ಗುರುಪುರ ಶ್ರೀ ವೈದ್ಯನಾಥ ದೈವಸ್ಥಾನದ
ಗದ್ದೆಯಲ್ಲಿ ಸಾಂಪ್ರದಾಯಿಕ ಕೃಷಿಗೆ ಚಾಲನೆ
ಕೈಕಂಬ : ಗುರುಪುರ ಮೂಳೂರು ಶ್ರೀ ವೈದ್ಯನಾಥ ದೈವಸ್ಥಾನದ ಬದಿನಮನೆ(ಭಂಡಾರದ ಮನೆ) ಒಡೆತನಕ್ಕೆ ಸೇರಿದ ಭತ್ತ ಕೃಷಿ ಗದ್ದೆಯಲ್ಲಿ ಜು. ೧೪ರಂದು ದೈವಸ್ಥಾನದ ಪ್ರಧಾನ ಅರ್ಚಕ ಹಾಗೂ ಮುಂಡಿತ್ತಾಯ ದೈವದ ಪಾತ್ರಿ ಚಂದ್ರಹಾಸ ಕೌಡೂರು ಅವರು ಗದ್ದೆಗೆ `ಕಾಪು’ ಅಳವಡಿಸುವ ಮೂಲಕ ಸಾಂಪ್ರದಾಯಿಕ ಭತ್ತದ ನೇಜಿ ನಾಟಿಗೆ ಚಾಲನೆ ನೀಡಿದರು.

ದೈವಸ್ಥಾನದ ವಾರ್ಷಿಕ `ದೊಂಪದಬಲಿ’ ಸೇವೆ ನಡೆಯುವ ಗದ್ದೆಗೆ ದೈವದ ಪಾತ್ರಿಯವರು ಸಾಂಪ್ರದಾಯಿಕ ಪೂಜೆ ಸಲ್ಲಿಸಿದರು. ಬಳಿಕ ಅವರು ಮುಚ್ಚೂರಿನಿಂದ ಆಗಮಿಸಿದ ಮೀನಾಕ್ಷಿ ಬಾಯಿ ನೇತೃತ್ವದ ೧೧ ಮಂದಿ ಕುಡುಬಿ ಕೂಲಿ ಮಹಿಳೆಯರೊಂದಿಗೆ ಖುದ್ದಾಗಿ ನೇಜಿ ನೆಟ್ಟು ಕೃಷಿಯ ಬಗ್ಗೆ ತನಗಿರುವ ಆಸಕ್ತಿ ವ್ಯಕ್ತಪಡಿಸಿದರು.
ಪ್ರಸಕ್ತ ದೈವಸ್ಥಾನಕ್ಕೆ ಸೇರಿದ ದೇವರ ಗದ್ದೆಯ(ದೊಂಪದಬಲಿ ಗದ್ದೆ) ಸಹಿತ ೨ ಗದ್ದೆಗಳಲ್ಲಿ `ಎಣೆಲ್’ ಭತ್ತದ ಕೃಷಿ ನಡೆದರೆ, ಇನ್ನುಳಿದ ಸುಮಾರು ಎರಡು ಎಕ್ರೆ ಗದ್ದೆ ಪ್ರದೇಶದಲ್ಲಿ ಮುಂದಿನ ಸೀಸನ್ಗೆ ಅನುಗುಣವಾಗಿ ಭತ್ತದ ಕೃಷಿ ಮಾಡಲಾಗುತ್ತದೆ. ನಾಟಿ ಸಂದರ್ಭದಲ್ಲಿ ವೃತ್ತಿಯಲ್ಲಿ ಅಡ್ವಕೇಟ್ ಆಗಿರುವ ಚಂದ್ರಹಾಸ ಕೌಡೂರು ಅವರೊಂದಿಗೆ ತಾಯಿ ಲೀಲಾ ಹಾಗೂ ಶೇಖರ್ ಕೋಟ್ಯಾನ್ ಇದ್ದರು.



