ಬಂಟ್ವಾಳ: ಪುತ್ತೂರಿನ ಕಬಕದಲ್ಲಿ ಮೇ 11ರಂದು ಕೆ.ಎಸ್.ಆರ್.ಟಿ.ಸಿ.ಬಸ್ಸೊಂದು ಚಾಲಕನ ಓವರ್ ಟೇಕ್ ಮತ್ತು ಅಜಾಗರೂಕತೆಯ ಚಾಲನೆಯಿಂದ ಅಫಘಾತಕ್ಕೊಳಗಾಗಿ ಮೃತಪಟ್ಟ ತಂದೆ-ಮಗನ ಕುಟುಂಬಕ್ಕೆ ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರುಸಾಂತ್ವನ ಹೇಳಿದರು.

ಅಪಘಾತದಿಂದ ಮೃತಪಟ್ಟ ದಿವಂಗತ ಅರುಣ್ ಕುಲಾಲ್ ಬೋರುಗುಡ್ಡೆಯವರ ಮನೆಗೆ ಭಾನುವಾರ ಸಂಜೆ ಸಂಸದರಾದ ಕ್ಯಾ.ಬ್ರಿಜೇಶ್ ಚೌಟ,ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಭೇಟಿ ನೀಡಿ ಮೃತರ ಪತ್ನಿ , ತಾಯಿ ಮತ್ತು ಮಗನಿಗೆ ಸಾಂತ್ವನ ಹೇಳಿದರಲ್ಲದೆ ತಾವು ನಿಮ್ಮ ಜೊತೆಗೆ ಇರುವುದಾಗಿ ಧೈರ್ಯ ತುಂಬಿ ವಯಕ್ತಿಕ ನೆಲೆಯಲ್ಲಿ ಆರ್ಥಿಕ ನೆರವನ್ನು ನೀಡಿದ್ದಾರೆ
ಬಂಟ್ವಾಳ ತಾಲೂಕು ನರಿಕೊಂಬು ಗ್ರಾಮದ ನಾಯಿಲ ನಿವಾಸಿ, ಗ್ರಾಮ ಪಂಚಾಯತ್ ಸದಸ್ಯ, ಸಾಮಾಜಿಕ ಕಾರ್ಯಕರ್ತ ಅರುಣ್ ಕುಲಾಲ್ ಬೋರುಗುಡ್ಡೆ ಅವರು ವೃತ್ತಿಯಲ್ಲಿ ಕಾರ್ಪೆಂಟರ್ ಆಗಿದ್ದು,ಇಡೀ ಕುಟುಂಬದ ಆಧಾರಸ್ತಂಭವಾಗಿದ್ದರು.
ಮೇ.11 ರಂದು ತನ್ನ ಮಗ ಧ್ಯಾನ್ ನೊಂದಿಗೆ ಬೈಕ್ ನಲ್ಲಿ ಪುತ್ತೂರಿಗೆ ತೆರಳುತ್ತಿದ್ದ ವೇಳೆ ಕೆಎಸ್ ಆರ್ ಟಿ ಸಿ ಬಸ್ಸೊಂದರ ಚಾಲಕನ ಅಜಾಗರುಕತೆ ಮತ್ತು ನಿರ್ಲಕ್ಷ್ಯತನದ ಚಾಲನೆಯಿಂದ ಬೈಕ್ ಗೆ ಡಿಕ್ಕಿಯಾದ ಪರಿಣಾಮ ತಂದೆ- ಮಗ ಇಬ್ಬರೂ ಮೃತಪಟ್ಟಿದ್ದರು.
ಸಂಸದರ ಜೊತೆಗೆ ಬಿಜೆಪಿ ಬಂಟ್ವಾಳ ಮಂಡಲ ಅಧ್ಯಕ್ಷರಾದ ಚೆನ್ನಪ್ಪ ಆರ್. ಕೋಟ್ಯಾನ್,ಜಿಲ್ಲಾ ಕಾರ್ಯದರ್ಶಿ ದಿನೇಶ್ ಅಮ್ಟೂರು, ನರಿಕೊಂಬು ಗ್ರಾ.ಪಂ.ಮಾಜಿ ಅಧ್ಯಕ್ಷ ಯಶೋಧರ ಕರ್ಬೆಟ್ಟು,ಶಂಭೂರು ಮೂರ್ತೆದಾರರ ಸೇ.ಸ.ಸಂಘದ ಅಧ್ಯಕ್ಷ ಪುರುಷೋತ್ತಮ ಸಾಲಿಯಾನ್,ತಾ.ಪಂ.ಮಾಜಿ ಉಪಾಧ್ಯಕ್ಷ ಆನಂದ ಶಂಭೂರು,ಸ್ಥಳೀಯ ಮುಖಂಡರಾದ ಪ್ರೇಮನಾಥ ಶೆಟ್ಟಿ, ಸ್ಥಳೀಯ ಗ್ರಾ.ಪಂ.ಸದಸ್ಯರು,ಪ್ರಮುಖರು ಉಪಸ್ಥಿತರಿದ್ದರು.
