ಬಂಟ್ವಾಳ:ಸಮಾಜ ಸೇವಾ ಸಹಕಾರಿ ಸಂಘದಿಂದ 6.88 ಲ.ರೂ.ವಿದ್ಯಾರ್ಥಿವೇತನ ವಿತರಣೆ
ಬಂಟ್ವಾಳ:ಸಮಾಜ ಸೇವಾ ಸಹಕಾರಿ ಸಂಘ ಬಂಟ್ವಾಳ ಇದರ ವತಿಯಿಂದ 2024-25 ರಾ ಸಾಲಿನ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮವು ಸಂಘದ ಸಭಾಭವನದಲ್ಲಿ ನಡೆಯಿತು. ಉನ್ನತ ಶಿಕ್ಷಣ ಪಡೆಯುವ ಸುಮಾರು 160 ವಿದ್ಯಾರ್ಥಿಗಳಿಗೆ ಒಟ್ಟು 6.88 ಲಕ್ಷ ರೂ. ವಿದ್ಯಾರ್ಥಿವೇತನವನ್ನು ವಿತರಿಸಲಾಯಿತು.

ಪತ್ರಕರ್ತ ಸಂದೀಪ್ ಜಾಲ್ಯಾನ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸಂಘದ ಸ್ಥಾಪಕಾಧ್ಯಕ್ಷರಾದ ಡಾ.ಅಮ್ಮೆಂಬಳ ಬಾಳಪ್ಪರ ಜೀವನದ ಕೊನೆಯ ಕ್ಷಣದಲ್ಲಿ ನಡೆಸಿದ ಮಾತುಕಥೆಯ ಸಂದರ್ಭವನ್ನು ಹಂಚಿಕೊಂಡರಲ್ಲದೆ ವಿದ್ಯಾರ್ಥಿಗಳು ಅತಿಯಾದ ಮೊಬೈಲ್ ಬಳಕೆಯಿಂದ ದೂರವಿದ್ದು, ಜೀವನದಲ್ಲಿ ಮೌಲ್ಯಗಳನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.
ಮೂಡಬಿದ್ರೆ ಕೆಐಸಿಎಂ ಪ್ರಥಮ ದರ್ಜೆ ಸಹಾಯಕರಾದ ಹೊನ್ನಪ್ಪ ಅವರು ಅತಿಥಿಯಾಗಿ ಭಾಗವಹಿಸಿ ಶುಭಹಾರೈಸಿದರು.
ಇದೇ ವೇಳೆ ಲಕ್ಷ್ಮೀ ಅಮೂಲ್ಯ ಸ್ವ-ಸಹಾಯ ಸಂಘದ ಸದಸ್ಯೆ ದೇವಕಿ ಅವರು ಮೃತಪಟ್ಟಿದ್ದು, ಇವರ ಪುತ್ರಿ ಕು. ಜಯಲಕ್ಷ್ಮಿ ಅವರಿಗೆ ಆಸ್ಪತ್ರೆ ಚಿಕಿತ್ಸೆಯ ಖರ್ಚಿನ ಬಗ್ಗೆ 25 ಸಾ.ರೂ.ವಿನ ಚೆಕ್ ಹಾಗೂ 2023-24 ಸಾಲಿನ ಸಹಕಾರಿ ಶಿಕ್ಷಣ ನಿಧಿ 8,57,863-00 ರೂ.ವಿನ ಚೆಕ್ ನ್ನು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ. ಇಲಾಖೆಗೆ ಹಸ್ತಾಂತರಿಸಲಾಯಿತು.
ಸಂಘದ ಅಧ್ಯಕ್ಷ ಸುರೇಶ್ ಕುಲಾಲ್,ಉಪಾಧ್ಯಕ್ಷ ಪದ್ಮನಾಭ ವಿಟ್ಲ ,ನಿರ್ದೇಶಕರು ಉಪಸ್ಥಿತರಿದ್ದರು.
ಸಂಘದ ಪ್ರಧಾನ ವ್ಯವಸ್ಥಾಪಕರಾದ ಬೋಜ ಮೂಲ್ಯ ಅವರು ಪ್ರಸ್ತಾವನೆಗೈದರು.
ಕುಕ್ಕಾಜೆ ಶಾಖಾ ವ್ಯವಸ್ಥಾಪಕರಾದ ಕಮಲಾ ಅವರು ಸ್ವಾಗತಿಸಿದರು, ವಿಟ್ಲ ಶಾಖಾ ವ್ಯವಸ್ಥಾಪಕರಾದ ಸುಂದರ ಮೂಲ್ಯ ಅವರು ವಂದಿಸಿದರು, ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಮೋಹನ್ ಎಂ.ಕೆ.ಅವರು ಕಾರ್ಯಕ್ರಮ ನಿರೂಪಿಸಿದರು