ಗಣೇಶ್ ಕೆ. ಶೆಟ್ಟಿ ಸಾರಥ್ಯದಲ್ಲಿ ತುಳುಕೂಟ ಗೋವಾ ಘಟಕದ ಲೋಕಾರ್ಪಣೆ

ಗೋವಾದ ತುಳುವರನ್ನು ಸಂಘಟಿಸಿ ಗಣೇಶ್ ಕೆ. ಶೆಟ್ಟಿ ಇರ್ವತ್ತೂರು ಅಧ್ಯಕ್ಷತೆಯಲ್ಲಿ ರಚಿಸಲ್ಪಟ್ಟಿರುವ ತುಳುಕೂಟ ಗೋವಾ ಘಟಕವು ಅದ್ದೂರಿಯಾಗಿ ಲೋಕಾರ್ಪಣೆಗೊಂಡಿದೆ.
ಈ ಕಾರ್ಯಕ್ರಮದಲ್ಲಿ ತುಳುಕೂಟ ಗೋವಾದ ಅಧ್ಯಕ್ಷ ಗಣೇಶ್ ಕೆ. ಶೆಟ್ಟಿ ಇರ್ವತ್ತೂರು ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದ್ದು, ಮುಂಬೈ ಮತ್ತು ಬೆಂಗಳೂರಿನಲ್ಲಿ ತುಳುವರು ತುಳುವರ ಸಂಘಗಳನ್ನು ಕಟ್ಟಿಕೊಂಡು ಕಾರ್ಯಕ್ರಮಗಳನ್ನು ಸಂಘಟಿಸುವ ಮೂಲಕ ಅವರು ತುಳುನಾಡಿನಲ್ಲೇ ಇರುವಂತಹ ಅನುಭವ ಪಡೆದಿದ್ದಾರೆ ಎಂದರು.
ಅದೇ ರೀತಿ ಗೋವಾದಲ್ಲೂ ತುಂಬಾ ಜನ ತುಳುವರಿದ್ದಾರೆ. ಅವರನ್ನು ಸಂಘಟಿಸುವ ಅವಕಾಶವಿರಲಿಲ್ಲ. ಯಾರಾದರೂ ತುಳುವಿನಲ್ಲಿ ಮಾತನಾಡುವುದನ್ನು ಕೇಳಿದರೆ, ಯಾವ ಊರು? ಎಂದು ಕೇಳುವಷ್ಟು ಮಾತುಕತೆ ಮಾತ್ರ ನಡೆಯುತ್ತಿತ್ತು. ಅದಕ್ಕಿಂತ ಮುಂದೆ ಹೋಗುತ್ತಿರಲಿಲ್ಲ. ಹೀಗಾಗಿ ತುಳುವರನ್ನು ಸಂಘಟಿಸಲು ಹಲವರ ಬೆಂಬಲ ಪಡೆದು ಎರಡು ತಿಂಗಳಿನ ಕೂಸು ಈ ಸಂಘಟನೆಯನ್ನು ಕಟ್ಟಲಾಗಿದೆ ಎಂದು ಗಣೇಶ್ ಕೆ. ಶೆಟ್ಟಿ ಇರ್ವತ್ತೂರು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಕಾರ್ಕಳ ಶಾಸಕ ಸುನಿಲ್ ಕುಮಾರ್, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಉದ್ಯಮಿ ಶಶಿಧರ್ ಶೆಟ್ಟಿ ಬರೋಡ, ಐಸಿರದ ಮದಿಪು ಮಂಡನೆ ಮಾಡಿದ ದಿನೇಶ್ ರೈ, ಕಂಬಳ ಸಮಿತಿಯ ಕಾರ್ಯಾಧ್ಯಕ್ಷ ಕೆ ಗುಣಪಾಲ ಕಡಂಬ, ನಾಟಕ, ಸಿನಿಮಾ ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್ಬೈಲ್, ಸುಧಾಕರ ಶೆಟ್ಟಿ ನೆಲ್ಲಿಕಟ್ಟೆ, ತುಳುಕೂಟ ಬೆದ್ರ ಅಧ್ಯಕ್ಷ ಧನಕೀರ್ತಿ ಬಲಿಪ, ನಟ ಪ್ರಸನ್ನ ಶೆಟ್ಟಿ ಬೈಲೂರು, ತುಳುಕೂಟ ಗೋವಾದ ಗೌರವಾಧ್ಯಕ್ಷ ಸದಾನಂದ ಶೆಟ್ಟಿ ಬೆಳ್ವಾಯಿ, ತುಳುಕೂಟ ಗೋವಾದ ಗೌರವಾಧ್ಯಕ್ಷ ಚಂದ್ರಹಾಸ ಅಮೀನ್, ವಿಜಯೇಂದ್ರ ಶೆಟ್ಟಿ, ತುಳುಕೂಟ ಗೋವಾದ ಕಾರ್ಯದರ್ಶಿ ಶಶಿಧರ ನಾಯ್ಕ್, ಖಜಾಂಚಿ ಪ್ರಶಾಂತ್ ಜೈನ್, ಸಂಯೋಜಕ ಅಶೋಕ್ ಶೆಟ್ಟಿ ಮುಡಾರು ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ನಿತೇಶ್ ಶೆಟ್ಟಿ ಎಕ್ಕಾರ್ ನಿರೂಪಿಸಿದರು. ಈ ವೇಳೆಯಲ್ಲಿ ಶಿವಧೂತೆ ಗುಳಿಗೆ ನಾಟಕ ಪ್ರದರ್ಶನವಾಯಿತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ತುಳು ಸಂಸ್ಕೃತಿಗೆ ಸಂಬಂಧಿಸಿದ ವಸ್ತು ಪ್ರದರ್ಶನವೂ ನಡೆಯಿತು.