ಪುತ್ತೂರು: ಕಾರ್ಮಿಕನ ಶವ ರಸ್ತೆ ಬದಿ ಮಲಗಿಸಿ ಹೋದ ಮಾಲೀಕ
ಪುತ್ತೂರಿನಲ್ಲಿ ಕಳೆದ ಶನಿವಾರ ಪುತ್ತೂರು ಚಿಕ್ಕಮೂಡ್ನೂರು ಗ್ರಾಮದ ಶಿವಪ್ಪ(70 ) ಮೃತ ಕಾರ್ಮಿಕನ ಶವ ಪತ್ತೆಯಾಗಿದೆ. ಇದನ್ನು ನೋಡಿದಾಗ ನಮ್ಮಲ್ಲಿ ಮಾನವಿಯತೆ ಸತ್ತು ಹೋಗಿದೆ ಎಂದು ಅನ್ನಿಸುತ್ತದೆ. ಮೃತಪಟ್ಟ ಕೂಲಿ ಕಾರ್ಮಿಕನ (Labor) ಶವವನ್ನು ಮಾಲೀಕ ರಸ್ತೆ ಬದಿ ಮಲಗಿಸಿ ಹೋಗಿದ್ದಾರೆ. ಸಾಲ್ಮರ ತಾವ್ರೋ ಇಂಡಸ್ಟ್ರೀಸ್ ಸಂಸ್ಥೆಯ ಮಾಲಕ ಹೆನ್ರಿ, ಗಾರೆ ಕೆಲಸಕ್ಕೆ ಕಾರ್ಮಿಕ ಶಿವಪ್ಪರನ್ನು ಕರೆಸಿಕೊಂಡಿದರು ಎಂದು ಹೇಳಲಾಗಿದೆ. ಆದರೆ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಶಿವಪ್ಪ ಮೃತಪಟ್ಟಿದ್ದಾರೆ. ಬಳಿಕ ಮೃತದೇಹವನ್ನ ಪಿಕ್ ಅಪ್ ವಾಹನದಲ್ಲಿ ತಂದು ಕುಟುಂಬದವರಿಗೆ ಮಾಹಿತಿ ನೀಡದೆ ಮನೆಯ ಪಕ್ಕದಲ್ಲೇ ಇರಿಸಿ ಹೋಗಿದ್ದಾರೆ. ಬಳಿಕ ರಸ್ತೆ ಬದಿಯಲ್ಲಿದ್ದ ಶಿವಪ್ಪ ಮೃತದೇಹವನ್ನು ಮಗಳು ಹಾಗೂ ಪತ್ನಿ ತೆಗೆದುಕೊಂಡು ಹೋಗಿದ್ದಾರೆ.
ನಮ್ಮ ಮನೆಯಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ ಅವರನ್ನು ಆಸ್ಪತ್ರೆ ಕರೆದುಕೊಂಡು ಹೋಗುವಷ್ಟು ಯೋಚನೆ ಕೂಡ ಬಂದಿಲ್ಲ. ಹೀಗಾಗಿ ಘಟನೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಮನೆಯವರಿಗೂ ಮಾಹಿತಿ ನೀಡದೆ ನಿರ್ಲಕ್ಷ್ಯ ವಹಿಸಲಾಗಿದೆ. ಈ ಘಟನೆ ಬೆನ್ನಲ್ಲೇ ದಲಿತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಪುತ್ತೂರು ಶಾಸಕ ಅಶೋಕ್ ರೈ ದೌಡಾಯಿಸಿದ್ದಾರೆ.
ಈಗಾಗಲೇ ಆರೋಪಿ ಹೆನ್ರಿ ತಲೆ ಮರೆಸಿಕೊಂಡಿದ್ದು, ಮಾಲೀಕನನ್ನ ಬಂಧಿಸುವಂತೆ ದಲಿತ ಸಂಘಟನೆಗಳು ಆಗ್ರಹಿಸಿವೆ. ಇಂದು ಸಂಜೆಯೊಳಗೆ ಬಂಧಿಸದೇ ಇದ್ದರೆ ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.