಷ ಬಡ ಕುಟುಂಬಗಳನ್ನು ಗುರುತಿಸಿ ಅಗತ್ಯ ಸಹಕಾರ ನೀಡುವ ಪ್ರಯತ್ನ ಮಾಡುತ್ತಿರುವ “ಶೌರ್ಯ” ತಂಡದ ಸ್ವಯಂಸೇವಕರು ಈ ವರ್ಷವೂ ಬಡ ಕುಟುಂಬಗಳನ್ನು ಗುರುತಿಸಿ ಸಹಕಾರ ನೀಡುವ ನಿರ್ಧಾರ ಕೈಗೊಂಡಿದ್ದರು.
ದಾನಿಗಳಾದ ಪ್ರಮೋದ್ ಕುಮಾರ್ ರೈ , ವೀರೇಂದ್ರ ಅಮೀನ್ , ಶ್ರುತಾಂಜನ್ ಜೈನ್ ಮತ್ತು ಸುಜಿತ್ ಕುಮಾರ್ ಜೈನ್ ರವರ ಸಹಕಾರದೊಂದಿಗೆ ಕಾಡಬೆಟ್ಟುವಿನ 9 ಕುಟುಂಬ ಹಾಗೂ ಆಲಂಪುರಿಯ ಒಂದು ಕುಟುಂಬವನ್ನು ಶೌರ್ಯ ತಂಡದ ಸ್ವಯಂಸೇವಕರು ಗುರುತಿಸಿ ದಾನಿಗಳ ಉಪಸ್ಥಿತಿಯಲ್ಲಿ ಮನೆ ಮನೆಗೆ ತೆರಳಿ ಧಾನ್ಯದ ಕಿಟ್ ವಿತರಿಸಿದ್ದಾರೆ.
ಬಡ ಕುಟುಂಬದ ರಮಣಿ, ಚೆಲ್ಲಮ್ಮ, ಸುಂದರಿ, ವಿನೋದಾ, ರುಕ್ಮಿಣಿ, ಮಮತ, ರಾಮಕ್ಕು, ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಸುಲೋಚನ, ಗಿರಿಯಪ್ಪ ಪೂಜಾರಿ ಹಾಗೂ ತಂದೆ ತಾಯಿಯನ್ನು ಕಳೆದುಕೊಂಡ ಒಂದು ಕುಟುಂಬದ ಅನಾಥ ಮಕ್ಕಳಿಗೆ ಕಿಟ್ ವಿತರಣೆ ಮಾಡಲಾಯಿತು. 25 ಕೆ.ಜಿ ಅಕ್ಕಿ ಸೇರಿದಂತೆ 2500 ರೂಪಾಯಿ ಮೌಲ್ಯದ ಅಡುಗೆ ಸಾಮಾಗ್ರಿಗಳನ್ನು ನೀಡಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯ ತಾಲೂಕು ಯೋಜನಾಧಿಕಾರಿ ಜಯಾನಂದ ಪಿ, ಘಟಕ ಪ್ರತಿನಿಧಿ ಪ್ರವೀಣ್, ಸಂಯೋಜಕಿ ರೇಖಾ.ಪಿ, ಸ್ವಯಂಸೇವಕರಾದ ಸಂಪತ್ ಶೆಟ್ಟಿ, ಮಹಾಬಲ ರೈ, ಜನಾರ್ದನ, ಮೋಹನಂದ, ಲಕ್ಷ್ಮಣ , ನಾರಾಯಣ ಪೂಜಾರಿ, ನಾರಾಯಣಶೆಟ್ಟಿ, ಅಶೊಕ ಬೊಲ್ಮಾರು ವಿನೋದ್, ಸಾವಿತ್ರ, ಶಶಿಕಲಾ, ಪವನ್ ಉಪಸ್ಥಿತರಿದ್ದರು.
ಶೌರ್ಯ ಸ್ವಯಂಸೇವಕರ ಈ ಸೇವೆ ಪ್ರಶಂಸೆಗೆ ಪಾತ್ರವಾಗಿದೆ.
