ಮಂಚಿಯಲ್ಲಿ 23 ನೇ ಬಂಟ್ವಾಳ ತಾ.ಕನ್ನಡಸಾಹಿತ್ಯ ಸಮ್ಮೇಳನ,ಲಾಂಛನ ಅನಾವರಣ
ಬಂಟ್ವಾಳ ಸರ್ಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು ಇಲ್ಲಿ ಬಂಟ್ವಾಳ ತಾಲೂಕು 23ನೇ ಕನ್ನಡ ಸಾಹಿತ್ಯ ಸಮ್ಮೇಳನ ಸ್ವಾಗತ ಸಮಿತಿಯ ಘೋಷಣೆ ಹಾಗೂ ಲಾಂಛನ ಅನಾವರಣ ಕಾರ್ಯಕ್ರಮ ನಡೆಯಿತು.ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ವಿಶ್ವನಾಥ ಬಂಟ್ವಾಳ ಇವರು ಸಮಿತಿಯ ಪದಾಧಿಕಾರಿಗಳ ಮಾಹಿತಿ ಪತ್ರದ ಬಿಡುಗಡೆಗೊಳಿಸಿ ಸ್ವಾಗತ ಸಮಿತಿಯ ಅಧಿಕೃತ ಘೋಷಣೆ ಮಾಡಿದರು. ಇದೇ ವೇಳೆ ಮಂಚಿಯಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಅನಾವರಣಗೊಳಿಸಲಾಯಿತು.

ಅಮ್ಮುಂಜೆ ಸಾಹಿತ್ಯ ಸಮ್ಮೇಳನದ ಪ್ರಧಾನ ಸಂಚಾಲಕರಾಗಿದ್ದ ಅಬೂಬಕ್ಕರ್ ಅಮ್ಮುಂಜೆ ಇವರು “ಸಾಹಿತ್ಯ ಸಮ್ಮೇಳನದ ಆಯೋಜನೆ ಎನ್ನುವುದು ಜೇನು ಸಂಗ್ರಹಿಸುವ ಕಾರ್ಯದಂತೆ. ಯಶಸ್ವಿಯಾದರೆ ಎಲ್ಲರಿಗೂ ಜೇನು ಹಂಚಿದಂತೆ. ಕೆಲವೊಮ್ಮೆ ಒಂದೆರಡು ಜೇನಿನ ದಾಳಿಯ ನೋವನ್ನು ಅನುಭವಿಸಲು ಸಿದ್ಧರಾಗಿರಬೇಕು. ಒಟ್ಟಾಗಿ ಒಂದು ಶಿಕ್ಷಣದ ಅಥವಾ ಅನುಭವದ ಪಾಠ ನಮಗೆ ಸಿಗುವುದು ಎಂದು ಹೇಳಿದರು.
ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾದ ಲ. ಸತೀಶ್ ಕುಮಾರ್ ಆಳ್ವ ಇರಾ ಬಾಳಿಕೆ ಮಾತನಾಡಿ, ಸಾಕಷ್ಟು ಸಾಹಿತಿಗಳನ್ನು ಕೊಡುಗೆಯಾಗಿ ನೀಡಿರುವ ಮಂಚಿಗೆ 23ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಯೋಜನೆಗೆ ಮಂಚಿ – ಕೊಳ್ನಾಡು ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಮೂಲಕ ಅವಕಾಶ ನೀಡಿರುವುದು ನಮಗೆ ಹೆಮ್ಮೆಯಾಗಿದೆ.” ಎಂದರು.
ಸಂಕಪ್ಪ ಶೆಟ್ಟಿ , ಸರಪಾಡಿ ಅಶೋಕ್ ಕುಮಾರ್ ಶೆಟ್ಟಿ ಅವರು ಮಾತನಾಡಿದರು.ಸಾಹಿತ್ಯಾಭಿಮಾನಿಗಳು, ತಾಲೂಕು ಘಟಕದ ಪದಾಧಿಕಾರಿಗಳು, ಸ್ವಾಗತ ಸಮಿತಿಯ ಪದಾಧಿಕಾರಿಗಳು, ಮಂಚಿ ಕೊಳ್ನಾಡು ಪ್ರೌಢಶಾಲಾ ಮುಖ್ಯ ಶಿಕ್ಷಕಿ ಸುಶೀಲಾ ವಿಟ್ಲ, ಪ್ರೌಢಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಬಾಲಕೃಷ್ಣ ಸರ್ಕಳ ಉಪಸ್ಥಿತರಿದ್ದರು.
ಸಮಿತಿಯ ಪದಾಧಿಕಾರಿಗಳ ಮಾಹಿತಿ ಹಾಗೂ ಜವಾಬ್ದಾರಿಯ ಕುರಿತಾಗಿ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ.ಡಿ ಮಂಚಿ ಇವರು ಮಾಹಿತಿ ನೀಡಿದರು. ಸ್ವಾಗತ ಸಮಿತಿಯ ಪ್ರಧಾನ ಸಂಯೋಜಕರಾದ ರಾಮ್ ಪ್ರಸಾದ್ ರೈ ತಿರುವಾಜೆ ಸ್ವಾಗತಿಸಿದರು.
ತಾಲೂಕು ಘಟಕದ ಗೌರವ ಕಾರ್ಯದರ್ಶಿ ಲ. ರಮಾನಂದ ನೂಜಿಪ್ಪಾಡಿ ವಂದಿಸಿದರು. ಶಿಕ್ಷಕ ಹರಿಪ್ರಸಾದ್ ಕುಲಾಲ್ ನಾರ್ಶ ಕಾರ್ಯಕ್ರಮ ನಿರ್ವಹಿಸಿದರು.