ಮಂಗಳೂರು : ನಗರದ ಇಸ್ಕಾನ್ ಸಂಸ್ಥೆಯ ಸಹ ಸಂಸ್ಥೆಯಾದ ಅಕ್ಷಯಪಾತ್ರ ಪ್ರತಿಷ್ಠಾನದ ಸಂಸ್ಥೆಯು ದಿನಂಪ್ರತಿ ಜಿಲ್ಲೆಯ 190 ಸರ್ಕಾರಿ ಶಾಲೆಯ 20,000 ವಿದ್ಯಾರ್ಥಿಗಳಿಗೆ ಬಿಸಿಯೂಟ ಸರಬರಾಜು ಮಾಡುವ ಕಾರ್ಯ ಭಗವಂತನು ಮೆಚ್ಚುವ ಸತ್ಕಾರ್ಯ” ಎಂದು ಬಂಟ್ವಾಳ ಕ್ಷೇತ್ರದ ಶಾಸಕ ರಾಜೇಶ್ ನಾಯ್ಕ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಅವರು ಜ. 28 ರಂದು ಮಂಗಳವಾರ ಬೆಂಜನಪದವು ಅಕ್ಷಯಪಾತ್ರ ಪ್ರತಿಷ್ಠಾನದ ಆವರಣದಲ್ಲಿ ಜರಗಿದ ಹಸಿರು ಸಂಕಲ್ಪ ಮತ್ತು ಸಮರ್ಪಣ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಇಸ್ಕಾನ್ ಸಂಸ್ಥೆಯ ಧಾರ್ಮಿಕ, ಶೈಕ್ಷಣಿಕ, ಆಧ್ಯಾತ್ಮಿಕ ಮತ್ತು ಸಾಮಾಜಿಕ ಸಮಾಜ ಸೇವಾ ಕಾರ್ಯ ಶ್ಲಾಘನೀಯ ಎಂದು ನುಡಿದು ಅದು ಮಾತ್ರವಲ್ಲದೆ ಋಷಿ ವೃತ್ತಿ ಮತ್ತು ಕೃಷಿ ವೃತ್ತಿಗೆ ಪ್ರಾಮುಖ್ಯತೆ ನೀಡಿದೆ ಎಂದು ಸಂತಸ ವ್ಯಕ್ತ ಪಡಿಸಿದರು.


ಇಸ್ಕಾನ್ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಗುಣಾಕರ ರಾಮ ದಾಸ ರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಅಕ್ಷಯ ಪಾತ್ರ ಪ್ರತಿಷ್ಠಾನದ ಆವರಣದಲ್ಲಿ ಸುಮಾರು 1.00 ಕೋಟಿ ಮೌಲ್ಯದ ದಿನಂಪ್ರತಿ 50,000 ಲೀಟರ್ ಸಾಮಥ್ರ್ಯವುಳ್ಳ ತ್ಯಾಜ್ಯ ನೀರಿನ ಸಂಸ್ಕರಣಾ ಘಟಕವನ್ನು (ಹಸಿರು ಸಂಕಲ್ಪ) ನೂತನವಾಗಿ ಆರಂಭಿಸಲಾಗಿದೆ ಮತ್ತು ಅದರ ಶುದ್ಧೀಕರಿಸಿದ ನೀರನ್ನು ಸ್ವಚ್ಛ ಭಾರತ್ ಹಾಗೂ ಹಸಿರು ಕ್ರಾಂತಿಯ ಅಭಿಯಾನವಾಗಿ ಗಿಡ, ಮರ, ಗದ್ದೆಗಳಿಗೆ ಸರಬರಾಜು ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ಶೈಕ್ಷಣಿಕ ಮತ್ತು ಕೌಶಲ್ಯ ಅಭಿಯಾನದ ಅಂಗವಾಗಿ ಇಸ್ಕಾನ್ ಸಂಸ್ಥೆಯ ಗೋವರ್ಧನ ಗಿರಿ ನೂತನ ಶೈಕ್ಷಣಿಕ ಮತ್ತು ಸಾಂಸ್ಕøತಿಕ ಕೇಂದ್ರಕ್ಕೆ ಕಟ್ಟಡಕ್ಕೆ (ಸಮರ್ಪಣ್) ಇಟ್ಟಿಗೆಗಳನ್ನು ಪೂಜಿಸಿ ಸಮರ್ಪಿಸಲಾಯಿತು. ಈ ಕಾರ್ಯಕ್ರಮದ ಸವಿನೆನಪಿಗಾಗಿ ಹಾಗೂ ಸಂಸ್ಥೆಯ ಸಮಾಜ ಸೇವಾ ಅಂಗವಾಗಿ ಅಡ್ಡೂರು ದ.ಕ. ಜಿಲ್ಲಾ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಾಗ್ರಿಗಳನ್ನು ಉಚಿತವಾಗಿ ವಿತರಿಸಲಾಯಿತು.


ವೇದಿಕೆಯಲ್ಲಿ ಕಾಪು ಕ್ಷೇತ್ರದ ಶಾಸಕ ಜಿ. ಸುರೇಶ್ ಶೆಟ್ಟಿ, ಆಭರಣ ಜ್ಯುವೆಲ್ಲರ್ಸ್ ಆಡಳಿತ ನಿರ್ದೇಶಕ ಪ್ರತಾಪ್ ಮಧುಕರ್ ಕಾಮತ್, ಚಿತ್ತಾರ ಗೇರುಬೀಜ ಸಂಸ್ಥೆಯ ಆಡಳಿತ ನಿರ್ದೇಶಕ ಗೋಪಿನಾಥ ಕಾಮತ್, ಅದಾನಿ ಸಮೂಹ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಕಿಶೋರ್ ಆಳ್ವ, ಎಂ.ಆರ್.ಪಿ.ಎಲ್. ಸಂಸ್ಥೆಯ ಮಹಾಪ್ರಬಂಧಕ ಪ್ರಶಾಂತ್ ಬಾಳಿಗ, ಆಳ್ವಾಸ್ ಮೂಡಬಿದ್ರೆ ಸಂಸ್ಥೆಯ ವಿವೇಕ ಆಳ್ವ, ಆಲಿಗ್ರೋ ಸಂಸ್ಥೆಯ ಆಡಳಿತ ನಿರ್ದೇಶಕ ಧರ್ಮೇಂದ್ರ ಮೆಹ್ತಾ ಮತ್ತು ಎಸ್.ಸಿ.ಎಸ್. ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ| ಜೀವ್‍ರಾಜ್ ಆಳ್ವ, ಎ.ಕೆ. ಬನ್ಸಾಲ್ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಅಭಿನವ್ ಬನ್ಸಾಲ್, ನಗರದ ಖ್ಯಾತ ವಕೀಲ ಪದ್ಮರಾಜ್ ಪೂಜಾರಿ, ಎಸ್.ಸಿ.ಡಿ.ಸಿ. ಬ್ಯಾಂಕ್‍ನ ನಿರ್ದೇಶಕರಾದ ಶ್ರೀ ಐಕಳ ಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು ಮತ್ತು ಮುಂಬಯಿ ನಗರದ ತ್ರಿರಂಗ ಸಂಗಮ ಸಂಸ್ಥೆಯ ಮಾಲಿಕ ಮೋಹನ್ ರೈ ಉಪಸ್ಥಿತರಿದ್ದು ಪ್ರಸ್ತಾವಿಕವಾಗಿ ಮಾತಾಡಿ ಸಂಸ್ಥೆಗೆ ಯಶಸ್ಸು ಕೋರಿದರು.

ಉಪಾಧ್ಯಕ್ಷ ಶ್ರೀ ಸನಂದನ ದಾಸ ವಂದಿಸಿದರು. ಶ್ರೀ ಶ್ವೇತದ್ವೀಪ ದಾಸ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *