ಈಶಾ ಫೌಂಡೇಶನ್ ನಡೆಸಿದ ಶಿವರಾತ್ರಿ ಕಾರ್ಯಕ್ರಮದಲ್ಲಿ ಸಂಸದ ಕ್ಯಾ. ಬ್ರಿಜೇಶ್ ಚೌಟ ಭಾಗಿ

ಶಿವರಾತ್ರಿಯಂದು ತಮಿಳುನಾಡಿನ ಕೊಯಮತ್ತೂರಿನಲ್ಲಿ ಈಶಾ ಫೌಂಡೇಶನ್ ನಡೆಸಿದ ಶಿವರಾತ್ರಿ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಪಾಲ್ಗೊಂಡಿದ್ದಾರೆ.ಈಶಾ ಫೌಂಡೇಶನ್ ಸಂಸ್ಥಾಪಕ ಹಾಗೂ ಆಧ್ಯಾತ್ಮಿಕ ಗುರು ಸದ್ಗುರು ಜಗ್ಗಿ ವಾಸುದೇವ್ ಅವರ ನೇತೃತ್ವದಲ್ಲಿ ದಕ್ಷಿಣದ ಕೈಲಾಸ ಎಂದು ಕರೆಯಲ್ಪಡುವ ವೆಳ್ಳಿಯಂಗಿರಿ ತಪ್ಪಲಿನಲ್ಲಿರುವ ಈಶ ಯೋಗ ಕೇಂದ್ರದಲ್ಲಿ ನಡೆದ ಅಹೋರಾತ್ರಿ ಮಹಾಶಿವರಾತ್ರಿ ಆಚರಣೆಯಲ್ಲಿ ಭಾಗವಹಿಸಿ, ಧ್ಯಾನ ಲಿಂಗ ಮತ್ತು ಲಿಂಗ ಭೈರವಿಗೆ ವಿಶೇಷ ಪ್ರಾರ್ಥನೆ ಕೂಡ ಸಲ್ಲಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಸಾವಿರಾರೂ ಭಕ್ತರು ಹಾಗೂ ಕೇಂದ್ರ ಸಚಿವ ಅವಿತ್ ಶಾ ಮತ್ತು ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೂಡ ಭಾಗವಹಿಸಿದರು. ಪಂಜಾಬ್ ರಾಜ್ಯಪಾಲ ಗುಲಾಬ್ ಚಂದ್ ಕಟಾರಿಯಾ, ಒರಿಸ್ಸಾ ರಾಜ್ಯಪಾಲ ಡಾ.ಹರಿಬಾಬು ಕಂಬಂಪಾಟಿ, ಕೇಂದ್ರ ಮಾಹಿತಿ ಮತ್ತು ಪ್ರಸಾರ ಮತ್ತು ಸಂಸದೀಯ ವ್ಯವಹಾರ ಖಾತೆಯ ರಾಜ್ಯ ಸಚಿವರಾದ ಎಲ್. ಮುರುಗನ್ ಭಾಗವಹಿಸಿದ್ದರು.
ಈಶ ಫೌಂಡೇಶನ್ನಲ್ಲಿ ಮಹಾ ಶಿವರಾತ್ರಿ ಆಚರಣೆಯಲ್ಲಿ ಭಾಗವಹಿಸುವುದು ನಿಜವಾಗಿಯೂ ಅಭೂತಪೂರ್ವ ಆಧ್ಯಾತ್ಮಿಕ ಅನುಭವವನ್ನು ನೀಡಿದೆ. ಶಿವರಾತ್ರಿ ಉತ್ಸವದಲ್ಲಿ ಭಾಗವಹಿಸಲು ನನಗೆ ಅವಕಾಶ ಸಿಕ್ಕಿರುವುದು ಮಾತ್ರವಲ್ಲ ಸದ್ಗುರು ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದು ಖುಷಿ ತಂದಿದೆ. ಸೌಂಡ್ಸ್ ಆಫ್ ಈಶ , ಪ್ರಾಜೆಕ್ಟ್ ಸಂಸ್ಕೃತಿ, ಈಶಾ ಗುರುಕುಲಂನ ವಿದ್ಯಾರ್ಥಿಗಳ , ಅಜಯ್ – ಅತುಲ್ ಮತ್ತು ಇತರ ಪ್ರಸಿದ್ಧ ಪ್ರದರ್ಶಕರಿಂದ ಸಂಗೀತ, ನೃತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಮಧ್ಯರಾತ್ರಿ ಮಹಾಮಂತ್ರ ದೀಕ್ಷೆ, ಶಂಭೋ ಧ್ಯಾನ ಶಿವರಾತ್ರಿ ಜಾಗರಣೆಯಲ್ಲಿ ಚೈತನ್ಯಶೀಲರಾಗುವಂತೆ ಮಾಡಿದೆ ಎಂದು ಕ್ಯಾ. ಬ್ರಿಜೇಶ್ ಚೌಟ ಹೇಳಿದರು.