ಬಂಟ್ವಾಳ: ಶಿಕ್ಷಣ ಸಂಸ್ಥೆಗಳಲ್ಲಿನ ಆಧಾರಸ್ತಂಭಗಳಾದ ವಿದ್ಯಾರ್ಥಿಗಳು,ಶಿಕ್ಷಕರು, ಪೋಷಕರು ಮತ್ತು ಆಡಳಿತ ಮಂಡಳಿ ಅನ್ಯೋನ್ಯವಾಗಿ ಸಂವಹನ ನಡೆಸಿದಾಗ ಅಂತಹ ಸಂಸ್ಥೆಯ ವಿದ್ಯಾರ್ಥಿಗಳು ಭವಿಷ್ಯದ ಸಮಾಜದ ಅತ್ಯುತ್ತಮ ನಾಗರಿಕರಾಗುತ್ತಾರೆ ಎಂದುತುಂಬೆ ಮುಹಿಯುದ್ದೀನ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಅಬ್ದುಲ್ ಸಲಾಂ ಅವರು ಹೇಳಿದರು.

ತುಂಬೆ ವಿದ್ಯಾ ಸಂಸ್ಥೆಗಳ ರಕ್ಷಕ-ಶಿಕ್ಷಕ ಸಂಘದ ಮಹಾಸಭೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ತುಂಬೆ ಪಿಟಿಎಯ ದತ್ತಿ ನಿಧಿ ಸ್ಕಾಲರ್ ಶಿಪ್ ವಿತರಿಸಿ ಅವರು ಮಾತನಾಡಿದರು,ವಿದ್ಯಾರ್ಥಿಗಳು ಕೇವಲ ಅಂಕಗಳನ್ನು ಪಡೆಯುವುದನ್ನು ಉದ್ದೇಶವಾಗಿರಿಸದೆ,ಕ್ರೀಡೆ ಸಹಿತ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಬೇಕು ಎಂದ ಅವರು ಮಕ್ಕಳು ತಮ್ಮ ಪೋಷಕ ಮತ್ತು ಶಿಕ್ಷಕರಿಂದ ಜೀವನ ಶಿಕ್ಷಣವನ್ನೂ ಪಡೆದುಕೊಂಡು ತಮ್ಮ ದೇಶದ ಸತ್ಪ್ರಜೆಯಾಗುವಲ್ಲಿ ಪಣತೊಡಬೇಕು ಎಂದರು.

ಪಿಟಿಎಯ ನಿಕಟಪೂರ್ವ ಅಧ್ಯಕ್ಷ ಪ್ರಕಾಶ್ ಚಂದ್ರ ರೈ ದೇವಸ್ಯ ಮಾತನಾಡಿ ತುಂಬೆ ವಿದ್ಯಾ ಸಂಸ್ಥೆಯು ಉತ್ತಮವಾದ ವಿದ್ಯಾರ್ಥಿಗಳನ್ನು ರೂಪಿಸಿ ಸಮಾಜಕ್ಕೆ ಅತ್ಯುನ್ನತ ಸ್ಥಾನಮಾನದ ನಾಗರಿಕರನ್ನಾಗಿ ಮಾಡುವಲ್ಲಿ ಯಶಸ್ಸನ್ನು ಕಂಡಿದೆ ಎಂದರು.ರಕ್ಷಕ ಶಿಕ್ಷಕ ಸಂಘದ ಪ್ರಸಕ್ತ ಶೈಕ್ಷಣಿಕ ಸಾಲಿಗೆ ಮರು ಆಯ್ಕೆಗೊಂಡ ಅಧ್ಯಕ್ಷ ನಿಸಾರ್ ಅಹಮದ್ ವಳವೂರು,ಎಂ.ಇ.ಟಿ.ಮ್ಯಾನೇಜರ್ ಬಿ ಅಬ್ದುಲ್ ಕಬೀರ್ ಮಾತನಾಡಿದರು.
ಪ್ರಾಂಶುಪಾಲರಾದ ವಿ.ಎಸ್.ಭಟ್ ಅವರು ಪ್ರಸ್ತಾವನೆ ಗೈದರು.ಇದೇ ವೇಳೆ ಕಳೆದ ಶೈಕ್ಷಣಿಕ ಸಾಲಿನಲ್ಲಿ ಶೈಕ್ಷಣಿಕ ಸಾಧನೆಗೈದ ಹಾಗೂ ಕ್ರೀಡಾ ಸಾಧಕರು ಮತ್ತಿತರ ಅರ್ಹ ವಿದ್ಯಾರ್ಥಿಗಳಾದ ದಕ್ಷಿಣ ಎಸ್ ಸಾಲಿಯಾನ್,ಲಹರಿ ಜಿ.ಕೆ,ಬಿ.ಬಿ.ಅಶೂರ,ಅಶ್ವಿನಿ,ಮೆಹರುನ್ನೀಸಾ, ಝೈಬಾ ಸುಲ್ತಾನ,ನಮ್ರತಾ,ಮುಹಮ್ಮದ್ ಶಾಝಿನ್ ಜಿ.,ಮುಹಮ್ಮದ್ ಸಿನಾನ್,ಅರ್ಶಿಯಾ ಅಶ್ರಫ್,ಮೊಹಮ್ಮದ್ ಹಸನ್ ಮೆಹರಾನ್,ವಾಸುಕಿ ಅಭಯ ಶರ್ಮ,ಭವಿಷ್,ಶಾಹಿಲ್ ಸಹಲಾ,ಮಹಮ್ಮದ್ ನಶಾಂತ್ ಮತ್ತು ನೌರೀನಾ ಇವರು ಪಿ.ಟಿ.ಎ ಎಂಡೋಮೆಂಟ್ ಸ್ಕಾಲರ್ ಶಿಪ್ ಸ್ವೀಕರಿಸಿದರು.ಆಡಳಿತಾಧಿಕಾರಿ ಕಿಶೋರ್ ಸುವರ್ಣ ಸಾಧಕ ವಿದ್ಯಾರ್ಥಿಗಳನ್ನು ಪರಿಚಯಿಸಿದರು.
ಪಿಟಿಎ ಉಪಾಧ್ಯಕ್ಷೆ ಮೋಹಿನಿ ಎಂ ಸುವರ್ಣ, ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳಾದ ಮ್ಯಾಕ್ಸಿಂ ಕುವೆಲ್ಲೋ,ಚಂಚಲಾಕ್ಷಿ ಮತ್ತಿತರರು ಉಪಸ್ಥಿತರಿದ್ದರು. ಕನ್ನಡ ಮಾಧ್ಯಮ ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ವಿದ್ಯಾ ಕೆ ಸ್ವಾಗತಿಸಿದರು,ಆಂಗ್ಲ ಭಾಷಾ ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಮಲ್ಲಿಕಾ ಶೆಟ್ಟಿ ವಂದಿಸಿದರು.ಹಿರಿಯ ಶಿಕ್ಷಕಿ ವಿಮಲಾ ಕಾರ್ಯಕ್ರಮ ನಿರೂಪಿಸಿದರು
