ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ೨೦೨೫-೨೬ ನೇ ಶೈಕ್ಷಣಿಕ ವರ್ಷದಲ್ಲಿ ನೂತನವಾಗಿ ಸೇರಿದ ವಿದ್ಯಾರ್ಥಿಗಳ ಪ್ರವೇಶೋತ್ಸವ ಕಾರ್ಯಕ್ರಮ ನಡೆಯಿತು.

ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, “ಶಿಕ್ಷಣವೇ ದೇಶದ ಆಧಾರ ಸ್ತಂಭವಾಗಿದೆ. ನಮ್ಮತನವನ್ನು ತೊಡಗಿಸಿಕೊಂಡು ಈ ಶಿಕ್ಷಣ ಸಂಸ್ಥೆಯು ಕಾರ್ಯ ನಿರ್ವಹಿಸುತ್ತಿದೆ. ರಾಷ್ಟ್ರೀಯ ಚಿಂತಕರ, ದೇಶಾಭಿಮಾನದ ಶಿಕ್ಷಣ ನೀಡಬೇಕು. ಜಗತ್ತಿನ ಎಲ್ಲಾ ದೇಶಗಳು ಬೋಧಿಸುವುದು ರಾಷ್ಟ್ರೀಯತೆಯ ಶಿಕ್ಷಣವನ್ನೇ. ಆದರೆ ಇಂದಿನ ಸರ್ಕಾರ ಅಂತಹ ಪಠ್ಯಗಳನ್ನೇ ಕೈ ಬಿಟ್ಟಿದೆ ಎಂದು ಹೇಳಿದರು.

ಎಳೆ ಮಕ್ಕಳ ಹೃದಯಂಗಳದಲ್ಲಿ ದೇಶಭಕ್ತಿ, ಸಂಸ್ಕೃತಿ, ಸಂಸ್ಕಾರವನ್ನು ಬಿತ್ತಿ, ಅವರನ್ನೇ ರಾಷ್ಟ್ರದ ಶಕ್ತಿಯನ್ನಾಗಿಸುವ ಚಿಂತನೆಯ ನಿಟ್ಟಿನಲ್ಲಿ ಕಳೆದ ೪೦ ವರ್ಷಗಳಿಂದ ಶಿಕ್ಷಣದ ಜೊತೆ ಜೊತೆಗೆ ಸಂಸ್ಕೃತಿ, ಸಂಸ್ಕಾರವು ಶ್ರೀರಾಮ ವಿದ್ಯಾ ಸಂಸ್ಥೆ ನೀಡುತ್ತಾ ಬಂದಿದೆಎಂದ ಅವರು ಮಾತೃಭಾಷೆಯಲ್ಲಿ ಶಿಕ್ಷಣ ದೊರೆತಾಗ ವಿದ್ಯಾರ್ಥಿಗಳು ಹೆಚ್ಚು ಅರ್ಥೈಸಿಕೊಳ್ಳುವ ಜೊತೆಗೆ, ನಮ್ಮ ಸಂಸ್ಕೃತಿ, ಧರ್ಮ, ಜೀವನ ಮೌಲ್ಯಗಳನ್ನು ಬಲು ಸುಲಭವಾಗಿ ಅರ್ಥಮಾಡಿಕೊಳ್ಳುತ್ತಾರೆ.ಎಂದು ಹೇಳಿದರು.

ಇದಕ್ಕು ಮೊದಲು ಅತಿಥಿಗಳು ದೀಪ ಪ್ರಜ್ವಲನೆ ಮಾಡಿ, ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿದರು. ನಂತರ ೧ನೇ ತರಗತಿಯ ಪುಟಾಣಿಗಳನ್ನು ಅಧ್ಯಾಪಕರು ಪೂರ್ಣಕುಂಭ ಸ್ವಾಗತದೊಂದಿಗೆ ಕರೆತಂದರು. ನಂತರ ನೂತನವಾಗಿ ಸೇರಿದ ವಿದ್ಯಾರ್ಥಿಗಳಿಗೆ ಅಧ್ಯಾಪಕ ವೃಂದದವರು ಆರತಿ ಬೆಳಗಿ, ಅಕ್ಷತೆ ಹಾಕಿ, ತಿಲಕವನ್ನಿಟ್ಟು, ಮಧುವ ತಿನ್ನಿಸಿ ಬಾಳು ಬೆಳಕಾಗಲಿ ಎಂದು ಆಶೀರ್ವದಿಸಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ಸಾನ್ವಿ, ಪ್ರಣಮ್ಯ, ಪೂರ್ವಿ, ಧಾತ್ರಿಕಾ, ಅನರ್ಘ್ಯ, ಅನುಶ್ರೀ, ಕೀರ್ತಿ, ಅನುಷಾ ವೇದಮಂತ್ರ ಪಠಿಸಿದರು.
ಘಾಟ್ಕೋಪರ್ ಪಶ್ಚಿಮ ಮುಂಬಯಿಯ ಶಾಸಕ ಪರಾಗ್ ಷಾ, ನಟ ನಿರ್ಮಾಪಕ ಪ್ರಕಾಶ್ ಬೆಳವಾಡಿ, ಮುಂಬಯಿಯ ಉದ್ಯಮಿಗಳಾದ ಕಿರಣ್ ಶೆಟ್ಟಿ, ನಿದರ್ಶನ್ ಗುವಾನಿ, ಹೀರೇನ್ ಭಾಯಿ, ಬಾಲಕೃಷ್ಣ ಭಂಡಾರಿ, ಮುಂಬಯಿಯ ಚಾರ್ಟರ್ಡ್ ಅಕೌಂಟೆಂಟ್ ಎನ್.ಬಿ.ಶೆಟ್ಟಿ, ಶ್ರೀರಾಮ ವಿದ್ಯಾಕೆಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ, ಶ್ರೀರಾಮ ವಿದ್ಯಾಕೆಂದ್ರದ ಸಂಚಾಲಕ ವಸಂತ ಮಾಧವ, ಸಹ ಸಂಚಾಲಕ ರಮೇಶ್ ಎನ್, ರಾಷ್ಟ್ರ ಸೇವಿಕಾ ಸಮಿತಿಯ ಕಾರ್ಯಕಾರಿಣಿ ಸದಸ್ಯೆ ಡಾ.ಕಮಲಾ ಪ್ರಭಾಕರ್ ಭಟ್, ಮುಖ್ಯೋಪಾಧ್ಯಾಯರಾದ ರವಿರಾಜ್ ಕಣಂತೂರು, ಶ್ರೀ ರಾಮ ವಿದ್ಯಾಕೇಂದ್ರದ ಆಡಳಿತ ಮಂಡಳಿಯ ಸದಸ್ಯರಾದ ಲಕ್ಷ್ಮೀರಘುರಾಜ್ , ಮಲ್ಲಿಕಾ ಆರ್ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿಯ ಸದಸ್ಯ ಚಂದ್ರಶೇಖರ ಸಾಲ್ಯಾನ್ ಹಾಗೂ ಪೋಷಕರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಪ್ರಾಪ್ತಿ ಸ್ವಾಗತಿಸಿ,
ತನ್ಮಯಿ ರೈ ಕಾರ್ಯಕ್ರಮ ನಿರೂಪಿಸಿದರು, ಧನ್ಯ ವಂದಿಸಿದರು.
