ಬೊಂಡಂತಿಲ: ತಾರಿಗುಡ್ಡೆ ಬೇಬಿ ಪೂಜಾರಿ ಕುಟುಂಬಕ್ಕೆ 6.40 ಲಕ್ಷ ಮೊತ್ತದ ಮನೆ ಕಟ್ಟಿಸಿಕೊಟ್ಟ ಯುವವಾಹಿನಿ ಸಂಸ್ಥೆ

ಬಂಟ್ವಾಳ : ಯುವವಾಹಿನಿ ಸಂಸ್ಥೆ ಬಡವರ ಪಾಲಿಗೆ ಆಸೆರೆಯ ದೇಗುಲ, ಎಲ್ಲಿ ಕಷ್ಟ ಇದೆ ಅಲ್ಲಿ ಯುವವಾಹಿನಿ ಸಂಸ್ಥೆ ಇರುತ್ತದೆ. ಹೌದು ಈ ಯುವಕರ ಸಂಘದ ಬಲ ಸೇವೆ. ಜನರ ಸೇವೆ ನಮ್ಮ ಉಸಿರು ಎಂದು ಬದುಕುತ್ತಿರುವ ಸಂಸ್ಥೆ. ಈ ಬಾರಿ ಬೊಂಡಂತಿಲ ಗ್ರಾಮದ ತಾರಿಗುಡ್ಡೆ ನಿವಾಸಿ ಬೇಬಿ ಪೂಜಾರಿ ಕುಟುಂಬಕ್ಕೆ ಯುವವಾಹಿನಿ ಸಂಸ್ಥೆಯು ಸುಮಾರು 6.40 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ನೂತನ ಮನೆಯನ್ನು ಹಸ್ತಾಂತರಿಸಲಾಯಿತು. ಉದ್ಯಮಿ ದಯಾನಂದ ಬಂಗೇರ ಅವರು ಮನೆಯಲ್ಲಿ ದೀಪ ಬೆಳಗಿವ ಮೂಲಕ ಮನೆಯನ್ನು ಉದ್ಘಾಟಿಸಿದರು.
ಇದೇ ವೇಳೆ ಅಶಕ್ತ ಕುಟುಂಬಕ್ಕೆ ಮನೆ ಹಸ್ತಾಂತರಿಸಿ ಮಾತನಾಡಿದ ಯುವವಾಹಿನಿ ಕೇಂದ್ರ ಸಮಿತಿಯ ಸಲಹೆಗಾರ ಡಾ.ಎನ್.ಟಿ.ಅಂಚನ್ ಮಾನವತಾವಾದಿ ನಾರಾಯಣಗುರುಗಳ ಸಂದೇಶದಂತೆ ಯುವವಾಹಿನಿ ಮಾಡುತ್ತಿರುವ ಸಮಾಜಮುಖಿ ಕಾರ್ಯ ಶ್ಲಾಘನೀಯ ಎಂದರು.
ಕನಸು ನನಸಾಗಿರುವುದು ಸಂತಸ ತಂದಿದೆ : ಜಯರಾಮ ಪೂಜಾರಿ ಬಾಳಿಲ
ಹೃದಯಕ್ಕೆ ಸಂಬಂಧಿಸಿದ ಕಾಯಿಲೆಯಿಂದ ದುಡಿಯಲಾಗದೆ ಮನೆಯಲ್ಲಿರುವ ಅನಾರೋಗ್ಯ ಪೀಡಿತ ಗಂಡ, ಯಾವುದೇ ಕ್ಷಣದಲ್ಲಿ ಕುಸಿದು ಬೀಳುವ ಸ್ಥಿತಿಯಲ್ಲಿದ್ದ ಮನೆ, ಬೀಡಿ ಕಟ್ಟಿ ಮನೆ ನಿಭಾಯಿಸುವ ಸಂಕಷ್ಟ ಹಾಗೂ ಅಶಕ್ತ ಕುಟುಂಬದ ಜವಾಬ್ದಾರಿ ಹೊತ್ತ ಬೇಬಿ ಪೂಜಾರಿಯವರಿಗೆ ಯುವವಾಹಿನಿ ಸದಸ್ಯರು ಹಾಗೂ ದಾನಿಗಳ ನೆರವಿನಿಂದ ಸುಮಾರು ರೂ 6.40 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಿ ಕುಟುಂಬಕ್ಕೆ ಹಸ್ತಾಂತರಿಸಿರುವುದು ನಿಜಕ್ಕೂ ಯುವವಾಹಿನಿಯ ಸಂತಸದ ಕ್ಷಣ ಎಂದು ಮನೆ ನಿರ್ಮಾಣದ ಸಂಪೂರ್ಣ ಮೇಲುಸ್ತುವಾರಿ ವಹಿಸಿಕೊಂಡ ಯುವವಾಹಿನಿ ಕೇಂದ್ರ ಸಮಿತಿಯ ಸಮಾಜ ಸೇವಾ ನಿರ್ದೇಶಕ ಜಯರಾಮ ಪೂಜಾರಿ ಬಾಳಿಲ ತಿಳಿಸಿದರು.
ನಾರಾಯಣಗುರುಗಳ ಆಶೀರ್ವಾದದಿಂದ ಮನೆಯು ನಂದಾದೀಪವಾಗಿ ಬೆಳಗಲಿ ಎಂದುಯುವವಾಹಿನಿ ಕೇಂದ್ರ ಸಮಿತಿಯ ಸಲಹೆಗಾರರು,ಹಿರಿಯ ನ್ಯಾಯವಾದಿ ಟಿ.ನಾರಾಯಣ ಪೂಜಾರಿ ಶುಭ ಹಾರೈಸಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಹರೀಶ್ ಕೆ ಪೂಜಾರಿ ಮಾತನಾಡಿ, ಸೇವಾ ಮನೋಭಾವದಿಂದ ಮನೆ ನಿರ್ಮಾಣದಲ್ಲಿ ಸಹಕಾರ ನೀಡಿದ ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಗದೀಶ್ಚಂದ್ರ ಡಿ.ಕೆ, ಕೋಶಾಧಿಕಾರಿ ಹರೀಶ್ ಪಚ್ಚನಾಡಿ, ಉಪಾಧ್ಯಕ್ಷ ಅಶೋಕ್ ಕುಮಾರ್ ಪಡ್ಪು, ಜತೆ ಕಾರ್ಯದರ್ಶಿ ರೇಖಾ ಗೋಪಾಲ್, ಕಾರ್ಯಕಾರಿ ಸಮಿತಿ ಸದಸ್ಯರು, ಮಾಜಿ ಅಧ್ಯಕ್ಷರು ಉಪಸ್ಥಿತರಿದ್ದರು.