ಬಂಟ್ವಾಳ: 29ಕ್ಕೆ ಹರಿನಾರಾಯಣ ಬೈಪಡಿತ್ತಾಯಗೆ ಶ್ರೀ ವಿಷ್ಣು ಮೂರ್ತಿ ಯಕ್ಷಶ್ರೀ ಪ್ರಶಸ್ತಿ ಪ್ರಧಾನ

ಬಂಟ್ವಾಳ: ಅಜ್ಜಿಬೆಟ್ಟು ಗ್ರಾಮದ ಪಾಂಗಲ್ಪಾಡಿ ಶ್ರೀ ವಿಷ್ಣುಮೂರ್ತಿ ಯಕ್ಷಗಾನ ಕಲಿಕಾಕೇಂದ್ರದ ವಿದ್ಯಾರ್ಥಿಗಳ ರಂಗಪ್ರವೇಶ, ಗುರುವಂದನಾ ಹಾಗೂ ” ಶ್ರೀ ವಿಷ್ಣು ಮೂರ್ತಿ ಯಕ್ಷಶ್ರೀ ಪ್ರಶಸ್ತಿಪ್ರದಾನ” ಕಾರ್ಯಕ್ರಮ ಡಿ.29 ರಂದು ಪಾಂಗಲ್ಪಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ. ಗುರುವಾರ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿಈ ಬಗ್ಗೆ ಮಾಹಿತಿ ನೀಡಿದ ಶ್ರೀ ವಿಷ್ಣುಮೂರ್ತಿ ಯಕ್ಷಗಾನ ಕಲಿಕಾಕೇಂದ್ರದ ಅಧ್ಯಕ್ಷ ರಾಘವೇಂದ್ರ ಬಲ್ಲಾಳ್ ಅವರು ಕಲಿಕಾ ಕೇಂದ್ರದ ಗುರುಗಳಾದ ಚಂದ್ರಶೇಖರ ಭಟ್ ಕೊಂಕಣಾಜೆ ಅವರ ಸುಮಾರು 10 ಕ್ಕು ಹೆಚ್ಚು ಮಂದಿ ಶಿಷ್ಯಂದಿರು ರಂಗಪ್ರವೇಶ ಮಾಡಲಿದ್ದಾರೆ.
ಮಧ್ಯಾಹ್ನ 2.30 ಕ್ಕೆ ಈ ಕಾರ್ಯಕ್ರಮವನ್ನು ಕ್ಷೇತ್ರದ ತಂತ್ರಿಗಳಾದ ವೇ.ಮೂ.ಬಾಲಕೃಷ್ಣ ಪಾಂಗಣ್ಣಾಯ ಅವರು ದೀಪಪ್ರಜ್ವಲನೆಗೈದು ಉದ್ಘಾಟಿಸಲಿದ್ದಾರೆ ಎಂದರು.
ಸಂಜೆ 4 ಗಂಟೆಗೆ ಪಿಲಾತಬೆಟ್ಟು ಸಿ.ಎ.ಬ್ಯಾಂಕ್ ಅಧ್ಯಕ್ಷ ತುಂಗಪ್ಪ ಬಂಗೇರ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಹಿರಿಯ ಹಿಮ್ಮೇಳ ವಾದಕರಾದ ಹರಿನಾರಾಯಣ ಬೈಪಡಿತ್ತಾಯ ಅವರಿಗೆ ಶ್ರೀ ವಿಷ್ಣು ಮೂರ್ತಿ ಯಕ್ಷಶ್ರೀ ಪ್ರಶಸ್ತಿಪ್ರದಾನ” ಮಾಡಲಾಗುವುದು ಹಾಗೂ ಯಕ್ಷಗುರುಗಳಾದ ಚಂದ್ರಶೇಖರ ಭಟ್ ಕೊಂಕಣಾಜೆ ಅವರಿಗೆ ಗುರುವಂದನಾ ಕಾರ್ಯಕ್ರಮ ನಡೆಯಲಿದೆ. ಉದ್ಯಮಿಗಳಾದ ಶ್ರೀಪತಿ ಭಟ್ ಮೂಡಬಿದ್ರೆ,ರೋ.ರಾಘವೇಂದ್ರ ಭಟ್ ಹೊಕ್ಕಾಡಿಗೋಳಿ,ಯಕ್ಷಗಾನ ಕಲಾವಿದ ದಿನೆರಶ್ ಶೆಟ್ಟಿ ಕಾವಳಕಟ್ಟೆ, ಪಾಂಗಲ್ಪಾಡಿ ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ.ರಾಮಕೃಷ್ಣ ಎಸ್.,ಮಂಗಳೂರು ಹಾಪ್ ಕಾಮ್ಸ್ ನಿರ್ದೇಶಕ ಲಕ್ಷ್ಮೀ ನಾರಾಯಣ ಉಡುಪ ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ನಂತರ ಚಂದ್ರಶೇಖರ ಭಟ್ ಕೊಂಕಣಾಜೆ ಅವರ ಶಿಷ್ಯರಿಂದ “ಅಬ್ಬರತಾಳ” ಸಂಜೆ 6 ಗಂಟೆಯಿಂದ ಪ್ರೇಮ್ ರಾಜ್ ಕೊಯಿಲ ಅವರ ನಿರ್ದೇಶನದಲ್ಲಿ “ಯಕ್ಷಕೌಸ್ತಭ” ಮಕ್ಕಳ ತಂಡದಿಂದ ಶ್ರೀದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಯಕ್ಷಗುರು ಚಂದ್ರಶೇಖರ ಭಟ್ ಕೊಂಕಣಾಜೆ, ಸಮಿತಿ ಪದಾಧಿಕಾರಿಗಳಾದ ಹರಿಪ್ರಸಾದ್ ರಾವ್ ಕೊಯಿಲ,ಡಾ.ರಾಮಕೃಷ್ಣ ಎಸ್,ಕೀರ್ತನ್ ಶೆಟ್ಟಿ ಮೊದಲಾದವರಿದ್ದರು.