ಮಂಗಳೂರು: ಕಾಂಗ್ರೆಸ್ ಕಚೇರಿಯಲ್ಲೇ ಮುಖಂಡರ ನಡುವೆ ಹೊಡೆದಾಟ, ಸ್ಥಳಕ್ಕೆ ಧಾವಿಸಿದ ಪೊಲೀಸರು

ಮಂಗಳೂರಿನ ಮಲ್ಲಿಕಟ್ಟೆ ಬಳಿ ಇರುವ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಮುಖಂಡರು ಹೊಡೆದಾಡಿಕೊಂಡ ಘಟನೆಯೂ ನಡೆದಿದೆ. ಪಂಚಾಯಿತಿ ಉಪಚುನಾವಣೆಯಲ್ಲಿ ಆಯ್ಕೆಯಾದವರನ್ನು ಸನ್ಮಾನಿಸುವ ವಿಚಾರವಾಗಿ ಆರಂಭವಾದ ಮಾತಿನ ಚಕಮಕಿ ನಂತರ ಹೊಡೆದಾಟಕ್ಕೆ ತಿರುಗಿದೆ.
ಮೊದಲಿಗೆ ಕಾಂಗ್ರೆಸ್ ಮುಖಂಡ ಪ್ರಕಾಶ್ ಶೆಟ್ಟಿ ತುಂಬೆಗೆ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್ಕುಮಾರ್ ಹೊಡೆದಿದ್ದಾರೆ. ಇದೇ ವೇಳೆ, ತಿರುಗಿಸಿ ಹರೀಶ್ಗೆ ಹೊಡೆಯಲು ಪ್ರಕಾಶ್ ಶೆಟ್ಟಿ ಮುಂದಾಗಿದ್ದಾರೆ. ಈ ಘಟನೆ ಬೆನ್ನಲ್ಲೇ ಸ್ಥಳಕ್ಕೆ ಕಾಂಗ್ರೆಸ್ ಕಚೇರಿಗೆ ಸಂಟ್ರಲ್ ಎಸಿಪಿ ಮತ್ತು ಕದ್ರಿ ಪೊಲೀಸರು ಆಗಮಿಸಿದ್ದಾರೆ.
ಆದರೆ ಈ ವೇಳೆಯಲ್ಲಿ ಯಾವುದೇ ರೀತಿ ಗಲಾಟೆಯಾಗಿಲ್ಲ ಎಂದು ತಳ್ಳಿಹಾಕುವ ಮೂಲಕ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಹೇಳಿಕೆ ನೀಡಿದ್ದಾರೆ. ಕೆಪಿಸಿಸಿ ಸ್ವಂತ ಕಟ್ಟಡ ಹಾಗೂ ಪಾಲಿಕೆ ಚುನಾವಣೆ ಬಗ್ಗೆ ಚರ್ಚೆ ಮಾಡುತ್ತಿದ್ದೆವು. ಸ್ಥಳೀಯಾಡಳಿತ ಚುನಾವಣೆಯಲ್ಲಿ ಗೆದ್ದವರಿಗೆ ಸನ್ಮಾನ ಕಾರ್ಯಕ್ರಮ ಮಾಡಲಾಗಿತ್ತು. ಹಿರಿಯ ನಾಯಕರು ಉಪಸ್ಥಿತರಿರುವಾಗ ಸ್ವಲ್ಪ ಗೊಂದಲವಾಯ್ತು. ಪಕ್ಷದ ಒಳಗೆ ಆದ ಘಟನೆ, ಭಿನ್ನಾಭಿಪ್ರಾಯ ಇರಬಾರದು ಎಂದು ಚರ್ಚೆ ಮಾಡಿ ಮುಗಿಸಿಕೊಂಡಿದ್ದೇವೆ ಎಂದು ಹೇಳಿದ್ದಾರೆ.
ಪಕ್ಷವು ಒಗ್ಗಾಟ್ಟಾಗಿದೆ, ಅಂತಹ ದೊಡ್ಡ ಸಮಸ್ಯೆ ಇಲ್ಲ, ಎಲ್ಲಾ ಸುಸೂತ್ರ ವಾಗಿ ಮುಗಿದಿದೆ. ಜಿಲ್ಲಾಧ್ಯಕ್ಷರ ಬದಲಾವಣೆ ಕುರಿತು ಚರ್ಚೆ ವಿಚಾರ. ನಾನು ರಾಜೀನಾಮೆ ನೀಡಿ ಎರಡು ವರ್ಷ ಆಯಿತು. ಬದಲಾವಣೆಗೆ ಕೆಲವು ಸಮಯ ತೆಗೆದುಕೊಂಡಿದ್ದಾರೆ. ಎಲ್ಲಾ ರಾಜ್ಯದ ನಾಯಕರು ಇದರ ಬಗ್ಗೆ ಮಾಹಿತಿ ಪಡೆದಿದ್ದಾರೆ. ಯಾರು ಕೂಡ ಪಕ್ಷದ ಅಧ್ಯಕ್ಷತೆಗೆ ಅಂಟಿ ಕುಳಿತಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಹೇಳಿದ್ದಾರೆ.