ಬಂಟ್ವಾಳ: ತೆಂಕುತಿಟ್ಟು ಚಿಕ್ಕ ಮೇಳಗಳ ಒಕ್ಕೂಟ ಕೇಂದ್ರ ಸಮಿತಿ ದಕ್ಷಿಣ ಕನ್ನಡಜಿಲ್ಲೆಇದರ ಮೂರನೇ ವರುಷದ ಸಮಾಲೋಚನ ಸಭೆಯು ಬಿ. ಸಿ ರೋಡಿನಲ್ಲಿ ನಡೆಯಿತು.

ರಾಜ್ಯ ಪ್ರಶಸ್ತಿ ಪುರಸ್ಕೃತ ಹಿರಿಯ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ್ ಶೆಟ್ಟಿ ಅವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಳೆಗಾಲದಲ್ಲಿ ವೃತ್ತಿಪರ ಯಕ್ಷಗಾನ ಕಲಾವಿದರು ಜೀವನೋಪಾಯಕ್ಕಾಗಿ ಪರಂಪರೆಯಿಂದ ನಡೆದು ಬಂದ “ಮನೆ-ಮನೆ ಯಕ್ಷಗಾನ” ವ್ಯಾಪಾರಿಕರಣವಾಗದೆ ದೇವರ ಸೇವೆ ಎಂಬ ಮನೋಭಾವನೆ ಯೊಂದಿಗೆ ಕಲಾಭಿಮಾನಿಗಳ ಮನಸಿಗೆ ಹಿತವಾಗುವಂತೆ, ಸಭ್ಯತೆಯ ಪ್ರದರ್ಶನವನ್ನು ನೀಡುವುದರೊಂದಿಗೆ ಶಿಸ್ತನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭ ಚಿಕ್ಕ ಮೇಳದಲ್ಲಿ ದುಡಿಯುತ್ತಿದ್ದ ಕಲಾಮಾತೆಯ ಮಡಿಲು ಸೇರಿದ ಪ್ರವೀತ್ ಆಚಾರ್ಯ ಗುರುವಾಯನಕೆರೆ ಮತ್ತು ಸತೀಶ್ ಆಚಾರ್ಯ ವೇಣೂರು ಇವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಮುಂದಿನ ಮಳೆಗಾಲದ ತಿರುಗಾಟವನ್ನು ತಳಕಲ ಕಾಶಿ ಶ್ರೀವಿಶ್ವನಾಥೇಶ್ವರ ದೇವಸ್ಥಾನದಲ್ಲಿ ಜೂ. 5 ರಂದು ಆರಂಭಿಸುವುದೆಂದು ತೀರ್ಮಾನಿಸಲಾಯಿತು.
ಉಪಾಧ್ಯಕ್ಷರುಗಳಾದ ಭಾಗವತರಾದ ಮೋಹನ್ ಕಲಂಬಾಡಿ, ರಮೇಶ್ ಕುಲಶೇಖರ, ಕೋಶಾಧಿಕಾರಿ ದಿವಾಕರದಾಸ್ ಕಾವಲ್ ಕಟ್ಟೆ, ಪ್ರಧಾನ ಕಾರ್ಯದರ್ಶಿ ಕುಮಾರ್ ಮಾಲೇಮಾರ್ , ಪದಾಧಿಕಾರಿಗಳು ಮತ್ತು ತೆಂಕುತಿಟ್ಟು ಚಿಕ್ಕ ಮೇಳಗಳ ಸಂಚಾಲಕರು, ಮತ್ತು ಕಲಾವಿದರು ಉಪಸ್ಥಿತರಿದ್ದರು. ಜೊತೆ ಕಾರ್ಯದರ್ಶಿ ಕಡಬ ದಿನೇಶ್ ರೈ ಸ್ವಾಗತಿಸಿ ವಂದಿಸಿದರು
